ಉಡುಪಿ: ವರ್ಷಪೂರ್ತಿ ನಡೆದ ಮಣಿಪಾಲ್ ತಾಂತ್ರಿಕ ಸಂಸ್ಥೆಯ (ಎಂಐಟಿ) ವಜ್ರ ಮಹೋತ್ಸವ ಕಾರ್ಯ ಕ್ರಮಗಳ ಸಮಾರೋಪ ಸಮಾರಂಭ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಇದೇ 17ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಜಿ.ಕೆ. ಪ್ರಭು ಹೇಳಿದರು.
ಕರ್ನಾಟಕ ಸರ್ಕಾರದ ತಾಂತ್ರಿಕ ಪರಿಣಿತರ ಸಮಿತಿಯ ಮುಖ್ಯಸ್ಥ ಎಂ.ಎಂ. ಕಾಮತ್ ಅವರು ಕಾರ್ಯ ಕ್ರಮ ಉದ್ಘಾಟಿಸುವರು. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇ ಶನ್ನ ಕುಲಸಚಿವ ಡಾ. ನಾರಾಯಣ ಸಭಾಹಿತ್ ಅಧ್ಯಕ್ಷತೆ ವಹಿಸುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸ್ಥೆಯಿಂದ ಪದವಿ ಪಡೆದು 50 ವರ್ಷ ಪೂರೈಸಿರುವ ವಿದ್ಯಾರ್ಥಿಗಳ ‘ಗೋಲ್ಡನ್ ಮೀಟ್’ 15ರಂದು ಬೆಳಿಗ್ಗೆ 9.30ಕ್ಕೆ ಹಾಗೂ 25 ವರ್ಷ ಆಗಿರುವ ವಿದ್ಯಾರ್ಥಿಗಳ ‘ಸಿಲ್ವರ್ ಮೀಟ್’ 16ರಂದು ನಡೆಯಲಿದೆ. ನೂತನವಾಗಿ ನಿರ್ಮಾಣ ಮಾಡಿರುವ ಮಹಿಳಾ ವಿದ್ಯಾರ್ಥಿ ನಿಯಲದ ಕಟ್ಟಡವನ್ನು ಎಂಐಟಿಯ ಮೊದಲ ವಿದ್ಯಾರ್ಥಿನಿ ಸುಗುಣಿ ಕಾಮತ್ ಉದ್ಘಾಟಿಸುವರು ಎಂದರು.
ಸುಗುಣಿ ಹಾಗೂ ಹಳೆಯ ವಿದ್ಯಾರ್ಥಿಗಳಾದ ಕೆ. ಕೃಷ್ಣಮೂರ್ತಿ ಐತಾಳ್, ಜಿ. ಈಪನ್ ಅವರನ್ನು ಸನ್ಮಾನಿ ಸಲಾಗುವುದು. ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲು ವಾದನ 17ರಂದು ಸಂಜೆ 6.30ಕ್ಕೆ ನಡೆಯಲಿದೆ ಎಂದು ಹೇಳಿದರು.
ಎಂಐಟಿ ವರ್ಷಪೂರ್ತಿ ಏರ್ಪಡಿಸಿದ್ದ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ‘ಹ್ಯಾಕಥಾನ್’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಮತ್ತು ಅದಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಪ್ರಶಂಸೆ ಸಹ ಸಿಕ್ಕಿತು ಎಂದರು.
ಎಂಐಟಿಯ ಜಂಟಿ ನಿರ್ದೇಶಕ ಡಾ. ಬಿ.ಎಚ್.ವಿ. ಪೈ, ಸಹ ನಿರ್ದೇಶಕ ಡಾ. ಎಂ.ವಿ. ಕಿಣಿ ಹಾಗೂ ವಜ್ರಮಹೋತ್ಸವ ಆಚರಣ ಸಮಿತಿಯ ಮುಖ್ಯಸ್ಥ ಡಾ. ಸಿ. ರಮೇಶ ಇದ್ದರು.