ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಮಾಕ್ಕೆ ಹೆದರಬೇಕಿಲ್ಲ!

Last Updated 10 ಡಿಸೆಂಬರ್ 2017, 20:33 IST
ಅಕ್ಷರ ಗಾತ್ರ

–ಡಾ. ಜಿ. ನರಸಿಂಹಸ್ವಾಮಿ

ಚಳಿಗಾಲ ಬಂತೆಂದರೆ ಸಾಮಾನ್ಯವಾಗಿ ಕಾಡುವ ಸಾಮಾನ್ಯ ಶೀತವೇ ಘಾತಕರೋಗವಾಗಿ ತಲ್ಲಣಗೊಳಿಸುತ್ತದೆ. ಶೀತವು ಮನುಷ್ಯರಲ್ಲಿ ಸಾಮಾನ್ಯವಾಗಿ ಕಾಡುವ ತೊಂದರೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ವರ್ಷದಲ್ಲಿ 3–4  ಬಾರಿ ಇದು ಬಾಧಿಸುತ್ತದೆ. ಇದಕ್ಕೆ ಕಾರಣ ಋತು ವೈಪರೀತ್ಯ. ಎಲ್ಲ ರೋಗಗಳಿಗೂ ಮೂಲವಾಗಿ ಮೊದಲು ಶೀತಬಾಧೆ ಕಾಣಿಸಿಕೊಳ್ಳುತ್ತದೆ. ಇದು ಮೂರು ದಿವಸ ಮುಂಚಿತವಾಗಿ ರೋಗದ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ.

ಸೀನುವಿಕೆ, ತಲೆನೋವು, ಉಸಿರುಕಟ್ಟುವಿಕೆ, ಕೆಮ್ಮು, ಮೂಗಿನಲ್ಲಿ ಸೊರಗುಟ್ಟುವಿಕೆ ಮತ್ತು ಆಯಾಸ ಇವು ಸಾಮಾನ್ಯ ಶೀತದ ಗುಣಲಕ್ಷಣಗಳು. ಇವು 2ರಿಂದ 14 ದಿವಸಗಳವರೆಗೆ ಇರುತ್ತವೆ. ಇದರ ಹೊರತಾಗಿ, ಶೀತವೇನಾದರೂ ಪದೇ ಪದೇ ಕಾಣಿಸಿಕೊಂಡು ಬಹಳ ದಿನಗಳವರೆಗೆ ಕಾಡಿದರೆ ಅದು ಸಾಮಾನ್ಯ ಶೀತವೆನಿಸಿಕೊಳ್ಳದೆ ಒಂದು ರೀತಿಯ ಅಲರ್ಜಿ ಅಥವಾ ಸೈನಸೈಟಿಸ್ ಎನಿಸಿಕೊಳ್ಳುತ್ತದೆ.

ಸೈನಸೈಟಿಸ್‌ 
ಮೂಗಿನ ಒಳ ಪದರದ (ಮ್ಯೂಕಸ್ ಮೆಮ್‌ಬ್ರೇನ್) ಹಣೆ ಮತ್ತು ಮುಖದ ಮೂಳೆಗಳಲ್ಲಿರುವ ರಂಧ್ರಗಳ ಒಳಭಾಗವು ಸೊಂಕಿಗೊಳಗಾಗಿರುತ್ತದೆ. ಈ ರಂಧ್ರಗಳಿಂದ ಸೋಂಕಿಗೊಳಗಾದ ದ್ರವವು ಮೂಗಿನೊಳಗೆ ಸೋರಲು ಪ್ರಾರಂಭವಾಗುತ್ತದೆ. ಮೂಗಿನ ಒಳಪದರದ ಉರಿಯೂತದಿಂದಾಗಿ ದ್ರವವು ಸ್ರವಿಸದೆ ಗಾಳಿಯಲ್ಲಿ ಬಂಧಿಸಲ್ಪಟ್ಟು ತೀವ್ರವಾದ ನೋವು, ಕೀವು ಮತ್ತು ದುರ್ಗಂಧಯುಕ್ತ ಕಫಕ್ಕೆ ಕಾರಣವಾಗುತ್ತದೆ.

ಮೂಗಿನ ಒಳಭಾಗದಲ್ಲಿ ನಿರ್ವಾತ ಸ್ಥಿತಿಯಿಂದಾಗಿ ಸಾಮಾನ್ಯವಾಗಿ ಕಣ್ಣುಗಳ ಮೇಲ್ಭಾಗ, ಮಧ್ಯಭಾಗ ಮತ್ತು ಹಿಂಭಾಗಗಳಲ್ಲಿ ತೀವ್ರ ನೋವುಂಟಾಗುತ್ತದೆ. ಗಲ್ಲದ ಭಾಗದಲ್ಲೂ ನೋವು ಉಂಟಾಗುತ್ತದೆ.

ಸೋಂಕಿಗೊಳಗಾದ ಭಾಗಗಳಲ್ಲಿ ನೋವು ಮತ್ತು ತಲೆನೋವು ಬೆಳಗಿನ ಸಮಯದಲ್ಲಿ ತೀವ್ರವಾಗಿದ್ದು ಸಂಜೆಯ ವೇಳೆಗೆ ಕ್ಷೀಣಿಸುತ್ತದೆ. ಹಣೆಯ ಭಾಗದಲ್ಲಿ ಮುಟ್ಟಲು ಅಸಾಧ್ಯವಾದ ನೋವಿರುತ್ತದೆ.

ಮೂಗಿನ ಒಳಪದರದ ಉರಿಯೂತದಿಂದ ಸ್ರವಿಸುವಿಕೆ, ನಿಂತು, ನಿರ್ವಾತ ಸ್ಥಿತಿಯಿಂದಾಗಿ ಹಳದಿ ಹಸಿರು ಬಣ್ಣ ಮಿಶ್ರಿತ ಕೀವು ಮೂಗಿನಿಂದ ಹೊರಬರಲಾರಂಭಿಸುತ್ತದೆ. ಇದರಿಂದಾಗಿ ವಾಸನಾ ಶಕ್ತಿ, ರುಚಿ ನೋಡುವ ಶಕ್ತಿ ಕುಂದುತ್ತದೆ. ಜ್ವರ ಬಂದಂತಾಗಿ ಗಂಟಲು ಕಟ್ಟಿಕೊಂಡು ಕೆಮ್ಮು ಪ್ರಾರಂಭವಾಗುತ್ತದೆ.

ಇಂತಹ ಸೈನಸ್ ಇನ್‌ಫೆಕ್ಷನ್ (ಸೋಂಕು) ಗುಣವಾಗಲು ಬಹಳ ದಿನಗಳು ಬೇಕಾಗುವುದು ಅಥವಾ ದೀರ್ಘ ಕಾಲದ ವ್ಯಾಧಿಯಾಗಿ ಪರಿಣಮಿಸಬಹುದು. ಕೆಲವು ಸಲ ದೀರ್ಘ ಕಾಲದ ಸೈನಸ್ ಪದೇ ಪದೇ ಹಾಗೂ ವಿಳಂಬವಾಗಿ ಗುಣವಾಗುವ ಶೀತದಿಂದ ಬಾಧಿಸುತ್ತದೆ. ಆದರೆ ಗುಣವಾಗದ ಸೈನಸೈಟಿಸ್, ಬ್ರಾಂಕೈಟಿಸ್ ಅಥವಾ ಉಬ್ಬಸ ರೋಗಕ್ಕೆ ಹಾಗೂ ಕಿವಿಯೂತಕ್ಕೆ ತಿರುಗುತ್ತದೆ. ಕೆಲವೊಂದು ಸಲ ಈ ಸೈನಸೈಟಿಸ್ ಸೋಂಕು ಮೆದುಳಿನ ಒಳಪದರಗಳಿಗೂ ಪಸರಿಸಿ/ಹರಡಿ ಮೆನಿಂಜೈಟಿಸ್ ಮತ್ತು ಬ್ರೈನ್‌ಆಬ್‌ಸೆಸ್ ಉಂಟಾಗುತ್ತದೆ.

ಸೀನು
ಅರಿವಿದ್ದೋ ಅಥವಾ ಅರಿವಿಲ್ಲದೆಯೋ ವೇಗವಾಗಿ ಗಾಳಿಯನ್ನು ಮೂಗಿನೊಳಗೆ ಎಳೆದುಕೊಂಡು ಅಷ್ಟೇ ವೇಗವಾಗಿ ಮೂಗು ಮತ್ತು ಬಾಯಿಯ ಮೂಲಕ ಹೊರ ಬರುವಾಗ ಒಂದು ರೀತಿಯ ಶಬ್ದ ಉತ್ಪತ್ತಿಯಾಗುತ್ತದೆ. ಇದೇ ಸೀನು.

ಸೀನು ಒಂದು ರೀತಿಯ ಉಪಕಾರಾತ್ಮಕ ಕ್ರಿಯೆ. ಇದರಿಂದ ದೂಳಿನ ಕಣಗಳು ಹೊರತಳ್ಳಲ್ಪಡುತ್ತದೆ. ಉಸಿರಾಡುವಾಗ ಒವ್ಮೊಮ್ಮೆ ಗಾಳಿಯ ಜೊತೆ ದೂಳಿನ ಕಣಗಳು ಒಳಹೋದಾಗ ಮೆದುಳಿನ ನರಜಾಲಕ್ಕೆ ಪ್ರಚೋದನೆಯಾಗಿ ಮಿಂಚಿನಂತೆ ಕಾರ್ಯ ನಿರ್ವಹಿಸಿ ಸೀನು ಕ್ರಿಯೆಯಿಂದ ದೂಳಿನ ಕಣಗಳು ಹೊರತಳ್ಳಲ್ಪಡುತ್ತದೆ. ಇದಕ್ಕೆ ಕಾರಣಗಳು ಅಲರ್ಜಿ ಮತ್ತು ಮೂಗು ಸೋರುವಿಕೆ. ಆದರೆ ನಿರಂತರ ಸೀನುವಿಕೆ ಬಹಳ ದಿನಗಳವರೆಗೆ ಕಾಡಿಸಿ ಆಸ್ತಮಾ ಅಥವಾ ಉಬ್ಬಸವಾಗುತ್ತದೆ.

ಆಸ್ತಮಾ (ವೀಸಿಂಗ್)
ಬ್ರಾಂಕೈಟಿಸ್ ಮಕ್ಕಳಲ್ಲಿ ಅತಿಯಾಗಿ ಕಾಡುವ ಸಮಸ್ಯೆಯಾಗಿದೆ. ಇತ್ತೀಚಿನ ಅಂಕಿ ಅಂಶದ ಪ್ರಕಾರ ಶೇ.12ರಿಂದ 15ರಷ್ಟು ಹುಡುಗರು ಮತ್ತು  10ರಿಂದ 12ರಷ್ಟು ಹುಡುಗಿಯರು ಒಂದಲ್ಲ ಒಂದು ರೀತಿ ಈ ಸಮಸ್ಯೆಯಿಂದ ಬಾಧಿಸಲ್ಪಡುತ್ತಿದ್ದಾರೆ. ಈ ಸಮಸ್ಯೆಯು ಅತಿಯಾದ ವಾಯುಮಾಲಿನ್ಯದಿಂದ ಉಲ್ಬಣಿಸುತ್ತಿದೆ. ಮುಖ್ಯವಾಗಿ ಮೋಟಾರು ವಾಹನಗಳಿಂದ ಹೊರಬರುವ ವಿಷಕಾರಿ ಅನಿಲಗಳು.

ತೀವ್ರವಾದ ಸೈನಸೈಟಿಸ್ ಮಕ್ಕಳಲ್ಲಿ ಎಲ್ಲ ರೀತಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. (ಆಟಪಾಠಗಳಲ್ಲಿ ಹಾಗೂ ಇನ್ನಿತರ ಚಟುವಟಿಕೆ) ಇದರಿಂದ ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಉಸಿರಾಟದ ತೊಂದರೆ ಉಂಟಾಗುತ್ತದೆ ಮತ್ತು ಸಾವು ಕೂಡ ಸಂಭವಿಸಬಹುದು.

ಈ ಕಾಯಿಲೆಗಳಿಗೆ ಆಲೋಪತಿಯಲ್ಲಿ ತಾತ್ಕಾಲಿಕವಾಗಿ ಶಮನಗೊಳಿಸುವ ಔಷಧ ಲಭ್ಯ. ಔಷಧವನ್ನು ಜೀವನವಿಡೀ ಸೇವಿಸುವುದರಿಂದ ಮೂಳೆಗಳು ದುರ್ಬಲಗೊಂಡು ಆಸ್ಟಿಯೋ ಪೋರೊಸಿಸ್ ಎಂಬ ಮಾರಕರೋಗಕ್ಕೆ ಕಾರಣವಾಗುತ್ತದೆ.

ಅಲರ್ಜಿಯು ಆಸ್ತಮಾ ಚಳಿಗಾಲ, ಮಳೆಗಾಲ ಮತ್ತು ದೂಳಿನ ವಾತಾವರಣದಲ್ಲಿ ಹೆಚ್ಚಾಗುತ್ತದೆ. ಅದಕ್ಕಾಗಿ ದಿಢೀರ್ ಶಮನಗೊಳಿಸಲು ಇನ್‌ಹೇಲರ್‌ಗಳು, ರೋಟಾಹೇಲರ್‌ಗಳನ್ನು ಉಪಯೋಗಿಸುತ್ತಾರೆ. ಆದರೆ ಇದರ ಅಡ್ಡ ಪರಿಣಾಮ ಅವರಿಗೆ ತಿಳಿದಿರುವುದಿಲ್ಲ.

ಆಸ್ತಮಾರೋಗಕ್ಕೆ ಆಯುರ್ವೇದದ ಚಿಕಿತ್ಸೆ ಆಯುರ್ವೇದದ ಚಿಕಿತ್ಸೆಯಲ್ಲಿ ಆಸ್ತಮಾವನ್ನು ನಿಗ್ರಹಿಸಲು ವಾತಾನು ಲೋಮನ ಅಂದರೆ ವಾಯುವಿನ ಮಾರ್ಗವನ್ನು ಬದಲಿಸುವಿಕೆ ಹಾಗೂ ಅವಿರೋಧವಾದ ಕಫವನ್ನು ವಿರೇಚನ (ಭೇದಿಯ ಮೂಲಕ ಕಫವನ್ನು ಮತ್ತು ಪಿತ್ತವನ್ನು ಹೊರಹಾಕುವ ವಿಧಾನವನ್ನು ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳಬೇಕು. ಔಷಧದಲ್ಲಿ ಪ್ರಮುಖವಾಗಿ ಉಷ್ಣ, ಸೂಕ್ಷ್ಮ, ತೀಕ್ಷ್ಣವಾದ ಗುಣವುಳ್ಳ ಕಫವನ್ನು ಕರಗಿಸುವಂಥ ಹಾಗೂ ವಾಯುವಿನ ಮಾರ್ಗವನ್ನು ಬದಲಿಸುವ ವಿಮುಖಮಾಡುವ ಗುಣವುಳ್ಳ ಗಿಡಮೂಲಿಕೆಗಳನ್ನು ಉಪಯೋಗಿಸಬೇಕು.

ಸಾಮಾನ್ಯವಾಗಿ ಆಸ್ತಮಾಕಾಯಿಲೆಯ ಚಿಕಿತ್ಸೆಯಲ್ಲಿ ಆಡುಸೋಗೆ, ಆಡುಮುಟ್ಟದ ಬಳ್ಳಿ, ಕರಿಮೆಣಸು, ಹಸಿಶುಂಠಿ, ಮೆಂತ್ಯ, ಬೆಳ್ಳುಳ್ಳಿ, ಲವಂಗ, ಚಕ್ಕೆ, ತೇಜಪತ್ರ, ಹಿಪ್ಪಲಿ ಇವುಗಳನ್ನು ವಿವಿಧ ರೀತಿಯ ಔಷಧಕಲ್ಪಗಳಿಂದ ಉಪಯೋಗಿಸಲ್ಪಡುತ್ತದೆ. ಇವುಗಳಿಂದ ತಯಾರಾದ ಮಾತ್ರೆ, ಕಷಾಯ, ಚೂರ್ಣ, ಲೇಹ್ಯ, ಆಸವ ಮತ್ತು ಅರಿಷ್ಠಗಳನ್ನು ಉಪಯೋಗಿಸಲಾಗುತ್ತದೆ.

ಆಸ್ತಮಾ (ದಮ್ಮು, ಕೆಮ್ಮು) ಈ ರೋಗವನ್ನು ಗುಣಪಡಿಸಿಕೊಳ್ಳಲು ನಿಯಮಿತವಾದ ಪಥ್ಯ ಮಾಡುವುದರಿಂದ ಹಾಗೂ ಔಷಧವನ್ನು ಸೇವಿಸುವುದರಿಂದ ಸಾಧ್ಯ. ಅದರ ಜೊತೆಗೆ ಯಾವ ಕಾರಣಗಳಿಂದ ಆಸ್ತಮಾರೋಗ ಬರುವುದೋ ಅವುಗಳನ್ನು ವರ್ಜ್ಯ (ಬಿಡುವುದರಿಂದ) ಮಾಡುವುದರಿಂದ ರೋಗವನ್ನು ಹತೋಟಿಗೆ ತರಬಹುದು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT