ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಜೇಡ ಜಗತ್ತು

Last Updated 4 ಡಿಸೆಂಬರ್ 2017, 7:16 IST
ಅಕ್ಷರ ಗಾತ್ರ

ಚಾಮರಾಜನಗರ: ಹೆಣ್ಣು ನವಿಲನ್ನು ಒಲಿಸಿಕೊಳ್ಳಲು ಗಂಡು ನವಿಲು ಗರಿಬಿಚ್ಚಿ ನರ್ತಿಸಿದಂತೆ ಬಣ್ಣಬಣ್ಣದ ಗರಿಗಳನ್ನು ಅವಿತಿಟ್ಟುಕೊಂಡ ಜೇಡ ಗಳೂ ಹೆಣ್ಣು ಜೇಡಗಳೆದುರು ಅವುಗಳನ್ನು ಹರವಿಗೊಂಡು ನರ್ತಿಸುತ್ತವೆ. ಆ ಜೇಡದ ನರ್ತನ ಇಷ್ಟವಾಯಿತೋ, ಅಲ್ಲಿಯೇ ಎರಡರ ಸಮಾಗಮ. ಒಲವು ಮೂಡದಿದ್ದರೆ ಆ ಗಂಡು ಜೇಡ ತಕ್ಷಣವೇ ಹೆಣ್ಣು ಜೇಡದ ಆಹಾರವಾಗುತ್ತದೆ...

ಹೀಗೆ ಪ್ರಕೃತಿಯ ವಿಶಿಷ್ಟ ಸೃಷ್ಟಿಗಳಲ್ಲಿ ಒಂದಾದ ಜೇಡ ಪ್ರಭೇದಗಳ ಕುರಿತು ವಿಡಿಯೊದೊಂದಿಗೆ ವಿವರಿಸುತ್ತಿದ್ದರೆ, ಕುತೂಹಲದಿಂದ ನಿಬ್ಬೆರಗಾಗಿ ನೋಡು ತ್ತಿದ್ದ ಮಕ್ಕಳು ‘ವಾವ್‌’ ಎಂಬ ಉದ್ಗಾರ ತೆಗೆದರು.

ಹೋಮಿಯೊ ಹನಿ ಕ್ಲಿನಿಕ್‌ ಮತ್ತು ರಿಸರ್ಚ್‌ ಸೆಂಟರ್‌, ರೋಟರಿ ಕ್ಲಬ್‌ನ ಸಹಯೋಗದೊಂದಿಗೆ ನಗರ ದಲ್ಲಿ ಭಾನುವಾರ ಆಯೋಜಿಸಿದ್ದ ಜೇಡಗಳ ವೈವಿಧ್ಯಮಯ ಲೋಕ ವನ್ನು ಪರಿಚಯಿಸುವ ‘ಊರ್ಣನಾಭವನಿಗೊಂದು ನಮಸ್ಕಾರ’ ಉಪನ್ಯಾಸ ಮತ್ತು ಛಾಯಾಚಿತ್ರ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು.

ಬೇರೆ ಬೇರೆ ವೃತ್ತಿಯಲ್ಲಿದ್ದರೂ, ಹವ್ಯಾಸವಾಗಿ ಜೇಡಗಳ ಅಧ್ಯಯನ ನಡೆಸುತ್ತಿರುವ ಡಾ. ಅಭಿಜಿತ್‌, ಆರ್‌. ಪವನ್‌, ಸುಮುಖ ಜಾವಗಲ್‌ ಮತ್ತು ವಿಪಿನ್ ಬಾಳಿಗ ಅವರು ತೆಗೆದ ಅಪರೂಪದ ಮತ್ತು ವಿಶಿಷ್ಟ ಜೇಡಗಳ ಛಾಯಾಚಿತ್ರಗಳು ಮಕ್ಕಳು ಮತ್ತು ವಯಸ್ಕರನ್ನು ವಿಸ್ಮಯಲೋಕಕ್ಕೆ ಕರೆದೊಯ್ದವು.

ಇವೆಲ್ಲವೂ ಮೈಸೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ತೆಗೆದ ಚಿತ್ರಗಳು ಎಂದು ವಿವರಿಸಿದಾಗ, ನಾವಿರುವ ಪರಿಸರದಲ್ಲಿಯೇ ಇಷ್ಟೊಂದು ವೈವಿಧ್ಯಮಯ ಜೇಡಗಳಿವೆಯೇ ಎಂದು ಮಕ್ಕಳು ಮತ್ತಷ್ಟು ಅಚ್ಚರಿಗೊಂಡರು.

‘ಇದು ಏಡಿ ಜೇಡ. ನೋಡಲು ಏಡಿಯಂತಿರುವ ಇದು, ಅದರಂತೆಯೇ ಅಡ್ಡಡ್ಡ ಚಲಿಸುತ್ತದೆ. ಶಂಖು ಹುಳುವಿನಾಕಾರದ ಜೇಡ, ಎಲೆಗೆ ಅಂಟಿಕೊಂಡರೆ ಥೇಟು ಶಂಖು ಹುಳುವಿನ ಥರವೇ ಕಾಣಿಸುತ್ತದೆ. ಇನ್ನೊಂದು ತೋಳ ಜೇಡ. ನೋಡಲು ತೋಳದ ತದ್ರೂಪು. ಚೇಳದಂತಿರುವ ಜೇಡ, ಮಂಗನನ್ನು ಹೋಲುವ ಜೇಡ...’ ಹೀಗೆ ಪ್ರದರ್ಶಕರು ಜೇಡದ ವೈವಿಧ್ಯ, ಅವುಗಳ ಕುಟುಂಬ, ಅವು ಬೇಟೆಯಾಡುವ ಬಗೆ ಮುಂತಾದ ವಿವರಗಳನ್ನು ನೀಡುತ್ತಿದ್ದರೆ ಮಕ್ಕಳು ತದೇಕಚಿತ್ತದಿಂತ ಕೇಳಿಸಿಕೊಳ್ಳುತ್ತಿದ್ದರು.

‘ಭಾರತದಲ್ಲಿ ಇರುವ ಯಾವ ಜೇಡವೂ ವಿಷಕಾರಿಯಲ್ಲ. ಜೇಡ ಕಂಡರೆ ಹೆದರುವ ಅಗತ್ಯವಿಲ್ಲ. ಜೇಡಗಳು ಪರಿಸರಕ್ಕೆ ಪೂರಕ. ಜಿರಳೆ ಕಾಟ ತಪ್ಪಿಸಲು ಮನೆಗೆ ಜೇಡಗಳನ್ನು ತಂದು ಸಾಕಿದವರಿದ್ದಾರೆ. ಕೆಲವೇ ದಿನಗಳಲ್ಲಿ ಜಿರಳೆಗಳನ್ನು ತಿಂದುಹಾಕುವ ಇವು, ಬಲೆಯನ್ನು ನೇಯುವುದಿಲ್ಲ. ಹೀಗಾಗಿ ಮನೆಯ ಅಂದಕ್ಕೆ ತೊಂದರೆಯೂ ಆಗುವುದಿಲ್ಲ’ ಎಂದು ಸುಮುಖ ಜಾವಗಲ್ ವಿವರಿಸಿದರು.

ಚಿತ್ರಗಳ ಮೂಲಕ ಜೇಡಗಳ ಕುಟುಂಬದ ಮಾಹಿತಿ ನೀಡಿದ ಡಾ. ಅಭಿಜಿತ್, ಪೋರ್ಷಿಯಾ ಫಿಮ್‌ಬ್ರಿಯೆಟಾ ಎಂಬ ಪ್ರಭೇದದ ಚಾಣಾಕ್ಷ ಜೇಡ ಬೇಟೆಯಾಡುವ ಬಗೆಯನ್ನು ವಿಡಿಯೊದಲ್ಲಿ ತೋರಿಸುತ್ತಿದ್ದಾಗ ಮಕ್ಕಳ ಕಣ್ಣು ಪರದೆಯಿಂದ ಆಚೀಚೆ ಹರಿದಾಡಲಿಲ್ಲ.

ಮಕ್ಕಳ ಜತೆ ಪೋಷಕರೂ ಜೇಡಗಳ ಕುರಿತಾದ ಪ್ರಶ್ನೆಗಳನ್ನು ಮುಂದಿಟ್ಟು ಪರಿಹರಿಸಿಕೊಂಡರು. ಹಿರಿಯ ರಂಗಕರ್ಮಿ ಕೆ. ವೆಂಕಟರಾಜು, ರೋಟರಿ ಸಂಸ್ಥೆ ಅಧ್ಯಕ್ಷ ಸುಭಾಷ್‌, ಛಾಯಾಗ್ರಾಹಕರ ಸಂಘದ ಗಣೇಶ್ ದೀಕ್ಷಿತ್, ಹೋಮಿಯೊಪಥಿ ವೈದ್ಯ ಡಾ. ಗುರುಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT