ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆಯುಕ್ತ ತಿಪ್ಪೆಗುಂಡಿಗಳು, ರೋಗದ ಭೀತಿಯಲ್ಲಿ ಜನ

Last Updated 20 ಡಿಸೆಂಬರ್ 2017, 9:25 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಬೆಳ್ಳಾವಿ ಗ್ರಾಮದಲ್ಲಿ ಕೆಲವರು ಮನೆಗಳ ಬಳಿ ತಿಪ್ಪೆಗುಂಡಿಗಳನ್ನು ನಿರ್ಮಿಸಿ ಕಸ ತುಂಬುತ್ತಿರುವುದರಿಂದ ಗ್ರಾಮದಲ್ಲಿ ದುರ್ವಾಸನೆಯ ವಾತಾವರಣ ನಿರ್ಮಾಣವಾಗಿದ್ದು, ಸೊಳ್ಳೆ ಕಾಟ ಕೂಡ ಹೆಚ್ಚಾಗಿರುವುದರಿಂದ ಇಲ್ಲಿನ ಜನರು ರೋಗದ ಭೀತಿಯಲ್ಲಿದ್ದಾರೆ.

ತಾಲ್ಲೂಕಿನ ಕಸಬ ಹೋಬಳಿಯ ತೋರ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಾವಿ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹೈನುಗಾರಿಕೆ ಮಾಡುವ ಕುಟುಂಬಗಳು ಸಹಜವಾಗಿ ಕಂಡುಬಂದರೂ, ಈ ಕುಟುಂಬಗಳು ಸ್ವಚ್ಛತೆಯ ಕಡೆಗೂ ಗಮನ ಹರಿಸುತ್ತಿದ್ದರು. ಆದರೆ ಒಂದೆರಡು ಕುಟುಂಬಗಳು ಮಾತ್ರ ಸ್ವಚ್ಛತೆಯ ಬಗ್ಗೆ ಗಮನ ಹರಿಸದ ಕಾರಣ ಇತರ ಕುಟುಂಬಗಳು ಕೂಡದುರ್ವಾಸನೆಯುಕ್ತ ಮತ್ತು ರೋಗದ ಭಯವಿರುವ ವಾತಾವರಣದಲ್ಲಿ ಬದುಕು ಸಾಗಿಸುವಂತೆ ಮಾಡಿದೆ.

ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಒಂದೆರಡು ಕುಟುಂಬಗಳು ಇತರರಿಗೆ ತೊಂದರೆಯಾಗುತ್ತದೆ ಎನ್ನುವುದರ ಬಗ್ಗೆ ಪರಿವೇ ಇಲ್ಲದಂತೆ ‌‌ಇನ್ನೊಬ್ಬರ ಮನೆಗಳ ಮುಂದೆ ಮತ್ತು ಅಕ್ಕ ಪಕ್ಕದಲ್ಲಿ ತಿಪ್ಪೆಗುಂಡಿಗಳನ್ನು ನಿರ್ಮಿಸಿ ಗೊಬ್ಬರ ತುಂಬಿಸಿದ್ದಾರೆ. ಜತೆಗೆ ರಾಸುಗಳನ್ನು ತೊಳೆಯುವ ನೀರು ಮತ್ತು ಅವುಗಳ ಗಂಜಲವನ್ನು ಗುಂಡಿಗಳಿಗೆ ಹರಿದು ಬಿಡುತ್ತಿರುವುದರಿಂದ ತಿಪ್ಪೆಗುಂಡಿಗಳ ದುರ್ವಾಸನೆ ಬೇರೆಯ ಮನೆಯವರಿಗೂ ಹರಡುತ್ತಿದೆ ಎನ್ನುತ್ತಾರೆ ಹಿರಿಯ ಗ್ರಾಮಸ್ಥರೊಬ್ಬರು.

ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು, ಸಂಜೆಯಾಗುತ್ತಿದ್ದಂತೆ ಮನೆಯ ಮಕ್ಕಳನ್ನು ಒಳಗೆ ಹಾಕಿ ಮನೆಗಳ ಬಾಗಿಲುಗಳನ್ನು ಬಂದ್ ಮಾಡಿಕೊಳ್ಳುವ ಪರಸ್ಥಿತಿ ಎದುರಾಗಿದೆ ಎಂದು ನೊಂದುಕೊಂಡು ಹೇಳುತ್ತಾರೆ.

ಪಂಚಾಯಿತಿಯಿಂದ ಪೈಪ್ ಮೂಲಕ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಎತ್ತರದಲ್ಲಿರುವ ಮನೆಗಳಗೆ ನೀರು ಹರಿಯದ ಹಿನ್ನಲೆಯಲ್ಲಿ ಮನೆಗಳ ಬಳಿ ಹಳ್ಳ ಮಾಡಿ ನೀರನ್ನು ಕೊಡಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಆದರೆ ಪಕ್ಕದಲ್ಲೇ ಇರುವ ತಿಪ್ಪೆ ಗುಂಡಿಗಳಲ್ಲಿರುವ ಕೊಳಚೆ ನೀರು ಕುಡಿಯುವ ನೀರಿನ ಸಂಗ್ರಹಕ್ಕೆ ಮಾಡಿರುವ ಹಳ್ಳಗಳಿಗೆ ತುಂಬಿಕೊಳ್ಳುವುದರಿಂದ ಕುಡಿಯುವ ನೀರು ಕಲುಷಿತವಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ: ಬೆಳ್ಳಾವಿ ಗ್ರಾಮದ ನಿವಾಸಿ ಚಿಕ್ಕಬಸವರಾಜು ಈಗಾಗಲೇ ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ‘ಪಂಚಾಯಿತಿ ಅಧಿಕಾರಿಗಳು ರಾಜಿ ಸಂಧಾನ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸುತ್ತಾರೆ. ಆದರೆ ಯಾವುದೇ ಪ್ರಯೋಜನವೂ ಆಗಿಲ್ಲ’ ಎನ್ನುತ್ತಾರೆ ಚಿಕ್ಕಬಸವರಾಜು.

* * 

ಕೊಳಚೆ ನೀರು ಮಿಶ್ರಿತ ನೀರನ್ನು ಕುಡಿಯುವುದರಿಂದ ಗ್ರಾಮದ ಹಲವರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಾಸನೆ ಮತ್ತು ಸೊಳ್ಳೆ ಕಾಟದಿಂದಲೂ ಮುಕ್ತಿ ಸಿಗಬೇಕಾಗಿದ್ದು, ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕಾಗಿದೆ
ಚಿಕ್ಕಬಸವರಾಜು, ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT