ಅರಸೀಕೆರೆ: ಹೊಸ್ತಿಲ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಸುಕ್ಷೇತ್ರ ಯಾದಾಪುರ ಜೇನುಕಲ್ ಬೆಟ್ಟದ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಭಾನುವಾರ ಬಂದಿದ್ದರು.
ಬೆಳಿಗ್ಗೆಯಿಂದಲೇ ಸಿದ್ದೇಶ್ವರ ಸ್ವಾಮಿಯ ಪಾದುಕೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಬೆಂಗಳೂರು, ಮೈಸೂರು, ಚಿತ್ರದುರ್ಗ,ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 5,000ಕ್ಕೂ ಹೆಚ್ಚು ಭಕ್ತರು ಬಂದು ದೇವರ ದರ್ಶನ ಮಾಡಿದರು.
ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾರ್ಚನೆ, ನೂರೊಂದೆಡೆ ಸೇವೆ ನೆರವೇರಿತು. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿದ್ದ ಭಕ್ತರು ಉಪವಾಸದಿಂದ ಕ್ಷೇತ್ರಕ್ಕೆ ಬಂದು ನೂರಾರು ಮೆಟ್ಟಿಲುಗಳ ಬೆಟ್ಟ ಹತ್ತಿ ಪಾದುಕೆ ಮುಂದೆ ಕರ್ಪೂರ ಹಚ್ಚಿ ಹರಕೆ ತೀರಿಸಿದರು. ಕೆಲವು ಭಕ್ತರು ನಗರದಿಂದ 5.ಕಿ.ಮೀ. ದೂರವಿರುವ ಯಾದಾಪುರಕ್ಕೆ ನಡೆದುಕೊಂಡೇ ಬಂದು ಹರಕೆ ತೀರಿಸಿದರು.
ಭಕ್ತರಿಗೆ ದೇವಾಲಯ ಸಮಿತಿಯವರು ನಿರಂತರ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಿದ್ದರು. ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್, ಗ್ರಾಮಾಂತರ ಸಿಪಿಐ ಸಿದ್ರಾಮೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ–ಬಸ್ತ್ ಮಾಡಲಾಗಿತ್ತು. ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.