ಹಳಿಯಾಳ: ಕರಾವಳಿ ಉತ್ಸವದ ಅಂಗವಾಗಿ ಹಳಿಯಾಳ ಉತ್ಸವ ಶನಿವಾರ ಅದ್ಧೂರಿಯಿಂದ ನಡೆಯಿತು. ಬೆಳಿಗ್ಗೆ ಪ್ರತಿ ಬಡಾವಣೆಗಳಲ್ಲಿ ಪ್ರತಿ ಮನೆ ಮುಂದೆ ಬಡಾವಣೆ ನಾಗರಿಕರು ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಬಡಾವಣೆಯನ್ನು ತಳಿರು ತೋರಣದಿಂದ ಸಿಂಗರಿಸಿದ್ದು ಕಾಣ ಬರುತ್ತಿತ್ತು.
ಉತ್ಸವದ ಅಂಗವಾಗಿ ಕರಾಟೆ ಸ್ಪರ್ಧೆ, ಜ್ಞಾನ ವಿಜ್ಞಾನ ತಂತ್ರಜ್ಞಾನ, ಕವಿಗೋಷ್ಠಿ, ಹಿರಿಯ ನಾಗರಿಕರಿಗಾಗಿ ಸ್ಪರ್ಧೆ, ಯುವಕ ಯುವತಿಯರಿಗೆ ವಾಲಿಬಾಲ್, ಬ್ಯಾಡ್ಮಿಂಟನ್, ಕಬಡ್ಡಿ ಪಂದ್ಯಾವಳಿ ನಡೆಯಿತು.
ಶನಿವಾರ ಬೆಳಿಗ್ಗೆ ಸ್ಥಳಿಯ ಎಪಿಎಂಸಿ ಆವರಣದಲ್ಲಿ ಜಾನುವಾರು ಹಾಗೂ ಶ್ವಾನ ಪ್ರದರ್ಶನ ನಡೆಯಿತು. ಶಿವಾಜಿ ಮೈದಾನದಲ್ಲಿ ಗುರುಕಿರಣ ತಂಡದವರಿಂದ ರಸ ಮಂಜರಿ, ಯಶವಂತರಾವ ಸರದೇಶಪಾಂಡೆ ಅವರಿಂದ ರಾಶಿಚಕ್ರ ನಾಟಕ ಪ್ರದರ್ಶನ ಹಾಗೂ ಸ್ಥಳಿಯ ವಿವಿಧ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಉತ್ಸವದ ಅಂಗವಾಗಿ ಸ್ಥಳಿಯ ಪುರಸಭೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ವಿಶೇಷ ಮೆರಗನ್ನು ನೀಡಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿಲ್ಲೆಯ ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.