ಮಂಡ್ಯ: ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಗೌರಿಲಂಕೇಶ್ ಹತ್ಯೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.
ಒಕ್ಕೂಟದ ವ್ಯವಸ್ಥೆಯಲ್ಲಿ ಜಾತಿ, ಮತ, ಧರ್ಮ, ಜನಾಂಗ, ಪ್ರದೇಶಗಳ ಮೇಲಾಟದ ಭರಾಟೆಯಲ್ಲಿ ಸಮಾಜ ಸಂಘರ್ಷದ ಗೂಡಾಗಿದೆ. ಒಡೆದ ಮನಸ್ಸುಗಳು ಕಾನೂನು ಮೀರಿ ಕಾರ್ಯನಿರ್ವಹಿಸುತ್ತಿವೆ. ಇದೆಲ್ಲವನ್ನು ನಿಯಂತ್ರಿಸುವಲ್ಲಿ ವ್ಯವಸ್ಥೆ ಸೋತಿದೆ. ಐಕ್ಯತೆಯ ಮಂತ್ರ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಡಿ.29ರಂದು ಜಯಂತಿ ಆಚರಿಸಬೇಕು. ಜೊತೆಗೆ ಕುವೆಂಪು ಸಾಹಿತ್ಯ ಆಧರಿಸಿ ಭಾವಗೀತೆ ಗಾಯನ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಮೂರು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಆರೋಪಿಗಳನ್ನು ಬಂಧಿಸುವ ಮೂಲಕ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಕರ್ನಾಟಕದ ಗಡಿಭಾಗವಾಗಿರುವ ಬೆಳಗಾವಿ ವಿಷಯದ ಬಗ್ಗೆ ಪದೇಪದೇ ಕರ್ನಾಟಕ ರಾಜ್ಯದ ಜನತೆಯ ಮೇಲೆ ಉದ್ದಟತನ ತೋರುತ್ತಿರುವ ಶಿವಸೇನೆ ನಡೆಯನ್ನು ವಿರೋಧಿಸುತ್ತೇವೆ. ಶಿವಸೇನೆ ರಾಜ್ಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್, ಬಿ.ಸಿ.ಅಂದಾನಿ, ಮಹಾಂತಪ್ಪ, ಅವಿನಾಶ್, ಚೇತನ್ಕುಮಾರ್, ಹರೀಶ್, ಶಂಕರ್, ಶಿವಕುಮಾರ್, ಬಸವರಾಜು ಭಾಗವಹಿಸಿದ್ದರು.