ಮಂಗಳೂರು: ಕದ್ರಿ ಪಾರ್ಕ್ ಪುಟಾಣಿ ರೈಲಿನ ಬೋಗಿ ಎರಡು ದಿನಗಳಲ್ಲಿ ಮೈಸೂರಿನಿಂದ ಮಂಗಳೂರಿಗೆ ಬರಲಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಕದ್ರಿ ಪಾರ್ಕ್ ಪುಟಾಣಿ ರೈಲಿನ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಈ ಕಾಮಗಾರಿ ವಿಳಂಬವಾಯಿತು ಎನ್ನುವುದನ್ನು ಅಲ್ಲಗಳೆದ ಲೋಬೊ, ಇಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ಅವುಗಳನ್ನು ನಿವಾರಿಸುವುದಕ್ಕೆ ವಿಳಂಬವಾಗಿದೆಯೇ ಹೊರತು ಈ ಕಾಮಗಾರಿಯಲ್ಲಿ ವಿಳಂಬವಾಗಿಲ್ಲ ಎಂದರು.
ಇದು ಆರಂಭದಲ್ಲಿ ₹30 ಲಕ್ಷ ಇದ್ದುದು, ಈಗ ₹1.30 ಕೋಟಿಗೆ ಬಂದಿದೆ. ಈ ಕಾಮಗಾರಿಯನ್ನು ಮಾಡುತ್ತಾ ಹೋದಂತೆ ಬದಲಾವಣೆ ಮಾಡಬೇಕಾಯಿತು. ಈಗ ಕೊನೆಯ ಹಂತದಲ್ಲಿದೆ ಎಂದರು.
ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಿ, ಇದರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ನಂತರ ಅದನ್ನು ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಇದಕ್ಕೆ ರೈಲ್ವೇ ಇಲಾಖೆ ಪರೀಕ್ಷೆ ಮಾಡಿ ಒಪ್ಪಿಗೆ ಕೊಡಬೇಕು. ಅವರು ಕೊಟ್ಟ ನಂತರವೇ ಇದನ್ನು ಸಂಚಾರಕ್ಕೆ ಬಿಡಲು ಸಾಧ್ಯ ಎಂದರು.
ಈ ಕಾಮಗಾರಿ ತಡವಾದುದಕ್ಕೆ ವಿವರಣೆ ನೀಡಿದ ಶಾಸಕ ಲೋಬೊ, ಆರಂಭದಲ್ಲಿ ಹುಬ್ಬಳ್ಳಿಯವರು ಈ ರೈಲಿನ ಬೋಗಿಗಳನ್ನು ಸಿದ್ಧಪಡಿಸುವುದಾಗಿ ಒಪ್ಪಿದ್ದರು, ಕೊನೆ ಕ್ಷಣದಲ್ಲಿ ಅವರು ಕೈಬಿಟ್ಟರು. ನಂತರ ಮೈಸೂರನ್ನು ಕೇಳಬೇಕಾಯಿತು ಎಂದರು.
ಇದರ ಕಾಮಗಾರಿ ಮುಗಿಯುತ್ತಿದೆ. ರೈಲ್ವೆ ಹಳಿ ಜೋಡಣೆ ಕೆಲಸವೂ ಪೂರ್ಣ ಗೊಂಡಿದೆ. ಇನ್ನು ರೈಲ್ವೆ ಇಲಾಖೆಯಿಂದ ಒಪ್ಪಿಗೆ ಸಿಕ್ಕ ತಕ್ಷಣ ಪುಟಾಣಿ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.