ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಬಾರಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ!

Last Updated 5 ಡಿಸೆಂಬರ್ 2017, 6:31 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿ ಅವಮಾನಿಸಿದ ಘಟನೆ ನಡೆದಿದೆ.

ಎಂದಿನಂತೆ ಸೋಮವಾರ ಬೆಳಗಿನ ಜಾವದ ಜನರು ಎದ್ದು ನೋಡಿದಾಗ ದುಷ್ಕರ್ಮಿಗಳ ಕೃತ್ಯ ಗೊತ್ತಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ದಲಿತ ಸಂಘಟನೆಗಳ ಮುಖಂಡರು, ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಗಾರಂಪಳ್ಳಿಗೆ ತೆರಳಿದ್ದಾರೆ.

‘ಸ್ಥಳಕ್ಕೆ ಬಂದ ಪೊಲೀಸರೊಂದಿಗೆ ಸಂಘಟನೆಯ ಪದಾಧಿಕಾರಿಗಳು ವಾಗ್ವಾದ ನಡೆಸಿ ದ್ದಾರೆ. ಕಳೆದ ವರ್ಷ ಡಿ. 24ರಂದು ಇದೇ ಸ್ಥಳದಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿತ್ತು. ಈಗ ಮತ್ತೆ ಘಟನೆ ಮರುಕಳಿಸಿದೆ. ಇದರಲ್ಲಿ ಪೊಲೀಸರ ವೈಫಲ್ಯವೇ ಕಾರಣ’ ಎಂದು ಮುಖಂಡರು ದೂರಿದರು.

ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆಯನ್ನು ಖಂಡಿಸಿ ತಾಲ್ಲೂಕಿನ ಚಿಮ್ಮಾಈದಲಾಯಿ ಕ್ರಾಸ್‌ನಲ್ಲಿ ರಾಜ್ಯ ಹೆದ್ದಾರಿ 15 ಮತ್ತು 75ರಲ್ಲಿ ಸಂಚಾರ ಸ್ಥಗಿತಗೊಳಿಸಿ ರಸ್ತೆತಡೆ ನಡೆಸಿದರು.

ಸುಮಾರು 2 ತಾಸು ಸಂಚಾರ ಬಂದ್‌ ಆಗಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಂತಿದ್ದವು. ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ ನಂತರ ರಸ್ತೆತಡೆ ವಾಪಸ್‌ ಪಡೆದರು.

ಪ್ರತಿಭಟನೆಯ ನೇತೃತ್ವವನ್ನು ಪಾಮಡುರಂಗ ಲೊಡ್ಡನೋರ್‌, ಗೋಪಾಲ ರಾಂಪುರೆ, ಮಾರುತಿ ಗಂಜಗಿರಿ, ರುದ್ರಮುನಿ ರಾಮತೀರ್ಥಕರ್‌, ಓಮನರಾವ್‌ ಕೊರವಿ, ಶಿವಯೋಗಿ ರುಸ್ತಂಪುರ, ಆನಂದ ಟೈಗರ್‌, ಕಾಶಿನಾಥ ಸಿಂಧೇ, ಜಗದೇವ ಗೌತಮ್‌, ಸೋಮಶೇಖರ ಬೆಡಕಪಳ್ಳಿ, ಮಲ್ಲಿಕಾರ್ಜುನ ಗುಲಗುಂಜಿ, ಸಂತೋಷ ಗುತ್ತೇದಾರ, ರವಿಕುಮಾರ ರುಸ್ತಂಪುರ, ಬಾಬುರಾವ್‌ ಬುಳ್ಳಾ, ಸಂಜೀವಕುಮಾರ ಗಾರಂಪಳ್ಳಿ, ಮಲ್ಲಿಕಾರ್ಜುನ ಗುಲಗುಂಜಿ, ಝೈಭೀಮ ಹೋಳ್ಕರ್‌, ಸುನಿಲ ತ್ರಿಪಾಠಿ ಇದ್ದರು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ವೆಂಕಟೇಶ ದುಗ್ಗನ್‌ ಸ್ವೀಕರಿಸಿದರು.

ಘಟನೆಗೆ ಖಂಡನೆ: ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಎರಡನೇ ಬಾರಿಗೆ ಅವಮಾನಿಸಿದ ದುಷ್ಕೃತ್ಯವನ್ನು ಖಂಡಿಸಿದ ಟಿಎಪಿಸಿಎಂಎಸ್‌ ಅಧ್ಯಕ್ಷ ರಮೇಶ ಯಾಕಾಪುರ, ‘ಇಂತಹ ಘಟನೆಗಳಿಮದ ಸಾಮಾಜಿಕ ಸ್ವಾಸ್ಥ್ಯ ಹಾಳಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ದುಷ್ಕರ್ಮಿಗಳು ಯಾರೇ ಆಗಲಿ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಅಮಾಯಕರಿಗೆ ತೊಂದರೆಯಾಗಬಾರದು’ ಎಂದು ಅವರು ಒತ್ತಾಯಿಸಿದ್ದಾರೆ.

ಆಡಳಿತ ವೈಫಲ್ಯ: ‘ಬಾಬಾ ಸಾಹೇಬರಿಗೆ ಮಾಡಿದ ಅವಮಾನ ಆಡಳಿತ ವೈಫಲ್ಯವಾಗಿದೆ’ ಎಂದು ಖಂಡಿಸಿದ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಗೌತಮ ಬೊಮ್ಮನಳ್ಳಿ, ‘ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದರಿಂದಲೇ ಘಟನೆ ಮರುಕಳಿಸಿದೆ’ ಎಂದು ದೂರಿದ್ದಾರೆ.

ಚಿಂಚೋಳಿ ಬಂದ್‌ ಇಂದು
ಗಾರಂಪಳ್ಳಿ ಸೇರಿದಂತೆ ವಿವಿಧೆಡೆ ಮಹಾಪುರುಷರಿಗೆ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ‘ಚಿಂಚೋಳಿ ಬಂದ್‌’ಗೆ ಕರೆ ನೀಡಲಾಗಿದೆ.

ದುಷ್ಕೃತ್ಯದಲ್ಲಿ ಭಾಗಿಯಾದವರು ಹಾಗೂ ಕಾರಣರಾದವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿ ಬಂದ್‌ ಕರೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

* * 

ಮಹಾಪುರುಷರಿಗೆ ಅವಮಾನಿಸುವುದರಿಂದ ಜನಗಳ ಮಧ್ಯೆ ಬಾಂಧವ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಪೊಲೀಸರು ನಿಷ್ಪಕ್ಷಪಾತದಿಂದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು.
ರಮೇಶ ಯಾಕಾಪುರ,
ಅಧ್ಯಕ್ಷ, ಟಿಎಪಿಸಿಎಂಎಸ್‌ ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT