ಶೃಂಗೇರಿ: ವಿದ್ಯಾರ್ಥಿಗಳ ಪುಸ್ತಕದ ಕಲಿಕೆಗಿಂತ ಜೀವನ ಮೌಲ್ಯದ ಪಾಠವೇ ಬದುಕಿಗೆ ದಾರಿದೀಪ. ಇದನ್ನು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಕಲಿಸುತ್ತವೆ. ನಮ್ಮ ಗ್ರಾಮದ ಉದ್ಧಾರ ನಮ್ಮಿಂದಲೇ ಸಾಧ್ಯ. ಅದು ನಮ್ಮಿಂದಲೇ ಆಗಬೇಕು. ಬೇರೆಯವರ ಬಳಿ ಕೈಚಾಚುವುದಕ್ಕಿಂತ ನಾವೆಲ್ಲಾ ಕೈ ಜೋಡಿಸಬೇಕು ಎಂದು ಶಾರದ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿಶಂಕರ್ ಹೇಳಿದರು.
ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಅಭಿನವ ರಮಾನಂದ ಪ್ರೌಢಶಾಲೆಯಲ್ಲಿ ಜೆಸಿಬಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಒಟ್ಟಿಗೆ ಬಾಳುವುದನ್ನು ಕಲಿಸಲಿದ್ದು, ಇದನ್ನು ಯಾವ ಕಾಲೇಜು ಶಿಕ್ಷಣವೂ ನೀಡಲಾರದು. ಜನರ ಜೀವನ ಶೈಲಿಯ ವ್ಯತ್ಯಾಸಗಳು, ಸುಖ ದುಃಖಗಳ ಪರಿಚಯವಾಗಿ ಸೇವಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮನೋಭಾವ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ‘ಗ್ರಾಮಸ್ಥರೊಂದಿಗೆ ಶಿಬಿರಾರ್ಥಿಗಳು ಉತ್ತಮ ಬಾಂಧ ವ್ಯವನ್ನು ಬೆಳೆಸಿಕೊಳ್ಳಬೇಕು. ಕೆಲಸ ದೊಂದಿಗೆ ಸೌಹಾರ್ದವನ್ನು ಕಲಿಸುವ ಏಕತೆಯ ಪ್ರತಿರೂಪವಾಗಲಿ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸ್ವಾಮಿ ಮಾತನಾಡಿ, ‘ಸೇವೆ ಎಂದರೆ ಯುದ್ಧ ಭೂಮಿಯಲ್ಲಿ ಮಾತ್ರವಲ್ಲ. ಮನೆ, ಮನಸ್ಸುಗಳ ಕೈಂಕರ್ಯ. ಯುವಶಕ್ತಿಯಿಂದ ಸದೃಢ ದೇಶದ ನಿರ್ಮಾಣ ಸಾಧ್ಯ ಎಂದರು.
ಹಿರಿಯ ಸ್ವಯಂ ಸೇವಕರಾದ ನಾಗರಾಜ ಕೂವೆಯವರ 'ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ…. ಹರೆಯದ ಪಿಸುಮಾತು' ಪುಸ್ತಕ ಬಿಡುಗಡೆಗೊಳಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಕಿತಾ ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಶೇಖರ್ರಾವ್, ರಾಜೇಂದ್ರರಾವ್, ರೈತಪರ ಚಿಂತಕರಾದ ಸಚಿನ್ ಮೀಗ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ. ಶಿವಶಂಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಂದ್ರಶೇಖರ್, ಅಭಿನವ ರಮಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಪೂರ್ಣಿಮಾ ಉಪಸ್ಥಿತರಿದ್ದರು.