ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆ ಸೇರಿದ ಕಬ್ಬಿಣ, ಮರದ ಪೆಟ್ಟಿಗೆ

Last Updated 12 ಡಿಸೆಂಬರ್ 2017, 8:41 IST
ಅಕ್ಷರ ಗಾತ್ರ

ದೇವನಹಳ್ಳಿ : ಆಧುನಿಕತೆಯಿಂದಾಗಿ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಇಂದಿನ ಎಲ್ಲಾ ಕ್ಷೇತ್ರಗಳಲ್ಲಿ ಗ್ರಾಮೀಣ ಸೊಗಡಿನ ಪಾರಂಪರಿಕ ಧಾನ್ಯ ಶೇಖರಣಾ ಮಡಿಕೆ, ಮರದ ಪೆಟ್ಟಿಗೆಗಳು ಮೂಲೆ ಗುಂಪಾಗುತ್ತಿವೆ ಎಂಬುದನ್ನು ಹಿರಿಯರು ನೆನಪಿಸುತ್ತಾರೆ.

ಕಳೆದ ಮೂರು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗಳಲ್ಲಿ ಧಾನ್ಯ ಶೇಖರಣೆ ಮಾಡಿಕೊಳ್ಳುವ ಮಣ್ಣಿನ (ಒಂದು ಕ್ವಿಂಟಲ್ ನಿಂದ ಐದು ಕ್ವಿಂಟಲ್ ವರೆಗೆ ಧಾನ್ಯ ಹಿಡಿಸುವ) ವಾಡೆ ಕನಿಷ್ಠ ಐದರಿಂದ ಹತ್ತಾರು ಸಾಲುಗಟ್ಟಿ ಇರುತ್ತಿದ್ದವು ಎಂದು ಹಿರಿಯರೊಬ್ಬರು ತಿಳಿಸಿದ್ದಾರೆ.

ಧವಸ ಧಾನ್ಯದ ಜತೆಗೆ ಬೇಳೆಕಾಳುಗಳಾದ ಅವರೆ, ಹುಚ್ಚೆಳ್ಳು, ಕುಸುಬೆ, ಕಡಲೆ, ತೊಗರಿ, ಹೆಸರುಕಾಳು, ಅಲಸಂದೆಯಂತಹ ದಿನಬಳಕೆಯ ದ್ವಿದಳ ಧಾನ್ಯಗಳನ್ನು ವಾರ್ಷಿಕವಾಗಿ ಬಳಕೆ ಮಾಡಲು ಕಾದಿಡಲಾಗುತ್ತಿತ್ತು. ಧಾನ್ಯದ ಅಳತೆಯ ಸೇರು ಲೆಕ್ಕಾಚಾರದಲ್ಲಿ ಮಡಿಕೆ ತಯಾರಿಸಲು ಕುಂಬಾರರಿಗೆ ಮುಂಗಡವಾಗಿ ತಿಳಿಸಲಾಗುತ್ತಿತ್ತು. ಅಂಥ ಮಡಿಕೆಗಳನ್ನು ಸುಗ್ಗಿ ಸಂದರ್ಭದಲ್ಲಿ ಬಳಕೆ ಮಾಡುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಮಡಿಕೆಗಳು ಮತ್ತು ವಾಡೆಗಳು ಮೂಕವಾಗಿ ಮಲಗಿವೆ. ನೆನಪಿಗಾಗಿ ಒಡಕಲು ಮಡಿಕೆಗಳು ಅಣಕಿಸುವಂತಿವೆ ಎಂಬುದು ಅನುಭವಿ ಹಿರಿಯರ ಒಡಲಾಳದ ಮಾತು.

ಮನೆಯಲ್ಲಿ ಯಾವ ಭಾಗದಲ್ಲಿ ಯಾವ ಪರಿಕರ ಇರಬೇಕು ಮತ್ತು ಸುರಕ್ಷತವಾಗಿ ಇಡಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ವಠಾರ, ಪಡಸಾಲೆ, ಧವಸಧಾನ್ಯ ಹಜಾರ, ಅಡುಗೆ ಮನೆ ಪ್ರತ್ಯೇಕ ಇರುತ್ತಿದ್ದವು. ಬಡವರು ಮತ್ತು ಮಧ್ಯಮ ವರ್ಗದ ರೈತರು ಧಾನ್ಯ ಶೇಖರಣೆಗೆ ಅತಿ ಹೆಚ್ಚು ಮಣ್ಣಿನ ವಾಡೆಗಳನ್ನು ಬಳಸಿದರೆ ಗ್ರಾಮದ ದೊಡ್ಡ ಜಮೀನ್ದಾರರು ಮನೆಯೊಳಗೆ ಧಾನ್ಯ ಶೇಖರಣೆಗೆ ನೆಲದಲ್ಲಿ ಹಗೇವು, ನೆಲದ ಮೇಲೆ ಕಣಜ ನಿರ್ಮಾಣ ಮಾಡಿ ಧಾನ್ಯವನ್ನು ಸುರಕ್ಷಿತವಾಗಿ ಶೇಖರಣೆ ಮಾಡುತ್ತಿದ್ದರು.

ದೀರ್ಘಕಾಲ ಸಂಗ್ರಹಿಸಿಟ್ಟರೂ ಯಾವುದೇ ಧಾನ್ಯಗಳಿಗೆ ಬೂಸ್ಟ್ ಆಗಲಿ ಹುಳು ಕಾಟವಾಗಲಿ ಇರುತ್ತಿರಲಿಲ್ಲ. ಅಷ್ಟು ಗುಣಮಟ್ಟದ ಧಾನ್ಯ ಹಗೇವಿನಿಂದ ಮತ್ತು ಮಡಿಕೆಯಿಂದ ಹೊರ ತೆಗೆದಾಗ ಇರುತ್ತಿತ್ತು ಎನ್ನುತ್ತಾರೆ ಹಿರಿಯ ನಾಗರಿಕ ಮುನಿಯಪ್ಪ.

ಮೂರು ದಶಕಗಳ ನಂತರ ಬದಲಾದ ವೈಜ್ಞಾನಿಕ ಕ್ಷೇತ್ರದಿಂದಾಗಿ ಅಲ್ಯುಮಿನಿಯಂ ಪಾತ್ರೆಗಳು, ಕಬ್ಬಿಣದ ಬೃಹತ್ ಟ್ರೇಗಳು, ಸ್ಟೀಲ್ ಪಾತ್ರೆಗಳು ಬಳಕೆಯಾಗುತ್ತಿದ್ದವು. ಕಳೆದ ಕೆಲವು ವರ್ಷಗಳಿಂದ ಪ್ಲಾಸ್ಟಿಕ್ ಡ್ರಂ ಮತ್ತು ಪಾತ್ರೆಗಳು ಹೆಚ್ಚಾಗಿವೆ. ಅವು ಮಣ್ಣಿನ ಪ್ರತಿಯೊಂದು ವಸ್ತುಗಳನ್ನು ಬಲಿ ತೆಗೆದುಕೊಂಡಿವೆ. ಮತ್ತೊಂದೆಡೆ ಮಡಿಕೆ ಸೃಷ್ಟಿಕರ್ತ ಕುಂಬಾರರ ಕೈ ಕಟ್ಟಿಹಾಕಿವೆ.

ಮಣ್ಣಿನ ಪಾತ್ರೆಯಲ್ಲಿ ತಯಾರಿಸುವ ಅಡುಗೆಯ ರುಚಿ ಮತ್ತು ಕುಕ್ಕರ್ ನಲ್ಲಿ ಮಾಡುವ ಅಡುಗೆ ರುಚಿಗೆ ಅಜಗಜಾಂತರ ವ್ಯತ್ಯಾಸ ಇದೆ ಎನ್ನುತ್ತಾರೆ ನಾಗರತ್ನ. ಮನೆಯ ಗೋಡೆಯಲ್ಲಿ ಬೀರು ನಿರ್ಮಿಸಲಾಗುತ್ತಿದೆ. ಅಲ್ಲದೆ ಕಪಾಟಿನಲ್ಲೇ ಬೆಲೆ ಬಾಳುವ ಬಟ್ಟೆಗಳನ್ನು ಇಡುವ ಪದ್ದತಿ ಪ್ರಸ್ತುತ ಇದೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣ ಒಂದೆಡೆಯಾದರೆ ಮದುವೆಯಾದ ತಕ್ಷಣ ಪ್ರತ್ಯೇಕ ವಾಸದ ಪ್ರಕರಣಗಳು ಹೆಚ್ಚುತ್ತಿವೆ. ಹಿರಿಯರೊಂದಿಗೆ ವಾಸ ಮಾಡುವುದು ಅಪರೂಪವಾಗಿದೆ ಎಂಬುವುದು ಕೆಲವರ ಅಭಿಪ್ರಾಯ.

ಮಾನವನು ಮನ್ನ ಬುದ್ಧಿವಂತಿಕೆಯಿಂದ ಅನೇಕ ನೂತನ ಸಂಶೋಧನೆಗಳನ್ನು ಕಂಡುಹಿಡಿದ. ನಂತರ ಅನೇಕ ವಿನ್ಯಾಸಗಳು ಮತ್ತು ಅವಿಷ್ಕಾರಗಳು ಬೆಳವಣಿಗೆಯಾಗತೊಡಗಿದವು.

ಶತಮಾನಗಳ ಹಿಂದೆ ಮನೆಯಲ್ಲಿ ಚಿನ್ನಾಭರಣ, ಬೆಲೆಬಾಳುವ ಪ್ರಮುಖ ವಸ್ತುಗಳನ್ನು ಜೋಪಾನವಾಗಿಡಲು ಕಬ್ಬಿಣದ ಮತ್ತು ಮರದ ಸುರಕ್ಷತಾ ಪೆಟ್ಟಿಗೆಗಳನ್ನು ಬಳಕೆ ಮಾಡಲಾಗುತ್ತಿತ್ತು. ಕೂಡು ಕುಟುಂಬ ವ್ಯವಸ್ಥೆಯಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ, ಹೊಂದಾಣಿಕೆ, ಗೌರವದಿಂದ

ಜೀವನ ನಡೆಸುತ್ತಿದ್ದ ಸಂದರ್ಭ ಕಾಲಕ್ರಮೇಣ ಬದಲಾಗಿ ಚಿನ್ನಾಭರಣಗಳು ಬ್ಯಾಂಕಿನ ಭದ್ರತಾ ಕೊಠಡಿಗೆ, ಮನೆಯ ಕಪಾಟುಗಳಿಗೆ ಸ್ಥಳಾಂತರಗೊಂಡ ಪರಿಣಾಮ ಇಂಥ ಪೆಟ್ಟಿಗೆಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT