ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಜ್ವರ ಪೀಡಿತರು

ನಗರ ಪ್ರದೇಶದಲ್ಲಿ ಹೆಚ್ಚಿದ ಚಿಕೂನ್‌ ಗುನ್ಯಾ ಪ್ರಕರಣ, ಸ್ವಚ್ಛತೆಗೆ ಜನರ ತಾತ್ಸಾರ, ಅವೈಜ್ಞಾನಿಕ ನೀರು ಸಂಗ್ರಹ
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಮನೆಯಲ್ಲಿ ಒಬ್ಬರಿಗೆ ಜ್ವರ ಕಾಣಿಸಿಕೊಂಡರೆ, ಮನೆಯ ಉಳಿದ ಸದಸ್ಯರೂ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಜ್ವರದೊಂದಿಗೆ ಮೈಕೈ ಸುಸ್ತು, ಕಾಲು ನೋವು, ಮೊಣಕೈ ನೋವು ಹಾಗೂ ಮಾಂಸ ಖಂಡಗಳ ನೋವುನಿಂದಲೂ ನರಳುತ್ತಿದ್ದಾರೆ.

ಕೆಲ ತಿಂಗಳಿನಿಂದ ದಾವಣಗೆರೆ ತಾಲ್ಲೂಕಿನ ಮಾಯಕೊಂಡ, ಅಣಬೇರು, ಬಾಡಾ, ನಲಕುಂದ ಹಾಗೂ ಹರಿಹರ ಮತ್ತು ಹರಪನಹಳ್ಳಿ ತಾಲ್ಲೂಕಿನಲ್ಲಿಯೂ ವೈರಾಣು ಜ್ವರಕ್ಕೆ ಹಲವರು ತುತ್ತಾಗಿದ್ದಾರೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದವರು ಜಿಲ್ಲಾ ಆಸ್ಪತ್ರೆ ಹಾಗೂ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ದೇವಿ ಮುನಿಸಿಕೊಂಡಿದ್ದಾಳೆ ಎಂದು ಭಾವಿಸಿ, ಹೋಳಿಗೆ ಎಡೆ ಪೂಜೆ ಸಲ್ಲಿಸುತ್ತಿದ್ದಾರೆ.

ಬದಲಾಗದ ಮನಸ್ಥಿತಿ!
ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ ಹಾಗೂ ಮನೆಯಲ್ಲಿ ಅವೈಜ್ಞಾನಿಕವಾಗಿ ನೀರು ಸಂಗ್ರಹಿಸದೇ ಆಗಾಗ ನೀರನ್ನು ಬದಲಾಯಿಸಬೇಕು ಎಂದು ಲಾರ್ವಾ ಸಮೀಕ್ಷೆ ವೇಳೆ ಸಾಕಷ್ಟು ಜಾಗೃತಿ ಮೂಡಿಸಿದರೂ ಜನರ ಮನಸ್ಥಿತಿ ಬದಲಾಗುತ್ತಿಲ್ಲ. ಇದರಿಂದಾಗಿಯೇ ವೈರಾಣು ಜ್ವರಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ.

ಹೆಚ್ಚಿದ ಚಿಕೂನ್‌ ಗುನ್ಯಾ: ಜಿಲ್ಲೆಯಲ್ಲಿ ನವೆಂಬರ್‌ನಲ್ಲಿಯೇ ಒಟ್ಟು 181 ಶಂಕಿತ ಚಿಕೂನ್‌ ಗುನ್ಯಾ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 43 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ದಾವಣಗೆರೆ ತಾಲ್ಲೂಕಿನದೇ 26 ಪ್ರಕರಣಗಳಿವೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ದಾವಣಗೆರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನರು ಚಿಕೂನ್‌ ಗುನ್ಯಾ ಜ್ವರಕ್ಕೆ ತುತ್ತಾಗಿದ್ದಾರೆ. ಸ್ವಚ್ಛತೆಯ ಬಗ್ಗೆ ಜನರಲ್ಲಿರುವ ತಾತ್ಸರದ ಮನೋಭಾವವೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಈಡಿಸ್‌ ಸೊಳ್ಳೆ ಉತ್ಪತ್ತಿ ತಾಣಗಳಿಂದಲೇ ಡೆಂಗಿ ಹಾಗೂ ಚಿಕೂನ್‌ ಗುನ್ಯಾ ರೋಗ ಹರಡುತ್ತಿವೆ. ಈ ತಾಣಗಳನ್ನು ಮೊದಲು ನಿರ್ಮೂಲನೆ ಮಾಡಬೇಕು. ನೀರು ಸಂಗ್ರಹಿಸುವ ಸಿಮೆಂಟ್‌ ತೊಟ್ಟಿ, ಡ್ರಮ್‌, ಮಣ್ಣಿನ ಮಡಿಕೆ ಅಲ್ಲದೇ ಪ್ರಿಡ್ಜ್‌ ಹಾಗೂ ಏರ್‌ ಕೂಲರ್‌ಗಳಲ್ಲಿನ ನೀರನ್ನು ಆಗಾಗ ಬದಲಾಯಿಸುತ್ತಿರಬೇಕು. ಮನೆಯ ಸುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆದರೆ, ಈ ಮುಂಜಾಗ್ರತಾ ಕ್ರಮಗಳನ್ನು ಯಾರೂ ಅನುಸರಿಸುತ್ತಿಲ್ಲ. ಹೀಗಾಗಿ, ನಗರದಲ್ಲಿಯೇ ಹೆಚ್ಚು ಚಿಕೂನ್‌ ಗುನ್ಯಾ ಪ್ರಕರಣಗಳು ಕಂಡು ಬಂದಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಚಿಕೂನ್‌ ಗುನ್ಯಾ, ಡೆಂಗಿ ನಿಯಂತ್ರಣಕ್ಕಾಗಿ ಈಗಾಗಲೇ ಜಿಲ್ಲೆಯಾದಾದ್ಯಂತ ಕ್ರಮ ಕೈಗೊಳ್ಳಲಾಗಿದೆ. ಅತಿ ಹೆಚ್ಚು ಜ್ವರ ಕಂಡ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ನೀರು ಸಂಗ್ರಹ ಪರಿಕರಗಳನ್ನು ಗುರುತಿಸಿ ಲಾರ್ವ ಪತ್ತೆ ಹಚ್ಚಿ ನಾಶ ಮಾಡುತ್ತಿದ್ದಾರೆ. ವಿಶೇಷವಾಗಿ ದಾವಣಗೆರೆ ಹಾಗೂ ಹರಿಹರ ನಗರಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಅವರು.

ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ನಿರಂತರ ಜ್ವರ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡುತ್ತಾರೆ ಅವರು.

**

ಅನೈರ್ಮಲ್ಯದ ಸಮಸ್ಯೆ..

ಅಣಬೇರು, ಬಾಡಾ ಹಾಗೂ ನಲಕುಂದ ಗ್ರಾಮಗಳಲ್ಲಿ ಅನೈರ್ಮಲ್ಯದಿಂದಾಗಿ ಜನರು ವೈರಾಣು ಜ್ವರಕ್ಕೆ ತುತ್ತಾಗಿದ್ದಾರೆ. ಅದರಲ್ಲೂ ಅಣಬೇರು ಗ್ರಾಮದಲ್ಲಿನ ಹೊಂಡವನ್ನು ಶುಚಿಗೊಳಿಸಬೇಕು. ಇದರಲ್ಲಿ ಸಂಗ್ರಹವಾಗಿರುವ ಕೊಳಚೆ ನೀರಿನಿಂದಲೇ ಹೆಚ್ಚು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಗ್ರಾಮದ ಜನರು ನಿರಂತರ ಜ್ವರಕ್ಕೆ ಒಳಗಾಗಿದ್ದಾರೆ ಎಂದು ನಲಕುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ.ಸ್ವಪ್ನಾ ಹೇಳುತ್ತಾರೆ.

ಈ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಲಾರ್ವಾ ಸರ್ವೆ ಮಾಡುತ್ತಿದ್ದಾರೆ. ಅಣಬೇರು ಗ್ರಾಮದಲ್ಲಿ ನಿರಂತರ ಜ್ವರ ಹಾಗೂ ಮೈಕೈ ನೋವು ಅನುಭವಿಸುತ್ತಿರುವ ರೋಗಿಗಳ ರಕ್ತ ಪರೀಕ್ಷೆಯನ್ನು ಗುರುವಾರ ಮಾಡಲಾಗುವುದು ಎಂದು ತಿಳಿಸಿದರು.

**

ದೇವರ ಕೋಣೆ ಚೊಂಬಿನಲ್ಲಿ ಲಾರ್ವಾ!

ಲಾರ್ವಾ ಪರೀಕ್ಷೆಗಾಗಿ ಅಣಬೇರು ಗ್ರಾಮದ ಮನೆಗಳಿಗೆ ತೆರಳಿದಾಗ ಕೆಲವರು ಮನೆಯ ಮುಂಬಾಗಿಲಿನಿಂದ ಪ್ರವೇಶ ನೀಡದೇ ಹಿಂಬಾಗಿಲಿನಿಂದ ಒಳಬರುವಂತೆ ಹೇಳುತ್ತಿದ್ದರು. ಮನೆಯೊಳಗೆ ಹೋಗಿ, ದೇವರ ಕೊಣೆಯಲ್ಲಿ ನೀರು ತುಂಬಿದ ಚೊಂಬನ್ನು ಪರೀಕ್ಷಿಸಿದಾಗ ಆ ನೀರಿನಲ್ಲಿ ಲಾರ್ವಾ ಕಂಡುಬಂದಿತು! ಪೂಜೆಗಾಗಿ ಇಟ್ಟಿದ್ದ ನೀರನ್ನೂ ಬದಲಾಯಿಸದೇ ದೇವರ ಪೂಜೆ ಮಾಡುವ ಜನರು, ಮನುಷ್ಯರನ್ನು ಮುಂಬಾಗಿಲಿನಿಂದ ಒಳಗೆ ಬಿಟ್ಟುಕೊಳ್ಳಲು ಮೀನಮೇಷ ಏಣಿಸುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸಿದ ಆಶಾ ಕಾರ್ಯಕರ್ತೆಯೊಬ್ಬರು ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT