ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ವಿರೋಧಿ ಸಂಕಲ್ಪ ದಿನ; ಸಕಲ ಸಿದ್ಧತೆ

Last Updated 6 ಡಿಸೆಂಬರ್ 2017, 6:18 IST
ಅಕ್ಷರ ಗಾತ್ರ

ಬೆಳಗಾವಿ: ಶಾಸಕ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಡಿ.6ರಂದು ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ 4ನೇ ವರ್ಷದ ‘ಮೌಢ್ಯ ವಿರೋಧಿ ಸಂಕಲ್ಪ ದಿನ’ ಹಮ್ಮಿಕೊಂಡಿದ್ದು, ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಬೆಳಗಾವಿಯೂ ಸೇರಿದಂತೆ ರಾಜ್ಯದ ಎಲ್ಲ 30 ಜಿಲ್ಲೆಗಳಿಂದಲೂ ಜನರು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ಹೊಂದಿದ ದಿನವನ್ನು ಮೌಢ್ಯ ವಿರೋಧಿ ಸಂಕಲ್ಪ ದಿನವಾಗಿ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಬೇರೂರಿರುವ ಮೌಢ್ಯವನ್ನು ಅಳಿಸಿ ಹಾಕಬೇಕು. ಜನರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಬೇಕು ಎನ್ನುವ ಉದ್ದೇಶದಿಂದ 2014ರಿಂದ ಸಂಕಲ್ಪ ದಿನವನ್ನು ಆಚರಿಸಲಾಗುತ್ತಿದೆ.

ರಾಜ್ಯದ ಪ್ರಗತಿಪರ ಚಿಂತಕರಿಂದ ಉಪನ್ಯಾಸ, ಕಲಾತಂಡಗಳಿಂದ ಕಲಾ ಪ್ರದರ್ಶನ, ವೈಜ್ಞಾನಿಕ ಮನೋಭಾವ ಮೂಡಿಸುವ ನಾಟಕಗಳ ಪ್ರದರ್ಶನಗಳು ದಿನವಿಡೀ ನಡೆಯಲಿವೆ. ದೂರದ ಊರುಗಳಿಂದ ಬರುವವರಿಗೆ ವಾಹನದ ವ್ಯವಸ್ಥೆ, ವಸತಿ, ಉಪಾಹಾರ, ಊಟ, ಚಹಾ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

ಬೃಹತ್‌ ಪೆಂಡಾಲ್‌: ಕಾರ್ಯಕ್ರಮ ನಡೆಯಲಿರುವ ಸದಾಶಿವ ನಗರದ ಸ್ಮಶಾನವನ್ನು ಸ್ವಚ್ಛಗೊಳಿಸಲಾಗಿದೆ. ಗಿಡಗಂಟಿಗಳನ್ನು ತೆರವುಗೊಳಿಸಿ, ಬೃಹದಾಕಾರದ ಪೆಂಡಾಲ್‌ ಹಾಕಲಾಗಿದೆ. ಅಂದಾಜು 4,000ಕ್ಕಿಂತಲೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ದೊಡ್ಡದಾದ ವೇದಿಕೆಯನ್ನು ನಿರ್ಮಿಸಲಾಗಿದೆ. ಎಲ್‌ಸಿಡಿ ಪರದೆ, ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗಿದೆ.

‘ಕುಡಿಯಲು ಶುದ್ಧೀಕರಿಸಿದ ನೀರು ಪೂರೈಸಲಾಗುವುದು. ಇದಕ್ಕಾಗಿ ಎಂಟು ಟ್ಯಾಂಕರ್‌ ನೀರು ತರಿಸಲಾಗಿದೆ. ದಿನವಿಡೀ ಚಹಾ ಪೂರೈಕೆ ಮಾಡಲಾಗುವುದು. ಬೆಳಿಗ್ಗೆ ತಿಂಡಿಗೆ ಉಪ್ಪಿಟ್ಟು, ಶಿರಾ ಹಾಗೂ ದಾವಣಗೆರೆ ಬೆಣ್ಣೆದೋಸೆ ನೀಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಗೋಧಿ ಹುಗ್ಗಿ, ಪೂರಿ–ಕುರ್ಮಾ, ಮಸಾಲೆ ಅನ್ನ ನೀಡಲಾಗುತ್ತದೆ ಹಾಗೂ ರಾತ್ರಿ ಊಟಕ್ಕೆ ಮೋತಿಚೂರ ಲಡ್ಡು, ಅನ್ನ– ಸಾಂಬಾರು ವ್ಯವಸ್ಥೆ ಮಾಡಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ದಿನವಿಡೀ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಭಾಗವಹಿಸುವರು. ಜನರೊಟ್ಟಿಗೆ ಅವರು ಕೂಡ ಊಟ ಸೇವಿಸುತ್ತಾರೆ. ಸ್ಮಶಾನದಲ್ಲಿಯೇ ಮಲಗುತ್ತಾರೆ. ದೂರದ ಊರುಗಳಿಂದ ಬಂದಿರುವ ಜನರು ಮರುದಿನ ಬೆಳಿಗ್ಗೆ ತಿಂಡಿ– ಚಹಾ ಸೇವಿಸಿದ ನಂತರ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗಲಿದ್ದಾರೆ ಎಂದರು.

ದೈನಂದಿನ ಕಾರ್ಯಕ್ರಮಗಳ ವಿವರ

ಬೆಳಿಗ್ಗೆ 10.30:ಉದ್ಘಾಟನಾ ಕಾರ್ಯಕ್ರಮ: ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಹುಕ್ಕೇರಿ
ಬಸವಬೆಳವಿ ಚರಂತೇಶ್ವರಮಠದ ಶರಣಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಮತ್ತು ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ, ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್, ಶಾಸಕ ವೈ.ಎಸ್.ವಿ.ದತ್ತ, ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ನಟ ಪ್ರಕಾಶ ರೈ, ಜನಪರ ಹೋರಾಟಗಾರ್ತಿ ಡಾ.ಸುಷ್ಮಾ ಅಂದಾರೆ, ಕೆ.ನೀಲಾ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30– ನಾಟಕ ಆಯುಧ ಪ್ರದರ್ಶನ. ರಚನೆ– ನಿರ್ದೇಶನ: ಯೋಗೇಶ ಪಾಟೀಲ, ಪ್ರಸ್ತುತಿ– ಧಾರವಾಡದ ಗಣಕರಂಗ. ನಂತರ ನಾಡಿನ ಹೆಸರಾಂತ ಕಲಾತಂಡಗಳಿಂದ ಕ್ರಾಂತಿಕಾರಿ ಗೀತಗಳು– ದಲಿತ ಗೀತೆಗಳ ಗಾಯನ, ವಾದ್ಯಮೇಳ, ಭಜನಾ ಪದಗಳು ಆಕರ್ಷಣೆಯಾಗಲಿವೆ. ರಾತ್ರಿ 12ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT