ಗದಗ: ‘ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ರಾಜ್ಯ ಸರ್ಕಾರವೇ ನೇರವಾಗಿ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ’ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದರು.
‘ಲಿಂಗಾಯತರು, ವೀರಶೈವರು– ಇಬ್ಬರೂ ಜತೆಯಾಗಿ ಬಂದರೆ ಸ್ವತಂತ್ರ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಈಗ ಚುನಾವಣೆ ಸಂದರ್ಭದಲ್ಲಿ ದಿಢೀರ್ ನಿಲುವು ಬದಲಿಸಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಿಸಲು ಪ್ರಯತ್ನ ನಡೆಸಿದ್ದಾರೆ.
ಈ ರೀತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಖಂಡನಾರ್ಹ. ಸರ್ಕಾರ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಸಿದ್ದರಾಮಯ್ಯ ಅವರಿಗೆ ನೈಜ ಕಾಳಜಿ ಇದ್ದರೆ ಧರ್ಮ ಒಗ್ಗೂಡಿಸಲು ಪ್ರಯತ್ನಿಸಬೇಕು. ಪ್ರತ್ಯೇಕ ಧರ್ಮದ ಪ್ರಸ್ತಾವ ಕೈಬಿಟ್ಟು, ವೀರಶೈವ– ಲಿಂಗಾ
ಯತ ಸಮುದಾಯದ ಎಲ್ಲ ಒಳಪಂಗಡದವರಿಗೆ ಸಮಾನ ಮೀಸಲಾತಿ ಕಲ್ಪಿಸಬೇಕು ಅಥವಾ ಅವರಿಗೆ ಪ್ರತ್ಯೇಕ ಪ್ರವರ್ಗವನ್ನೇ ರಚಿಸಬೇಕು’ ಎಂದು ಆಗ್ರಹಿಸಿದರು.
‘ವೀರಶೈವ– ಲಿಂಗಾಯತ ಸನಾತನ ಧರ್ಮ. ಬಹಿರಂಗವಾಗಿ ಯಾರೂ ಇದುವರೆಗೆ ಭಿನ್ನಮತ ಎತ್ತಿರಲಿಲ್ಲ. ಈಗ ಧರ್ಮದ ವಿಚಾರದಲ್ಲಿ ರಾಜಕೀಯ ಪ್ರವೇಶವಾದ ನಂತರ ಇಷ್ಟೆಲ್ಲಾ ಕೋಲಾಹಲ ಸೃಷ್ಟಿಯಾಗಿದೆ. ಡಿ.24ರಂದು ಗದುಗಿನಲ್ಲಿ ನಡೆಯುವ ಸಮಾವೇಶವು ಸಮನ್ವಯ ಸಮಾವೇಶವೇ ಹೊರತು, ಸವಾಲಿನ ಸಮಾವೇಶ ಅಲ್ಲ’ ಎಂದರು.