ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ ಸಮಾಜಕ್ಕೆ ಹೃದಯ ಶ್ರೀಮಂತಿಕೆ ಅಗತ್ಯ

ಬಿ.ಆರ್.ಅಂಬೇಡ್ಕರ್ ಅವರ 61ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಶಾಸಕ ಸುಧಾಕರ್ ಅಭಿಮತ
Last Updated 7 ಡಿಸೆಂಬರ್ 2017, 7:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಮಾಜದಲ್ಲಿರುವ ಪ್ರತಿಯೊಬ್ಬರನ್ನೂ ಸಮಾನ ಕಣ್ಣು, ಹೃದಯದಿಂದ ಕಂಡಾಗ ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಜನರಲ್ಲಿ ಪರಸ್ಪರ ಹೃದಯ ಶ್ರೀಮಂತಿಕೆ ಬರಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್ ಅವರ 61ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳಿಂದ ತಾರತಮ್ಯಗಳಿಂದ ನಲುಗಿದ ದೇಶದಲ್ಲಿ ಅಸಂಖ್ಯಾತ ದಲಿತರು, ಬಲಹೀನ ವರ್ಗಗಳಿಗೆ ಸಮಾನತೆ ತಂದುಕೊಡುವುದೇ ತಮ್ಮ ಜೀವನದ ಆಶಯವಾಗಿಟ್ಟುಕೊಂಡ ಅಂಬೇಡ್ಕರ್ ಅವರು ಸಮಾನತೆ ತಳಹದಿಯ ಮೇಲೆ ದೇಶ ಕಟ್ಟುವ ಉದ್ದೇಶದಿಂದ ಸಂವಿಧಾನ ರಚನೆಯಲ್ಲಿ ತಮ್ಮ ಅನುಭವ ಧಾರೆ ಎರೆದರು’ ಎಂದು ತಿಳಿಸಿದರು.

‘ಇವತ್ತು ನಾವು 21ನೇ ಶತಮಾನ ತಲುಪಿ, ಯಾಂತ್ರಿಕ ಬದುಕು ಅಪ್ಪಿಕೊಂಡಿದ್ದೇವೆ. ಆದರೆ ಎಲ್ಲವೂ ಸರಿ ಹೋಗಿಲ್ಲ. ಸಾಕಷ್ಟು ಬದಲಾದರೂ ಇಂದಿಗೂ ಹಲವಾರು ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. ಪೂರ್ಣ ಪ್ರಮಾಣ ಸಮ ಸಮಾಜದ ನಿರ್ಮಿಸಿದ್ದೇವೆ ಎಂದು ಹೇಳುವ ಧೈರ್ಯವಿಲ್ಲ. ತಾರತಮ್ಯ, ಶೋಷಣೆಗಳು ವಿಶ್ವಾಸದಿಂದ ಹೋಗಲಾಡಿಸಬೇಕೆ ವಿನಾ ಕಾಯ್ದೆ, ಕಾನೂನಿನಿಂದ ತೆಗೆದುಹಾಕಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ದಲಿತರು ಉತ್ತಮ ಶಿಕ್ಷಣ ಪಡೆದು, ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡುವ ಪ್ರಜ್ಞಾವಂತರಾಗಬೇಕು ಎಂದು ಅಂಬೇಡ್ಕರ್‌ ಅವರು ಸದಾ ಪ್ರತಿಪಾದಿಸುತ್ತಿದ್ದರು. ಇದನ್ನು ಶೋಷಿತರೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಭೂಮಿ, ಶಿಕ್ಷಣ, ಉದ್ಯೋಗಗಳಲ್ಲಿ ಸಮಾನ ಹಕ್ಕುಗಳು ಬರಬೇಕಾಗಿದೆ. ಅದಕ್ಕಾಗಿ ರಚನಾತ್ಮಕ ವಿಚಾರಗಳಲ್ಲಿ ಸಂಘಟಿತರಾಗಿ ಹೋರಾಡುವ ವಿಚಾರ ಮಾಡಬೇಕು’ ಎಂದು ಹೇಳಿದರು.

ಶಿಕ್ಷಣ ತಜ್ಞ ಕೋಡಿರಂಗಪ್ಪ ಅವರು ವಿಶೇಷ ಉಪನ್ಯಾಸ ನೀಡುತ್ತ, ‘ಮಹಾನ್ ಮಾನವತವಾದಿಯಾಗಿದ್ದ ಅಂಬೇಡ್ಕರ್‌ ಅವರು ಶೋಷಿತ ವರ್ಗದವರಿಗೆ ಪೋಷಕರಾಗಿ, ಸಂವಿಧಾನಾತ್ಮಕ ನೇತಾರರಿಗೆ ನಾಯಕರಾಗಿದ್ದರು. ಭಾರತದಲ್ಲಿನ ತಾರತಮ್ಯ, ಜಾತಿ ವ್ಯವಸ್ಥೆಯ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಶ್ರೇಣಿಕೃತ ವ್ಯವಸ್ಥೆಯನ್ನು ತೊಡೆದು ಹಾಕಿ ಸಮ ಸಮಾಜ ರೂಪಿಸಲು ಶ್ರಮಿಸಿದರು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್ ಕೇಶವರೆಡ್ಡಿ, ಪ್ರಭಾರ ಜಿಲ್ಲಾಧಿಕಾರಿ ಕೆ.ಎನ್ ಅನುರಾಧಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಅಧಿಕಾರಿ ತೇಜು ಆನಂದ ರೆಡ್ಡಿ,
ಸಮಾಜ ಕಲ್ಯಾಣ ಇಲಾಖೆಯ
ಸಹಾಯಕ ನಿರ್ದೇಶಕ ಶೇಷಾದ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT