ಮಂಗಳೂರು: ಲಕ್ಷದ್ವೀಪದ ಅಂಡ್ರೋಥ್ ದ್ವೀಪದ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗಿನ 8 ಜನರನ್ನು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ರಕ್ಷಿಸಿದ್ದಾರೆ.
ಶುಕ್ರವಾರ ಲಕ್ಷದ್ವೀಪದ ಅಧಿಕಾರಿಗಳಿಂದ ಮಾಹಿತಿ ಪಡೆದ ಕರ್ನಾಟಕ ಕರಾವಳಿ ಕಾವಲು ಪಡೆಯ ಅಧಿಕಾರಿಗಳ ತಂಡ, ಸಾವಿತ್ರಿ ಬಾಯಿ ಪುಲೆ ನೌಕೆಯೊಂದಿಗೆ ಕಾರ್ಯಾಚರಣೆ ಇಳಿಯಿತು.
ಇಟ್ಟಿಗೆ, ಸಿಮೆಂಟ್ ಹಾಗೂ ತರಕಾರಿ ಸೇರಿದಂತೆ 240 ಟನ್ ಸಾಮಗ್ರಿಯನ್ನು ಸಾಗಿಸುತ್ತಿದ್ದ ಎಂಎಸ್ವಿ ಸುಮಿತ್ರ ಹಡಗು, ಅಂಡ್ರೋಥ್ ಬಳಿ ಮುಳುಗುವ ಹಂತದಲ್ಲಿತ್ತು. ಬೇಪೋರ್ಟ್ ಬಂದರಿನಿಂದ ಹೊರಟಿದ್ದ ಈ ಹಡಗು, ಎಂಜಿನ್ ಸ್ಥಗಿತಗೊಂಡಿದ್ದರಿಂದ ಡಿಸೆಂಬರ್ 13ರಿಂದ ನಿಯಂತ್ರಣ ಕಳೆದುಕೊಂಡಿತ್ತು.
ಅಂಡ್ರೋಥ್ ದ್ವೀಪದತ್ತ ಧಾವಿಸಿದ ಸಾವಿತ್ರಿಬಾಯಿ ಫುಲೆ ನೌಕೆಯು, ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ಗಳ ಸಹಾಯದಿಂದ ಹಡಗನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಯಿತು. ಕತ್ತಲೆ ಹಾಗೂ ಹವಾಮಾನ ವೈಪರೀತ್ಯದ ನಡುವೆಯೂ ಯಶಸ್ವಿ ಕಾರ್ಯಾಚರಣೆ ನಡೆಸಿ, ಎಲ್ಲ 8 ಜನರನ್ನು ರಕ್ಷಿಸಲಾಯಿತು. ಅಸ್ವಸ್ಥಗೊಂಡಿದ್ದ ಎಲ್ಲರನ್ನೂ ಶನಿವಾರ ಅಂಡ್ರೋಥ್ ದ್ವೀಪಕ್ಕೆ ಕರೆದೊಯ್ದು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್.ಎಸ್. ದಾಸಿಲ್ ತಿಳಿಸಿದ್ದಾರೆ.
* ಕರಾವಳಿ ಕಾವಲು ಪಡೆಯ ಆಧುನಿಕ ಸೌಕರ್ಯಗಳು ಮತ್ತು ಉತ್ತಮ ಸಂವಹನದ ಪರಿಣಾಮವಾಗಿ ಎಲ್ಲ 8 ಜನರನ್ನು ರಕ್ಷಿಸಲು ಸಾಧ್ಯವಾಗಿದೆ.