ಯಾದಗಿರಿ: ತಾಲ್ಲೂಕಿನ ಗಡಿಭಾಗದಲ್ಲಿರುವ ಬಸಾಪುರ ಗ್ರಾಮದ ಆಂಜನೇಯ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
ಪ್ರತಿ ವರ್ಷ ಸತತ ಮೂರುದಿನ ವಿಶೇಷ ಪೂಜಾ ಕಾರ್ಯಕ್ರಮಗಳ ಜತೆಗೆ ಅಗ್ನಿ ತುಳಿತ, ಉಚ್ಚಾಯ ಹಾಗೂ ರಥೋತ್ಸವ ನಡೆದವು. ವಾಡಿಕೆಯಂತೆ ಪಕ್ಕದ ಇಡ್ಲೂರ ಗ್ರಾಮಸ್ಥರಿಂದ ತೆಂಗಿನ ಗರಿ ಹಾಗೂ ಜ್ಯೋತಿ ಬಂದ ನಂತರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ತೀರ ಹಳ್ಳಿಗಾಡು ಪ್ರದೇಶ ಇದಾಗಿದ್ದರಿಂದ ಭಕ್ತರು ಬಹುತೇಕ ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತರಾಗಿ ಬಂದು ಜ್ಯೋತಿ ಹಾಗೂ ದೇವರಿಗೆ ನೈವೈದ್ಯ ಅರ್ಪಿಸುತ್ತಿದ್ದ ದೃಶ್ಯ ಕಂಡುಬಂತು.
ಜಾತ್ರೆಯ ನಿಮಿತ್ತ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ, ರಥವನ್ನು ಹೂ ಮಾಲೆಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಕೈಕುಸ್ತಿ ಸ್ಪರ್ಧೆಗಳು ನಡೆದವು.