ಹನೂರು: ‘ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಸೊಗಡಿನ ಪಗಡೆಯಾಟ, ಚೌಕಾಬಾರಾ, ಅಳುಗುಳಿಮನೆ ಸೇರಿದಂತೆ ಇತರೆ ಆಟಗಳು ಕಣ್ಮರೆಯಾಗುತ್ತಿವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಡಿ.ಲೇಖಾ ವಿಷಾದಿಸಿದರು.
ಪಟ್ಟಣ ಸಮೀಪದ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದಿಂದ ನಡೆದ ಹನೂರು ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಗಳು ಮನುಷ್ಯನಿಗೆ ಆರೋಗ್ಯ ವೃದ್ಧಿಸಲು ಸಹಕಾರಿ. ಆದರೆ, ಈಗ ಕ್ರೀಡಾ ಚಟುವಟಿಕೆಗಳು ಮರೆಯಾಗಿ ಇಂದಿನ ಯುವ ಸಮೂಹ ಕೇವಲ ಮೊಬೈಲ್, ಅಂತರ್ಜಾಲದಲ್ಲೇ ಕಾಲಹರಣ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಮನಸ್ಸಿನ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವ ಜತೆಗೆ, ದೇಹಕ್ಕೆ ವ್ಯಾಯಾಮವಿಲ್ಲದೆ ಹಲವು ರೋಗಗಳು ಕಾಡಲು ಪ್ರಾರಂಭವಾಗುತ್ತವೆ. ಕ್ರೀಡೆ ಸ್ಪರ್ಧೆಗೆ ಮಾತ್ರ ಸೀಮಿತವಾಗಿಲ್ಲ. ಅದು ದೇಹವನ್ನು ಸದೃಢವಾಗಿರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಚಲುವಯ್ಯ ಮಾತನಾಡಿ, ಇಲಾಖೆಯಿಂದ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಕಬಡ್ಡಿ, ಕೊಕ್ಕೊ, ವಾಲಿಬಾಲ್ ಮುಂತಾದ ಸ್ಫರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ರೀಡಾಕೂಟದ ಕಬಡ್ಡಿ ಸ್ಫರ್ಧೆಯಲ್ಲಿ ಮಾರ್ಗರೆಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ, ಮಂಗಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.
ಕೊಕ್ಕೊದಲ್ಲಿ ಹನೂರಿನ ವಿವೇಕಾ ನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ, ಮಂಗಲ ಗ್ರಾಮದ ಜೈ ಭೀಮ್ ಯುವಕರ ಸಂಘ ದ್ವಿತೀಯ ಸ್ಥಾನ ಪಡೆದುಕೊಂಡವು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷ ಎಂ. ಉಮೇಶ್ ಮುಖ್ಯಶಿಕ್ಷಕಿ ಶಾಂತಕುಮಾರಿ, ಎಸ್ಡಿಎಂಸಿ ಅಧ್ಯಕ್ಷ ಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಸ್ಟೀವನ್, ಸಿಬ್ಬಂದಿ ಗಳಾದ ಬಿ.ಕೆ. ಗೋಪಾಲ್, ಬಸವಣ್ಣ, ರಂಗಸ್ವಾಮಿ, ಯುವ ಪರಿವರ್ತಕರಾದ ಶಿವಕುಮಾರ್, ಮಹೇಶ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.