ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂವರೆ ದಶಕದ ಬೇಡಿಕೆಗೆ ಮನ್ನಣೆ: ಹರ್ಷ

Last Updated 20 ಡಿಸೆಂಬರ್ 2017, 6:03 IST
ಅಕ್ಷರ ಗಾತ್ರ

ವಿಜಯಪುರ: ದೇಶದ ಸ್ವಾತಂತ್ರ್ಯ ಹೋರಾಟದ ಕಣಕ್ಕೆ ಧುಮುಕಿದ ಮೊದಲ ಮಹಿಳಾ ಮಣಿ, ವೀರ ರಾಣಿ ಕಿತ್ತೂರ ಚನ್ನಮ್ಮನ ಅಶ್ವಾರೂಢ ಪ್ರತಿಮೆ ನಿರ್ಮಿಸಬೇಕು ಎಂಬ ಜಿಲ್ಲೆಯ ಜನರ ಮೂರೂವರೆ ದಶಕದ ಕನಸನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನನಸಾಗಿಸಲಿದ್ದಾರೆ.

ನಗರದ ಕೇಂದ್ರ ಬಸ್‌ ನಿಲ್ದಾಣ ಮುಂಭಾಗದ ಉದ್ಯಾನದ ಆವರಣದಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಗಾಗಿ 30X40 ಅಳತೆಯ ನಿವೇಶನವನ್ನು ಈಗಾಗಲೇ ಮಹಾನಗರ ಪಾಲಿಕೆ ಆಡಳಿತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆಯ ಶಿಲಾನ್ಯಾಸ ಸಮಾರಂಭ ಮುಸ್ಸಂಜೆ ನಡೆಯಲಿದೆ.

ಜಿಲ್ಲಾಡಳಿತದ ಸಹಯೋಗದಲ್ಲಿ ಇದೇ ಸಂದರ್ಭ ಕಿತ್ತೂರ ರಾಣಿ ಚನ್ನ ಮ್ಮಾಜಿಯವರ 239ನೇ ಜಯಂತ್ಯುತ್ಸವ ನಡೆದರೆ, ಪಂಚಮಸಾಲಿ ಸಮಾಜ ಸೇರಿದಂತೆ ವಿವಿಧ ಸಮಾಜದಲ್ಲಿನ ಅಭಿಮಾನಿ ಬಳಗ 194ನೇ ವಿಜಯೋ ತ್ಸವವನ್ನು ಆಚರಿಸಲು ಸಿದ್ಧತೆ ನಡೆಸಿದೆ.

ಎರಡು ತಿಂಗಳಿಂದ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾ ಪಂಚಮಸಾಲಿ ಸಮಾಜ, ವಿವಿಧ ಸಂಘ–ಸಂಸ್ಥೆಗಳು ಅಹೋರಾತ್ರಿ ಶ್ರಮಿಸುತ್ತಿವೆ. ಕನಿಷ್ಠ ಮೂರ್ನಾಲ್ಕು ಸಹಸ್ರ ಜನರನ್ನು ಸೇರಿಸಿ, ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ ನೆರವೇರಿಸಲು ಅಂತಿಮ ಹಂತದ ತಯಾರಿಯನ್ನು ಪೂರ್ಣಗೊಳಿಸಿವೆ ಎಂದು ಜಿಲ್ಲಾ ಪಂಚಮಸಾಲಿ ಸಮಾಜದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಿರಿಯರ ಬೇಡಿಕೆ: ‘ವಿಜಯಪುರದ ಹೃದಯ ಭಾಗ ಕೇಂದ್ರ ಬಸ್‌ ನಿಲ್ದಾಣ ಮುಂಭಾಗದ ವೃತ್ತಕ್ಕೆ ಚನ್ನಮ್ಮ ವೃತ್ತ ಎಂದು ನಾಮಕರಣಗೊಳಿಸುವ ಜತೆಗೆ, ಆ ವೃತ್ತದಲ್ಲೇ ಚನ್ನಮ್ಮಾಜಿಯ ಬೃಹತ್ ಅಶ್ವಾರೂಢ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂಬುದು ಜಿಲ್ಲೆಯ ಹಿರಿಯರ ದಶಕಗಳ ಬೇಡಿಕೆಯಾಗಿತ್ತು.

ಪಂಚಮಸಾಲಿ ಪೀಠದ ಪೀಠಾ ಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾನೂ ಇದಕ್ಕೆ ದನಿಗೂಡಿಸಿದೆ. 2015ರಲ್ಲಿ ಸಮಾಜ ಸಂಘಟಿಸುವ ಸಂದರ್ಭ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿ, ಒತ್ತಡ ಹಾಕಲಾಗಿತ್ತು. ಆಗಿನ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಸ್‌ ನಿಲ್ದಾಣದ ಸನಿಹದಲ್ಲಿದ್ದ ಆಟೊ ನಿಲ್ದಾಣದ ಚಾಲಕರನ್ನು ಪರಿಗಣಿಸಿ, ಮಾತುಕತೆ ನಡೆಸಿ ಯಾವುದೇ ವಿವಾದಕ್ಕೆ ಆಸ್ಪದ ನೀಡದಂತೆ ಸ್ಥಳದ ಸಮಸ್ಯೆ ಪರಿಹರಿಸಿಕೊಂಡು, ಪ್ರತಿಷ್ಠಾಪನೆಗೆ ಜಿಲ್ಲಾಡಳಿತ, ಮಹಾ ನಗರ ಪಾಲಿಕೆ ಆಡಳಿತದ ಸಹಕಾರ ಪಡೆದುಕೊಳ್ಳಲಾಗಿದೆ’ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎಲ್ಲರಿಂದ ದೇಣಿಗೆ: ‘ಸರ್ವ ಸಮಾಜದವರ ಸಹಕಾರದಿಂದ ಚನ್ನಮ್ಮಾಜಿಯ ಪ್ರತಿಮೆ ಪ್ರತಿಷ್ಠಾಪನೆಗೊಳಿಸಲಾಗುವುದು. ‘ವೀರ ರಾಣಿ ಕಿತ್ತೂರ ಚನ್ನಮ್ಮ ಪ್ರತಿಮೆ ಅನಾವರಣ ಸಮಿತಿ’ ಸದಸ್ಯರು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ’ ಎಂದು ಪಂಚಮಸಾಲಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಪಾಟೀಲ ದೇವರಹಿಪ್ಪರಗಿ ತಿಳಿಸಿದರು.

‘ಕಂಚಿನ ಮೂರ್ತಿಯನ್ನೇ ಪ್ರತಿಷ್ಠಾಪಿ ಸಬೇಕು ಎಂಬುದು ಎಲ್ಲರ ಅಪೇಕ್ಷೆ. ಇದಕ್ಕಾಗಿ ಈಗಾಗಲೇ ಕೊಲ್ಹಾಪುರ, ಬೆಳಗಾವಿ, ಮೀರಜ್‌ಗೆ ತೆರಳಿ ಮಾದರಿ ಯನ್ನು ನೋಡಿಕೊಂಡು ಬಂದಿದ್ದಾರೆ. ಈ ಮೂರು ಕಡೆ ಕಂಚಿಗೆ ಇನ್ನಿತರ ಲೋಹ ಮಿಶ್ರಣ ಮಾಡುತ್ತಾರೆ ಎಂಬ ದೂರಿದೆ. ಉದಯಪುರದ ಕಲಾವಿದರು ಸಮಿತಿಯವರನ್ನು ಸಂಪರ್ಕಿಸಿದ್ದಾರೆ. ಹನ್ನೆರೆಡೂವರೆ ಅಡಿ ಅಥವಾ ಹದಿನೈದು ಅಡಿ ಎತ್ತರದ ಮೂರ್ತಿ ಸಿದ್ಧಗೊಳಿಸಿಕೊಡುವುದಾಗಿ ತಿಳಿಸಿದ್ದಾರೆ. ಮತ್ತೊಮ್ಮೆ ಸಭೆ ಸೇರಲಾಗುವುದು ಎಂದು ಪಾಟೀಲ ಹೇಳಿದರು.

* * 

ಮುಂಬರುವ ಬಸವ ಜಯಂತಿ ಯೊಳಗೆ ಚನ್ನಮ್ಮ ಮೂರ್ತಿ ಅನಾವರಣಗೊಳಿಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT