ಆನೇಕಲ್: ಲಲಿತ ಸಹಸ್ರನಾಮ ಪಾರಾಯಣದಿಂದ ಲೋಕಕಲ್ಯಾಣವಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ದೇವಿಯು ಒಲಿದು ಬೇಡಿದ್ದನ್ನು ನೀಡುತ್ತಾಳೆ. ಹಾಗಾಗಿ ಶಾಂತಿಗಾಗಿ ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯಬೇಕು ಎಂದು ಚಂದಾಪುರ ಶಾರದ ಆಶ್ರಮದ ಯತೀಶ್ವರಿ ರಾಮಾಪ್ರಿಯಾಂಭ ಅವರು ನುಡಿದರು.
ಪಟ್ಟಣದ ಶ್ರೀರಾಮ ಕುಟೀರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತ್ರಿಮೂರ್ತಿಗಳು ಲಲಿತಾ ದೇವಿಗೆ ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆದು ದುಷ್ಟ ಸಂಹಾರ ಮಾಡಲು ಅವಕಾಶ ಮಾಡಿಕೊಟ್ಟರು. ಲಲಿತಾ ಮಾತೆಯು ಸುಪ್ರಿತಳಾದರೆ ಬೇಡಿದ ವರವನ್ನು ನೀಡುತ್ತಾಳೆ. ಲಲಿತಾ ಸಹಸ್ರನಾಮಕ್ಕಿಂತ ಮಿಗಿಲು ಸ್ತೋತ್ರ ಮತ್ತೊಂದಿಲ್ಲ ಎಂಬ ಮಾತಿದೆ ಎಂದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಸದಸ್ಯರಾದ ಬಂಡಾಪುರ ರಾಮಚಂದ್ರ, ವಾತ್ಸಲ್ಯ ಲಕ್ಷ್ಮೀನಾರಾಯಣ್, ಎಂ.ಟಿ.ನಾರಾಯಣ್, ಪವಿತ್ರಾ ಜಯಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುನಿರತ್ನಮ್ಮ ನಾರಾಯಣ್, ಉಪಾಧ್ಯಕ್ಷೆ ಚಂದ್ರಕಲಾ ಮುನಿರಾಜು, ಬಿಜೆಪಿ ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಮಂಜುಳ ನೀಲಕಂಠಯ್ಯ, ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ, ಮುಖಂಡರಾದ ಕೆ.ಸಿ.ರಾಮಚಂದ್ರ, ಎಸ್.ವಿ.ರಾಘವೇಂದ್ರ, ತೇಜಸ್ವಿನಿ ನಟರಾಜ್, ಡಾ.ಸುಲೋಚನಾ, ಗೆರಟಿಗನಬೆಲೆ ರಾಮಕೃಷ್ಣ, ಸುಜಾತಾ ರಾಜಣ್ಣ ಹಾಜರಿದ್ದರು.
ರಾಮಕುಟೀರದಲ್ಲಿ ಕಿಕ್ಕಿರಿದು ಜಮಾವಣೆಗೊಂಡಿದ್ದ ಮಹಿಳೆಯರು ಎರಡು ತಾಸಿಗೂ ಹೆಚ್ಚು ಕಾಲ ಲಲಿತಾ ಸಹಸ್ರನಾಮ ಪಾರಾಯಣದಲ್ಲಿ ಪಾಲ್ಗೊಂಡರು. ಯತಿರಾಜ್ ಮತ್ತು ವಾಸು ತಂಡದವರು ಭಜನೆಗಳನ್ನು ನಡೆಸಿಕೊಟ್ಟರು. ಆಗಮಿಸಿದ್ದ ಮಹಿಳೆಯರಿಗೆ ಮಡಿಲಕ್ಕಿ ನೀಡಲಾಯಿತು.
ಜೀವನದ ಭಾಗವಾಗಲಿ
ಕಂಚಿಪೀಠ ಸೇವಾಶ್ರಮದ ಮಂಜುನಾಥ ಭಟ್ಟ ಮಾತನಾಡಿ, ಧಾರ್ಮಿಕ ಕಾರ್ಯಗಳು ನಮ್ಮ ಜೀವನದ ಭಾಗವಾಗಬೇಕು. ಪ್ರಾರ್ಥನೆ, ಧ್ಯಾನದಿಂದ ಮಹತ್ವವಾದುದ್ದನ್ನು ಸಾಧಿಸಬಹುದು. ಲಲತ ಸಹಸ್ರನಾಮ ಪಾರಾಯಣ ಮಾಡುವ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಉಂಟು ಮಾಡಬೇಕು ಎಂದರು.
ಬಿಜೆಪಿ ಮುಖಂಡ ಎ.ನಾರಾಯಣಸ್ವಾಮಿ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪೋಷಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವವಾದುದ್ದು. ಹಾಗಾಗಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ರಾಜಕೀಯ ಕ್ಷೇತ್ರಗಳಲ್ಲೂ ಮಹಿಳೆಯರು ಗುರುತಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಬೇಕು ಎಂದರು.
* *
ಆನೇಕಲ್ನಲ್ಲಿ ಮಹಿಳೆಯರು ಸಾಮೂಹಿಕವಾಗಿ ಲಲಿತ ಸಹಸ್ರನಾಮ ಪಾರಾಯಣ ಮಾಡಿರುವುದು ಶುಭ ಸೂಚನೆ
ಯತೀಶ್ವರಿ ರಾಮಾಪ್ರಿಯಾಂಭ , ಚಂದಾಪುರ ಶಾರದ ಆಶ್ರಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.