ಚಿತ್ರದುರ್ಗ: ವಿಶ್ವವಿದ್ಯಾಲಯಗಳಲ್ಲಿ ಅಂಕಪಟ್ಟಿ ಪ್ರಕರಣದ ಸುತ್ತ ನಡೆದಿರುವ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 9 ಲಕ್ಷ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 20 ಲಕ್ಷಕ್ಕೂ ಹೆಚ್ಚು ಅಂಕಪಟ್ಟಿಗಳನ್ನು ಬೇಕಾಬಿಟ್ಟಿ ಮುದ್ರಿಸಿರುವುದರಿಂದ ವಿಶ್ವವಿದ್ಯಾಲಯಗಳ ಗೋದಾಮುಗಳಲ್ಲಿ ಅವು ಕೊಳೆಯುತ್ತಿವೆ ಎಂದು ದೂರಿದರು.
ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗೆ ಅಂಕಪಟ್ಟಿ ತಯಾರಿಕೆಗೆ ಟೆಂಡರ್ ನೀಡಿರುವುದು ಸಚಿವರೇ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಇನ್ನೊಂದೆಡೆ ಎನ್ಎಸ್ಯುಐ ಈ ಅಂಕಪಟ್ಟಿ ಖರೀದಿಯಲ್ಲಿನ ಭ್ರಷ್ಟಾಚಾರವನ್ನು ಶಿಕ್ಷಣ ಸಚಿವರ ಮೇಲೆ ಹಾಕಿ, ಈಗ ಸುಮ್ಮನಿರುವುದನ್ನು ಗಮನಿಸಿದರೆ ಹಲವು ಅನುಮಾನಗಳು ಹುಟ್ಟಲು ಕಾರಣವಾಗುತ್ತದೆ ಎಂದು ಆರೋಪಿಸಿದರು.
ಅಂಕಪಟ್ಟಿಗಳ ತಯಾರಿಸುವ ತೀರ್ಮಾನವನ್ನು ವಿಶ್ವವಿದ್ಯಾಲಯಗಳಿಗೆ ನೀಡಬೇಕು. ಅವುಗಳ ಹೊಣೆಗಾರಿಕೆಗಾಗಿ ಯೋಜನೆ ರೂಪಿಸಬೇಕು. ಅಂಕಪಟ್ಟಿಗಳ ಖರೀದಿಯನ್ನು ಆಯಾ ವಿಶ್ವವಿದ್ಯಾಲಯಗಳಿಗೆ ವಹಿಸಬೇಕು. ರಾಜ್ಯದಲ್ಲಿ ಎಲ್ಲವೂ ಸೇರಿ ಒಟ್ಟು 54 ವಿಶ್ವವಿದ್ಯಾಲಯಗಳಿದ್ದು, ಅವುಗಳಿಗೆ ವಿಳಂಬ ಮಾಡದೇ ಕುಲಪತಿಗಳನ್ನು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಜಗದೀಶ್,ನಗರ ಕಾರ್ಯದರ್ಶಿ ಸತೀಶ್ ಬಿ, ಯೋಗೀಶ್, ಲಾವಣ್ಯ, ಸಿದ್ದೇಶ ಉಪಸ್ಥಿತರಿದ್ದರು.