ಮಹಾಜನ್ ವರದಿಯ ತತ್ಕ್ಷಣ ಜಾರಿಗೆ ವಿಧಾನಸಭೆ ಆಗ್ರಹ
ಬೆಂಗಳೂರು, ಡಿ. 20– ಆರು ದಿನಗಳ ಬಿಸಿಯ, ಬಿರುಸಿನ ಚರ್ಚೆಯನ್ನು ಮುಗಿಸಿ ಮಹಾಜನ್ ವರದಿಯನ್ನು ಇಂದು ಒಪ್ಪಿಕೊಂಡ ಮೈಸೂರು ವಿಧಾನ ಸಭೆಯು ‘ವರದಿಯ ಶಿಫಾರಸುಗಳನ್ನು ತತ್ಕ್ಷಣ ಜಾರಿಗೆ ತರಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿತು.
ಗಡಿ ವರದಿಯ ಭವಿಷ್ಯದ ಬಗ್ಗೆ ‘ರಾಷ್ಟ್ರೀಯ ಒಟ್ಟು ಅಭಿಪ್ರಾಯ’ ಅಥವಾ ‘ಜನಮತ ಸಂಗ್ರಹ’ ಮಾಡುವ ಸೂಚನೆಯನ್ನು ಸಭೆಯು ತೀವ್ರವಾಗಿ ವಿರೋಧಿಸಿತು.
ತ್ರಿಭಾಷಾ ಸೂತ್ರವನ್ನು ಪೂರ್ಣ ಜಾರಿಗೆ ತರಲು ರಾಜ್ಯಗಳಿಗೆ ಇಂದಿರಾ ಕರೆ
ನವದೆಹಲಿ, ಡಿ. 20– ತ್ರಿಭಾಷಾ ಸೂತ್ರವನ್ನು ಪೂರ್ಣವಾಗಿ ಜಾರಿಗೆ ತರಬೇಕೆಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಇಂದು ರಾಜ್ಯಗಳಿಗೆ ಕರೆ ನೀಡಿದರು.
ಇದರಿಂದ ಭಾಷೆಯನ್ನು ಕುರಿತ ವಿವಾದಗಳು ಕೊನೆಗೊಳ್ಳುವುದಲ್ಲದೆ ಬದಲಾವಣೆಯ ಅವಧಿಯೂ ಕಷ್ಟವಾಗಲಾರದು ಎಂದು ಅವರು ನುಡಿದರು.
ಕೆಲವು ರಾಜ್ಯಗಳು ತ್ರಿಭಾಷಾ ಸೂತ್ರವನ್ನು ಜಾರಿಗೆ ತರದಿರುವುದೇ ರಾಷ್ಟ್ರದ ಕೆಲವು ಭಾಗದ ಜನತೆಗೆ ಸಂದೇಹ ಉಂಟಾಗಲು ಕಾರಣವಾಗಿದೆ ಎಂದು ಅವರು ಹೇಳಿದರು.
ರಾಜ್ಯಪಾಲರ ಕರ್ತವ್ಯ: ನಿರ್ದೇಶನ ಸೂತ್ರ ರೂಪಿಸುವ ಬಗ್ಗೆ ಚರ್ಚೆ
ನವದೆಹಲಿ, ಡಿ. 20– ರಾಜ್ಯಪಾಲರ ಕರ್ತವ್ಯವನ್ನು ಸ್ಪಷ್ಟವಾಗಿ ನಮೂದಿಸುವ ಬಗ್ಗೆ ರಾಜ್ಯಾಂಗವನ್ನು ತಿದ್ದುಪಡಿ ಮಾಡುವ ಸಾಧ್ಯತೆಯನ್ನು ಗೃಹ ಸಚಿವ ಶ್ರೀ ಚವಾಣ್ ಅವರು ಇಂದು ಲೋಕಸಭೆಯಲ್ಲಿ ತಳ್ಳಿ ಹಾಕಿದರು.
ಕೆಲವೊಂದು ನಿರ್ದೇಶನ ಸೂತ್ರಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದೂ ಅವರು ನುಡಿದರು.
ದೆಹಲಿಯಲ್ಲಿ ಮೈಸೂರು ಭವನ ಉದ್ಘಾಟನೆ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಡಿ. 20– ಇಂದು ರಾಜಧಾನಿಯಲ್ಲಿ ಮೂರು ಅಂತಸ್ತಿನ ಮೈಸೂರು ಭವನವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
100 ರಿಂದ 115ಕ್ಕೆ ಕಬ್ಬಿನ ದರ ಏರಿಕೆ
ಬೆಂಗಳೂರು, ಡಿ. 20– ಶೇಕಡಾ 10 ರಷ್ಟು ಸಕ್ಕರೆ ಕೊಡುವ ಕಬ್ಬಿನ ಬೆಲೆಯನ್ನು ಟನ್ನಿಗೆ ನೂರು ರೂಪಾಯಿಗಳಿಂದ 115ಕ್ಕೆ ಏರಿಸಲು ರಾಜ್ಯ ಕಬ್ಬು ಉತ್ಪಾದಕರ ಫೆಡರೇಷನ್ ಇಂದು ನಿರ್ಧರಿಸಿದೆ.