ನವದೆಹಲಿ: ದೇಶಕ್ಕೆ ಅಗತ್ಯವಾಗಿರುವ ‘ಆಶಾವಾದದ ರಾಜಕಾರಣ’ವನ್ನು ಕಾಂಗ್ರೆಸ್ನ ಹೊಸ ಮುಖ್ಯಸ್ಥ ರಾಹುಲ್ ಗಾಂಧಿ ಎತ್ತಿ ಹಿಡಿಯಲಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
‘ಭಯ ಹುಟ್ಟಿಸುವ ರಾಜಕಾರಣ’ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಾಹುಲ್ ಅವಕಾಶ ನೀಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ‘ದೇಶದ ಆಡಳಿತ ವ್ಯವಸ್ಥೆಯಲ್ಲಿ ಕೆಲವು ಕಳವಳಕಾರಿ ಪ್ರವೃತ್ತಿಗಳು ಕಂಡು ಬರುತ್ತಿವೆ. ಇಂತಹ ವ್ಯವಸ್ಥೆಯ ಪರಿವರ್ತನೆಗಾಗಿ ಜನರು ರಾಹುಲ್ ಅವರನ್ನು ಅವಲಂಬಿಸಿದ್ದಾರೆ’ ಎಂದು ಹೇಳಿದರು.
‘ಪಕ್ಷದ ಇತಿಹಾಸದಲ್ಲಿ ಇಂದು ವಿಶಿಷ್ಟ ದಿನ’ ಎಂದು ಬಣ್ಣಿಸಿದ ಅವರು, ‘ರಾಹುಲ್ ಗಾಂಧಿ ನಾಯಕತ್ವವು ಅರ್ಪಣೆ ಮತ್ತು ಬದ್ಧತೆಯ ಹೊಸ ಪ್ರಜ್ಞೆ ಮೂಡಿಸಿದೆ. ಇದು ಪಕ್ಷವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ’ ಎಂದರು.
ಪಕ್ಷಕ್ಕೆ ಬಲಿಷ್ಠ ಮತ್ತು ಅತ್ಯುತ್ತಮ ನಾಯಕತ್ವ ಒದಗಿಸಿದ್ದಕ್ಕಾಗಿ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಸಿಂಗ್ ಶ್ಲಾಘಿಸಿದರು. ಸೋನಿಯಾ
ಅವರ ನಾಯಕತ್ವವು ಪಕ್ಷದ ಇತಿಹಾಸದಲ್ಲಿ ಪ್ರಮುಖವಾಗಿ ದಾಖಲಾಗಲಿದೆ ಎಂದು ಹೇಳಿದರು.
‘ಭ್ರಷ್ಟ ಸಂಸ್ಕೃತಿ ಬದಲಾಗದು’
ಕಾಂಗ್ರೆಸ್ ಅಧ್ಯಕ್ಷರು ಬದಲಾದರೂ ಅದರ ‘ಕಾರ್ಯ ವೈಖರಿ’ ಮತ್ತು ‘ಭ್ರಷ್ಟಾಚಾರ ಸಂಸ್ಕೃತಿ’ ಬದಲಾಗುವುದಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಹುಲ್ ಬಿಜೆಪಿ ವಿರುದ್ಧ ಮಾಡಿದ ವಾಗ್ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್ ‘ಭ್ರಷ್ಟ ಯೋಚನಾ ವಿಧಾನ’ ಹೊಂದಿರುವ ಪಕ್ಷ ಎಂದು ಟೀಕಿಸಿದ್ದಾರೆ.