ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮೀಣ ಪ್ರತಿಭೆಗಳ ವಿಕಾಸಕ್ಕೆ ಅವಕಾಶ ಅಗತ್ಯ’

Last Updated 5 ಡಿಸೆಂಬರ್ 2017, 6:14 IST
ಅಕ್ಷರ ಗಾತ್ರ

ಬೈಂದೂರು: ಪ್ರತಿಭೆ ಇದ್ದೂ ಅವಕಾಶ ವಂಚಿತರಾಗಿ ಮುದುಡುವ ಗ್ರಾಮೀಣ ಎಳೆಯರಿಗೆ ಅಗತ್ಯ ಇರುವುದು ಬಹುಮಾನವಲ್ಲ, ಬದಲಾಗಿ ಅವಕಾಶ. ಅಂತಹ ಅವಕಾಶ ಕಲ್ಪಿಸುವ ಎಲ್ಲ ವಿಧದ ಕಾರ್ಯಕ್ರಮಗಳೂ ಸ್ವಾಗತಾರ್ಹ ಎಂದು ಆಕಾಶವಾಣಿ ಸುಗಮ ಸಂಗೀತಗಾರ ಎಚ್. ಚಂದ್ರಶೇಖರ ಕೆದ್ಲಾಯ ಹೇಳಿದರು.

ನಾಗೂರಿನ ಕುಸುಮಾ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ‘ಕುಸುಮಾಂಜಲಿ–2017’ರ ಆಯ್ಕೆ ಸುತ್ತಿನ ಸಂಗೀತ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದರು.

ಇಂದು ಮಕ್ಕಳ ತಲೆಯ ಮೇಲೆ ಅನಗತ್ಯ ಹೊರೆಗಳನ್ನು ಹೇರಿ ಅವರಲ್ಲಿನ ಲವಲವಿಕೆ, ಭಾವನೆಯನ್ನು ಕೊಲ್ಲಲಾಗುತ್ತಿದೆ. ಎಲ್ಲದರಲ್ಲೂ ಭೌತಿಕ ಪ್ರತಿಫಲ ಬಯಸುವ ಸಮುದಾಯದ ವ್ಯಾವಹಾರಿಕ ನಿಲುವು ಮಕ್ಕಳಲ್ಲಿ ಹುದುಗಿರುವ ಸೃಜನಶೀಲತೆಯನ್ನು ಹೊಸಕಿ ಹಾಕುತ್ತಿದೆ. ಜನರನ್ನು ಮಾನವೀಯಗೊಳಿಸುವುದು ಕಲೆಯ ಉದ್ದೇಶ. ಸಂಗೀತ ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎನ್ನುವುದನ್ನು ಸಮುದಾಯ ಮರೆಯಬಾರದು ಎಂದರು.

ನಿವೃತ್ತ ಶಿಕ್ಷಕಿ ಸುಧಾ ರಾಮಮೂರ್ತಿ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ತಾಲ್ಲೂಕಿನ ಕಿರಿಯ ಕಲಾಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಕಲ್ಪದೊಂದಿಗೆ ಸಂಸ್ಥೆಯು ‘ಗಾನಕುಸುಮ’ದ ತೃತೀಯ ಆವೃತ್ತಿಯನ್ನು ಇದೀಗ ಆರಂಭಿಸುತ್ತಿದೆ.

ಸ್ಪರ್ಧೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಉಪಾಂತ್ಯದಲ್ಲಿ 12 ಸ್ಪರ್ಧಿಗಳನ್ನು ಆಯ್ದು ಅಂತಿಮ ಸ್ಪರ್ಧೆ ನಡೆಲಾಗುವುದು. ಅದರಲ್ಲಿ 8 ಗಾಯಕರನ್ನು ಆಯ್ದು ಡಿ. 24ರಂದು ನಡೆಯುವ ಕುಸುಮಾಂಜಲಿ- 2017ರ ಕಾರ್ಯಕ್ರಮದಲ್ಲಿ ಅವರಿಗೆ ವೃತ್ತಿಪರ ಗಾಯಕರೊಂದಿಗೆ ಹಾಡುವ ಅವಕಾಶ ನೀಡಲಾಗುವುದು. ಈ ಎಂಟು ಮಂದಿಯಲ್ಲಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ವಿಜೇತರಾಗುವ ಇಬ್ಬರಿಗೆ ’ಗಾನಕುಸುಮ 2017’ ಪ್ರಶಸ್ತಿ ನೀಡಲಾಗುವುದು ಎಂದರು. ಮುಂಬೈ ಉದ್ಯಮಿ ಲಕ್ಷ್ಮಣ ಪೂಜಾರಿ, ಗಾಯಕಿ ಪಲ್ಲವಿ ತುಂಗ ಇದ್ದರು. ರೇಷ್ಮಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT