ಬೆಂಗಳೂರು: ಶಾಸಕರ ಹಕ್ಕು ಚ್ಯುತಿ ಪ್ರಕರಣದಲ್ಲಿ ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರಿಗೆ ಹಕ್ಕು ಬಾಧ್ಯತಾ ಸಮಿತಿ ವಿಧಿಸಿರುವ ಒಂದು ವರ್ಷದ ಜೈಲು ಶಿಕ್ಷೆ ಮತ್ತು ತಲಾ ₹ 10 ಸಾವಿರ ದಂಡದ ಆದೇಶ ಜಾರಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಸಂಪಾದಕ ಅನಿಲ್ರಾಜ್ ಅವರಿಗೆ ಶಿಕ್ಷೆ ಮತ್ತು ದಂಡ ಜಾರಿಗೊಳಿಸಲು ಪೊಲೀಸ್ ಇಲಾಖೆಗೆ ವಿಧಾನಸಭೆ ಸಚಿವಾಲಯ ಈ ವರ್ಷದ ಜೂನ್ ತಿಂಗಳಲ್ಲಿ ಆದೇಶ ನೀಡಿತ್ತು.
ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿಯು ಇಬ್ಬರೂ ಸಂಪಾದಕರಿಗೆ ಶಿಕ್ಷೆ ವಿಧಿಸಿತ್ತು. ವಿಧಾನಸಭಾ ಅಧಿವೇಶನದಲ್ಲೂ ಈ ವಿಷಯವನ್ನು ಸದಸ್ಯರು ಪ್ರಸ್ತಾಪಿಸಿದ್ದರು. ಸದನವೂ ಹಕ್ಕು ಬಾಧ್ಯತೆ ಸಮಿತಿಯ ವರದಿಯನ್ನು ಅಂಗೀಕರಿಸಿ ಶಿಕ್ಷೆ ಜಾರಿಗೊಳಿಸಲು ನಿರ್ಣಯ ತೆಗೆದುಕೊಂಡಿತ್ತು.