ಮುಂಡರಗಿ: ‘ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದವರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಮುಖರು. ಅಸ್ಪೃಶ್ಯತೆ, ಜಾತಿ ತಾರತಮ್ಯ ತೊಡೆದು ಹಾಕಲು ಅವರು ಕೈಗೊಂಡ ಕಾರ್ಯಗಳು ಶ್ಲಾಘನೀಯ’ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮಣ ತಗಡಿನಮನಿ ಹೇಳಿದರು.
ಇಲ್ಲಿನ ಹೆಸರೂರ ಕಾಲೊನಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಸ್ಪೃಶ್ಯತೆ ವಿರುದ್ಧ ಅಂಬೇಡ್ಕರ್ ಅವರು ಮಾಡಿದ ಅಹಿಂಸಾತ್ಮಕ ಹೋರಾಟ ಜಾಗತಿಕ ಮನ್ನಣೆ ಗಳಿಸಿದೆ. ದಲಿತರು ಹಾಗೂ ಹಿಂದುಳಿದವರ ಧ್ವನಿಯಾಗಿ ಅವರು ಕೈಗೊಂಡ ಕಾರ್ಯಗಳು ಎಲ್ಲರ ಮೆಚ್ಚುಗೆ ಗಳಿಸಿವೆ’ ಎಂದರು.
‘ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶದ ಅಮೂಲಾಗ್ರ ಬದಲಾವಣೆಗೆ ಕಾರಣವಾಯಿತು. ಅವರು ದೇಶದ ಯುವ ಜನತೆಗೆ ಮಾದರಿ’ ಎಂದು ಸಂತೋಷಕುಮಾರ ಮುರಡಿ ಅಭಿಪ್ರಾಯಪಟ್ಟರು.