ಇದೊಂದು ವಿಚಿತ್ರ ಮತ್ತು ಭಯಾನಕ ರೋಗ. ಇದರ ಹೆಸರು ‘ಮಾಮಿ ರೋಗ’. ಈಗ ಇದು ಎಲ್ಲೆಡೆ, ಎಲ್ಲಾ ರಂಗಗಳಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಚಳವಳಿ, ಹೋರಾಟಗಾರರು ಮುಕ್ತವಾಗಿಲ್ಲ. ಈ ಕಾಯಿಲೆಯಿಂದ ಎಲ್ಲರೂ ದೂರವಿರಬೇಕು!
ನಗರದಲ್ಲಿ ಭಾನುವಾರ ಲೋಕಚರಿತ ಆಯೋಜಿಸಿದ್ದ ಸಮುದಾಯ ಕೂಟದ ಮಾತುಕತೆ–ಓದು ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀನಿವಾಸ ವೈದ್ಯ ಅವರು ಇಂತಹ ಕಳಕಳಿಯ ಸಲಹೆ ನೀಡಿದರು.
ಡೆಂಗೆ, ಚಿಕುನ್ಗುನ್ಯಾ, ಮಲೇರಿಯಾ ಎಲ್ಲೆಡೆ ಸಾಮಾನ್ಯವಾಗಿ ಕಾಡುತ್ತಿವೆ; ಆದರೆ, ಇದ್ಯಾವುದು ಹೊಸ ಕಾಯಿಲೆ ಎಂದು ಸಭಿಕರು ತಲೆ ಕೆರೆದುಕೊಳ್ಳುತ್ತಿರುವಾಗಲೇ, ‘ವೈದ್ಯರು’, ಮಾಮಿ ಎಂದರೆ, ‘ಮಾಧ್ಯಮದಲ್ಲಿ ಮಿಂಚುವ’ ಕಾಯಿಲೆ ಎಂದು ಇದರ ವಿಸ್ತೃತ ರೂಪ ವಿವರಿಸಿದರು.
ಹೋರಾಟ, ಚಳವಳಿಗಳೂ ಕೂಡ ಹದಿನೈದು–ಇಪ್ಪತ್ತು ಪತ್ರಿಕೆಗಳಲ್ಲಿ ಸುದ್ದಿ ಮತ್ತು ಚಿತ್ರಗಳು ಪ್ರಕಟವಾಗುವುದಕ್ಕೆ ಸೀಮಿತವಾಗುತ್ತಿವೆ. ಮರು ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿ ತುಣುಕು ಕತ್ತರಿಸಿಟ್ಟುಕೊಳ್ಳಲು ಎದುರು ನೋಡುವವರೂ ಇದ್ದಾರೆ. ‘ಮಾಮಿ ರೋಗ’ದಿಂದ ದೂರವಿರದಿದ್ದರೆ ಯಾವ ಚಳವಳಿ, ಹೋರಾಟಗಳೂ ಸಾರ್ಥಕವಾಗುವುದಿಲ್ಲ. ಮಾಮಿ ರೋಗ ತೊಲಗಲಿ ಎನ್ನುವ ಅವರ ಮಾತಿನಲ್ಲಿ ‘ಪ್ರಚಾರ ಪ್ರಿಯರ’ ಕಾಯಿಲೆಗೆ ರಾಮಬಾಣವಿತ್ತು!