ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೆ ನಿಲ್ಲುವ ತವಕ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮರುಮಕಿಂದಪಲ್ಲಿಯ ಕೆರೆದಂಡೆ ಯಲ್ಲಿ ಕುಳಿತಿದ್ದ ಮಗುವಿನ ಕೈಲಿ ಕನ್ನಡ ಪುಸ್ತಕವಿತ್ತು. ಮೀನುಗಳಿಂದ ಕಾಲು ನೆಕ್ಕಿಸಿಕೊಳ್ಳುವ ಸುಖ ಅನುಭವಿಸುತ್ತಾ ನೀರನ್ನೊಮ್ಮೆ ನೋಡಿದಾಗ ಅದರಲ್ಲಿ ಎತ್ತರದ ಗುಡ್ಡ, ಸುಡು ಕೆಂಡದಂತಿದ್ದ ಸೂರ್ಯ, ಕೆಂಬಣ್ಣದ ಮೋಡ, ಅದರಂಚಿನ ಬೆಳ್ಳಿಗೆರೆಯ ಚೌಕಟ್ಟಿನಲ್ಲಿ ಒಂದಿಷ್ಟು ಜನರು ಲಗುಬಗೆಯಿಂದ ಮನೆಗಳನ್ನು ಕಟ್ಟುತ್ತಿದ್ದುದು ಕಾಣಿಸಿತು.

‘ಊರಿನಿಂದ ಇಷ್ಟು ದೂರ ಮನೆಗಳನ್ನು ಯಾಕೆ ಕಟ್ತಿದ್ದಾರೆ?’ ಆ ಮಗುವನ್ನು ಮಾತಿಗೆಳೆದೆ. ತೊದಲು ಮಾತಿನಲ್ಲಿ ಮುದ್ದುಮುದ್ದಾಗಿ ತೋಚಿ ದಷ್ಟು ಹೇಳಿ ಅದು ಓಡಿಹೋಯಿತು. ಅದು ಹೋದ ದಿಕ್ಕನ್ನೇ ನಿಟ್ಟಿಸಿದಾಗ ಒಂದಿಷ್ಟು ಜನರು ಮರಳು ಸೋಸುತ್ತಿದ್ದರು. ಅಲ್ಲಿದ್ದ ಸರೋಜಾ ತಮ್ಮ ಕಥೆ ಬಿಡಿಸಿಟ್ಟರು.

ಈಗ್ಗೆ ಹತ್ತು ವರ್ಷಗಳ ಹಿಂದೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಭಾರೀ ಮಳೆ ಸೃಷ್ಟಿಸಿದ ಪ್ರವಾಹಕ್ಕೆ ನೂರಾರು ಗುಡಿಸಲುಗಳು ಕೊಚ್ಚಿಹೋದವು. ನೆಲೆ ಕಳೆದುಕೊಂಡು ಅಲೆಮಾರಿಗಳಾದ ಕೆಲವರು ಊರು-ಕಾಡು ಅಲೆಯುತ್ತಾ ನಾಲ್ಕು ವರ್ಷಗಳ ಹಿಂದೆ ಕರ್ನಾಟಕದ ಗಡಿದಾಟಿ, ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡುಗು ಗ್ರಾಮದ ಸಮೀಪ ಟೆಂಟುಗಳನ್ನು ಹಾಕಿಕೊಂಡರು. ಹಸಿದು ಕಂಗಾಲಾಗಿದ್ದ ಅಲೆಮಾರಿಗಳಿಗೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಗುತ್ತಿಗೆ ದಾರರು ಪುಡಿಗಾಸಿನ ಆಸೆ ತೋರಿ, ಕೆಲಸಕ್ಕೆ ಹಚ್ಚಿದರು.

‘ಎಲ್ಲಿಂದಲೋ ಬಂದು ಕಾಡು ಹಾಳು ಮಾಡ್ತಿದ್ದಾರೆ’ ಎಂದು ಸಿಟ್ಟಿಗೆದ್ದ ಗ್ರಾಮಸ್ಥರು ಅಲೆಮಾರಿ ಗಳನ್ನು ರಾಜ್ಯದ ಗಡಿದಾಟಿಸಿದರು. ಹೀಗೆ ಮತ್ತೆಮತ್ತೆ ನೆಲೆ ಕಳೆದುಕೊಳ್ಳುವುದು ಅವರಿಗೆ ರೂಢಿಯಾಗಿಬಿಟ್ಟಿತ್ತು. ಅಲ್ಲಿ-ಇಲ್ಲಿ ತಿರುಗಿ, ಗುತ್ತಿಗೆದಾರರ ಶೋಷಣೆಗೆ ಹೈರಾಣಾಗಿ, ಬಸವಳಿದು ಮತ್ತೆ ರಾಜ್ಯದ ಗಡಿದಾಟಿ ಬಂದು ಟೆಂಟುಗಳನ್ನು ಹಾಕಿಕೊಂಡರು.

ಈ ಬಾರಿ ಅಲೆಮಾರಿಗಳ ಪೈಕಿ ಕೆಲವರು ತುಸು ಧೈರ್ಯಮಾಡಿ ಊರೊಳಗೆ ಬಂದರು. ಅವರ ಜೊತೆಗೆ ಮೊದಲು ಮಾತನಾಡಿದವರು ಮುದಿಮಡುಗು ಗ್ರಾಮದ ನಾರಾಯಣಸ್ವಾಮಿ.

‘ಏನಾದ್ರೂ ಕೆಲಸ ಕೊಡಿ ಸ್ವಾಮಿ, ಹೇಳಿದಂತೆ ಕೇಳಿಕೊಂಡು ಇರ್ತೀವಿ, ತುಂಬಾ ಕಷ್ಟವಾಗಿಬಿಟ್ಟಿದೆ’ ಎನ್ನುವ ವಿನಂತಿ ಕೇಳಿಸಿ ಕೊಂಡ ನಾರಾಯಣಸ್ವಾಮಿ ಅವರಲ್ಲಿ ರೈತರಿಗೆ ಸಹಜ ಸ್ವಭಾವ ಎನಿಸಿರುವ ಕಾರುಣ್ಯ ಮೈದುಂಬಿತು. ಟೊಮೆಟೊ ತೋಟಗಳಿಗೆ ಕರೆದೊಯ್ದು ಬೇಸಾಯದ ಕೆಲಸಗಳನ್ನು ಕಲಿಸಿದ್ದಲ್ಲದೇ, ಕೈ ತುಂಬಾ ಕೂಲಿ ಕೊಟ್ಟರು. ಊರಿನ ಇತರರು ಇವರನ್ನು ಕೂಲಿ ಕೆಲಸಕ್ಕೆ ಬರಹೇಳಲು ಆರಂಭಿಸಿದರು. ಊರಿನವರು ತೋರಿದ ಪ್ರೀತಿ ವಿಶ್ವಾಸಕ್ಕೆ ಮನಸೋತ ಅಲೆಮಾರಿಗಳ ಮನದಲ್ಲಿ ಅಲ್ಲಿಯೇ ಸ್ಥಿರವಾಗಿ ನೆಲೆಸುವ ಕನಸು ಚಿಗುರೊಡೆಯಿತು.

ಅವರ ಕನಸಿನ ಸಾಕಾರಕ್ಕೆ ‘ನಮ್ಮ ಮಕ್ಕಳು’ ಮತ್ತು ‘ಹಸಿರು ಹೊನ್ನು’ ಸಂಸ್ಥೆಗಳು ಪಣತೊಟ್ಟವು. ಐದು ಕುಟುಂಬಗಳ ಹತ್ತೊಂಬತ್ತು ಜನರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆ ತಯಾರಾಯಿತು. ಶ್ರೀನಿವಾಸಪುರದ ನಿವೃತ್ತ ಶಿಕ್ಷಕ, ಸಾಹಿತಿ ಸ.ರಘುನಾಥ ಅವರು ದಾನಿಗಳ ನೆರವು ದೊರಕಿಸಿಕೊಟ್ಟರು.ಈಗ ಮರುಮಕಿಂದಪಲ್ಲಿ ಗುಡ್ಡದ ಬುಡದಲ್ಲಿ ಅಲೆಮಾರಿ ಗಳು ಅವರ ಮನೆಗಳನ್ನು ಅವರೇ ಕಟ್ಟಿಕೊಳ್ಳುತ್ತಿದ್ದಾರೆ.

ಆಹಾರ, ಕೂಲಿ, ನಿರ್ಮಾಣ ಸಾಮಗ್ರಿ ಒದಗಿಸುವ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರು ನೆರವಾಗುತ್ತಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ನಿರ್ಜನ ಪರಿಸರದಲ್ಲಿ ‘ಹಸಿರು ಹೊನ್ನೂರು’ ನಗಲಿದೆ. ಆಸರೆ ಕೋರಿ ಬಂದವರಿಗೆ ಆಶ್ರಯಕೊಟ್ಟ ನಮ್ಮ ರೈತರ ಸಹೃದಯ ಸ್ಪಂದನವನ್ನು ‘ಹಸಿರು ಹೊನ್ನೂರು’ ಚಿರಸ್ಥಾಯಿ ಮಾಡಲಿದೆ.

ಇಬ್ಬರಿಗೂ ಲಾಭ: ಮಾವು ಸೇರಿದಂತೆ ತರಕಾರಿ ಬೆಳೆ ಗಳಿಗೆ ಶ್ರೀನಿವಾಸಪುರ ತಾಲ್ಲೂಕು ಹೆಸರುವಾಸಿ. ಮುದಿ ಮಡುಗು ಪ್ರದೇಶದಲ್ಲಿ ಟೊಮೆಟೊವನ್ನು ಹೇರಳವಾಗಿ ಬೆಳೆಯುತ್ತಾರೆ. ಕೂಲಿಕಾರ್ಮಿಕರ ಕೊರತೆಯ ಕಾರಣ ರೈತರಿಗೆ ಫಸಲು ತೆಗೆಯುವುದು ಕಷ್ಟವಾಗಿತ್ತು.

‘ಇವರಿಗೆ ಕೃಷಿ ಕೆಲಸ ಗೊತ್ತಿರಲಿಲ್ಲ. ಆದರೆ ಹೇಳಿಕೊಟ್ಟಿದ್ದನ್ನು ಬೇಗ ಕಲಿತರು. ದಿನಕ್ಕೆ 300 ರೂಪಾಯಿ ಕೂಲಿ ಕೊಡ್ತೀವಿ. ಅವರು ಖುಷಿಯಿಂದ ಕೆಲಸ ಮಾಡ್ತಾರೆ. ಹೊಂದಾಣಿಕೆ ಸ್ವಭಾವ, ಸಹಬಾಳ್ವೆಯ ಜಾಣತನ ಇದೆ. ಜಗಳವಾಡುವುದು ಅಪರೂಪ’ ಎಂದು ಅನುಭವ ಹಂಚಿಕೊಂಡರು ನಾರಾಯಣಸ್ವಾಮಿ.

‘ಕಾಡಿನಲ್ಲಿ ಈಚಲುಗರಿ ಕೊಯ್ಯುವಾಗ ದಿನಕ್ಕೆ 50 ರೂಪಾಯಿ ಸಿಕ್ಕಿದರೆ ಹೆಚ್ಚು ಅನಿಸೋದು. ನಾವು ಅನುಭವಿಸಿದ ಕಷ್ಟ ದೇವರಿಗೇ ಪ್ರೀತಿ. ಈಗ ಕೂಲಿ ಸಾಕಷ್ಟು ಸಿಗುತ್ತಿದೆ. ಜನರು ವಿಶ್ವಾಸದಿಂದ ಕಾಣ್ತಿದ್ದಾರೆ’ ಎಂದು ಖುಷಿ ಹಂಚಿಕೊಂಡರು ಅಲೆಮಾರಿಗಳ ಗುಂಪಿನ ಹಿರಿತಲೆ, ಶತಾಯುಷಿ ರಾಜಮ್ಮ.

‘ಈ ಕುಟುಂಬಗಳಿಗೆ ಮೊದಲು ರೇಷನ್‌ ಕಾರ್ಡ್‌ ಸಿಗ ಬೇಕು. ಗ್ರಾಮ ಪಂಚಾಯಿತಿ ವಾಸ ದೃಢೀಕರಣ ಪತ್ರ ಕೊಡಲು ಒಪ್ಪಿದೆ. ಅದನ್ನೇ ಮುಂದಿಟ್ಟು ಆಧಾರ್ ಕಾರ್ಡ್‌ ಮಾಡಿಸಬೇಕು. ಆಮೇಲೆ ಪ್ರತಿಕುಟುಂಬದ ಒಬ್ಬರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು, ವ್ಯವಹರಿಸುವುದನ್ನು ಹೇಳಿಕೊಡಬೇಕು. ಸರ್ಕಾರದ ವಿವಿಧ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕು...’ ಎಂದು ಮುಂದಿನ ಹಾದಿ ವಿವರಿಸಿದರು ‘ಹಸಿರು ಹೊನ್ನು’ ಬಳಗದ ಅಧ್ಯಕ್ಷ ರಾಜಾರೆಡ್ಡಿ.

‘ನೋಡಿ ಸಾ ಅವರಿಗೆ ಕನ್ನಡ ಬರಲ್ಲ, ಕರ್ನಾಟಕದವರೂ ಅಲ್ಲ. ಆದ್ರೆ ನಾವೆಲ್ಲಾ ಭಾರತಾಂಬೆಯ ಮಕ್ಕಳು ಅಲ್ವಾ?’ ಅವರ ಪ್ರಶ್ನೆ ಸಹಜವಾಗಿತ್ತು, ನೇರವಾಗಿತ್ತು, ಸ್ಪಷ್ಟವಾಗಿತ್ತು.

ದುಡಿಮೆಯೇ ದೇವರು: ಮರುಮಕಿಂದಪಲ್ಲಿ ಸಮೀಪ ಅಲೆಮಾರಿಗಳಿಗೆ ನಿರ್ಮಿಸುತ್ತಿರುವ ಮನೆಗಳಿರುವ ಸ್ಥಳಕ್ಕೆ ‘ಹಸಿರು ಹೊನ್ನೂರು’ ಎಂಬ ಹೆಸರಿಡಲು ‘ನಮ್ಮ ಮಕ್ಕಳು’ ಸಂಸ್ಥೆ ನಿರ್ಧರಿಸಿದೆ. ‘ಸಮಾಜದಲ್ಲಿ ದುಡಿಮೆ ಮತ್ತು ಸಹಬಾಳ್ವೆಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಇವರು ಈ ಎರಡೂ ಮೌಲ್ಯಗಳ ಪ್ರತಿನಿಧಿಗಳು. ಮನೆಗಳು ಸಿದ್ಧವಾದ ಮೇಲೆ ನಾಟಿಕೋಳಿ, ಹಸುಗಳನ್ನು ಕೊಡಿಸಬೇಕು ಎಂದು ಕೊಂಡಿದ್ದೇವೆ. ಆ ಮೂಲಕ ದುಡಿಮೆ ನಂಬಿದವರು ಎಂದಿಗೂ ಬಡವರಾಗಿ ಉಳಿಯುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ನಮ್ಮ ಉದ್ದೇಶ’ ಎಂದು ತಮ್ಮ ಕನಸು ಗಳನ್ನು ವಿವರಿಸಿದರು ಅಲೆಮಾರಿಗಳಿಗೆ ಮನೆ ಕಟ್ಟಿಕೊಡಲು ಶ್ರಮಿಸುತ್ತಿರುವ ಸ. ರಘುನಾಥ.

*

ನಿಪ್ಪಟ್ಲು, ಪೆನ್ಸಿಲು ಕೊಡುವ ಮಾವ
‘ಸೂಲಿಗೆ ಒತ್ತಾಯ್ತದೆ. ನಿಪ್ಪಟ್ಲು, ಪೆನ್ಸಿಲು ಕೊಡು’ ಅಂಗಡಿ ಮುಂದೆ ನಿಂತು ಹಕ್ಕು ಚಲಾಯಿಸಿದ ರೋಜಾಳನ್ನು ಕಂಡ ಮುದಿಮಡುಗು ಗ್ರಾಮದ ಚನ್ನಕೇಶವಶೆಟ್ಟಿ ನಗುತ್ತಲೇ, ‘ತಕೋ, ಚಂದಾಗಿ ಓದಬೇಕು ಮತ್ತೆ’ ಎಂದರು. ‘ಸೂಲಿಗೆ ಓಗೋದು ಮತ್ಯಾಕೆ?’ ಎನ್ನುತ್ತಾ ರೋಜಾ ಓಡಿ ಹೋದಳು.

ಅಲೆಮಾರಿ ಕುಟುಂಬಗಳಿಗೆ ಸೇರಿದ ರೋಜಾ, ರಮ್ಯಾ, ಸತೀಶ ಇದೀಗ ಶಾಲೆಗೆ ಹೋಗುತ್ತಿದ್ದಾರೆ. ಈ ಜನಾಂಗದಲ್ಲಿ ಅಕ್ಷರ ಕಲಿತ ಮೊದಲಿಗರು ಇವರು. ಶಾಲೆಗೆ ಹೋಗುವ ಮೊದಲು ಈ ಮಕ್ಕಳು ಚನ್ನಕೇಶವ ಅವರ ಅಂಗಡಿಗೆ ವಿಸಿಟ್ ಹಾಕಿ, ಹಾಜರಿ ಹೇಳುವುದು ಕಡ್ಡಾಯ. ಮಕ್ಕಳನ್ನು ಬರಿಗೈಲಿ ಕಳಿಸುವ ಗುಣ ಅಂಗಡಿ ಶೆಟ್ಟರಿಗೆ ಇಲ್ಲದಿರುವುದು ವಿಶೇಷ.

ಜಾತಿ ತೊಡಕು: ಈ ಅಲೆಮಾರಿಗಳು ಯಾವ ಜಾತಿಗೆ ಸೇರಿದವರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರದೇ ಇರುವುದೂ ಸರ್ಕಾರದ ಯೋಜನೆಗಳ ಲಾಭ ಅವರಿಗೆ ತಲುಪಿಸುವಲ್ಲಿ ತೊಡಕಾಗಿದೆ. ಕೆಲವರ ಪ್ರಕಾರ ಇವರು ‘ಯಾನಾದಿ’ ಜಾತಿಗೆ ಸೇರಿದವರು.

ಈ ಜಾತಿಗೆ ಆಂಧ್ರದಲ್ಲಿ ಪರಿಶಿಷ್ಟ ವರ್ಗದ ಸ್ಥಾನಮಾನವಿದೆ. ಆದರೆ, ಕರ್ನಾಟಕದಲ್ಲಿ ಈ ಜಾತಿಗೆ ಸೇರಿದವರು ಯಾರೂ ಇಲ್ಲ. ಪರಿಶಿಷ್ಟ ವರ್ಗಕ್ಕೆ ಘೋಷಣೆಯಾಗಿರುವ ಸೌಲಭ್ಯಗಳನ್ನು ನಮ್ಮ ರಾಜ್ಯ ಸರ್ಕಾರ ಈ ಅಲೆಮಾರಿಗಳಿಗೆ ಕೊಡಲು ಅವಕಾಶವಿದೆಯೇ ಎಂಬುದರ ಬಗ್ಗೆ ಗೊಂದಲಗಳಿವೆ.

ಹೀಗೆಲ್ಲಾ ನೆರವಾಗಬಹುದು
ನೂರಾರು ಬಡಮಕ್ಕಳನ್ನು ಓದಿಸಿ, ಸ್ವಾವಲಂಬಿಯಾಗಿಸಿರುವ ‘ನಮ್ಮ ಮಕ್ಕಳು’ ಮತ್ತು ‘ಹಸಿರು ಹೊನ್ನು’ ಸಂಸ್ಥೆಗಳು ಇದೀಗ ಅಲೆಮಾರಿಗಳ ಬದುಕಿಗೆ ನೆಲೆ ಕಲ್ಪಿಸುವ ಸಾಹಸಕ್ಕೆ ಕೈಹಾಕಿವೆ. ಅಲೆಮಾರಿಗಳಿಗೆ ನೆಲೆ ಕಲ್ಪಿಸಲು ಹೆಣಗುತ್ತಿರುವ ‘ಹಸಿರು ಹೊನ್ನು’ ಬಳಗದ ಅಧ್ಯಕ್ಷ ರಾಜಾರೆಡ್ಡಿ ಅವರ ಎದುರು ಹತ್ತಾರು ಸವಾಲುಗಳಿವೆ. ನೆರೆ ರಾಜ್ಯದಿಂದ ಬಂದಿರುವ ಐದು ಕುಟುಂಬಗಳ ಹತ್ತೊಂಬತ್ತು ಜನರ ಬಳಿ ಈ ದೇಶದ ಪ್ರಜೆಗಳು ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ದಾಖಲೆ ಇಲ್ಲ. ಅಕ್ಷರ ಜ್ಞಾನದಿಂದಲೂ ಇವರು ಬಲುದೂರ.

ಆಸಕ್ತರು ಕಟ್ಟಡ ನಿರ್ಮಾಣ ಸಾಮಗ್ರಿ, ಆಹಾರ ಧಾನ್ಯ, ಬಟ್ಟೆಗಳು, ವಿದ್ಯಾರ್ಥಿಗಳಿಗೆ ನೆರವು... ಹೀಗೆ ಹಲವು ರೀತಿಯಲ್ಲಿ ನೆರವಾಗಬಹುದು.  ಸ. ರಘುನಾಥ ಅವರ ಸಂಪರ್ಕ ಸಂಖ್ಯೆ: 99805 93921.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT