ಕೊಲ್ಕತ್ತ: ಕರ್ನಾಟಕ ಎದುರಿನ ರಣಜಿ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ 185ರನ್ಗಳಿಗೆ ಆಲೌಟ್ ಆಗಿದೆ.
ಇಲ್ಲಿನ ಈಡನ್ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡದ ನಾಯಕ ಫಯಾಜ್ ಫಜಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಸಂಜಯ್ ರಾಮಸ್ವಾಮಿ ಜತೆ ಇನಿಂಗ್ಸ್ ಆರಂಭಿಸಿದ ಅವರು ತಂಡದ ಮೊತ್ತ 22 ಆಗಿದ್ದ ವೇಳೆ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಬಳಿಕ ಬಂದ ಅನುಭವಿ ಆಟಗಾರ ವಾಸಿಂ ಜಾಫರ್(39), ಸಂಜಯ್(22) ಜತೆ ಸೇರಿ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಲು ಪ್ರಯತ್ಸಿಸಿದರೂ ಫಲ ಸಿಗಲಿಲ್ಲ. ಊಟದ ವಿರಾಮಕ್ಕೂ ಮುನ್ನ 32 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದ್ದ ವಿದರ್ಭ ತಂಡವು ಚಹಾದ ವೇಳೆಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಕರ್ನಾಟಕ ಪರ ವೇಗಿ ಅಭಿಮನ್ಯು ಮಿಥುನ್ 45ರನ್ ನೀಡಿ 5 ವಿಕೆಟ್ ಉರುಳಿಸಿ ಎದುರಾಳಿ ತಂಡದ ಬ್ಯಾಟಿಂಗ್ ಬಲ ಕುಗ್ಗಿಸಿದರು.
ಸದ್ಯ ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ತಂಡ 7 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ಮನ್ಗಳಾದ ಆರ್.ಸಮರ್ಥ್(06) ಹಾಗೂ ಈ ಬಾರಿಯ ಪಂದ್ಯಾವಳಿಯಲ್ಲಿ ಅತಿಹೆಚ್ಚು ರನ್ಗಳಿಸಿರುವ ಮಯಾಂಕ್ ಅಗರ್ವಾಲ್(15) ವಿಕೆಟ್ ಒಪ್ಪಿಸಿದ್ದಾರೆ.
ಡಿ ನಿಶ್ಚಲ್(0) ಹಾಗೂ ಕರುಣ್ ನಾಯರ್(0) ಕ್ರೀಸ್ನಲ್ಲಿದ್ದಾರೆ.