ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಿ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ₹ 1150 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಇಂದಿರಾ ಕ್ಯಾಂಟಿನ್ ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆ ಸಹ ನಡೆಯಲಿದೆ’ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿಹೀನರಿಗೆ 20 ಸಾವಿರ ನಿವೇಶನಗಳನ್ನು ಹಂಚುವ ಗುರಿ ಇದೆ. ಈಗಾಗಲೇ ಐದರಿಂದ ಆರು ಸಾವಿರ ನಿವೇಶನಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚೀಲನಹಳ್ಳಿ ಗ್ರಾಮದ ಬಳಿ ₹ 26 ಕೋಟಿ ವೆಚ್ಚದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಸಂಸ್ಕರಣೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಇದರಿಂದ ಗುಣಮಟ್ಟದ ಮಾಂಸ ಉತ್ಪಾದನೆ ಸಾಧ್ಯವಾಗುತ್ತದೆ. ಸ್ಥಳೀಯ ಕುರಿಗಾಹಿಗಳಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೆಂಬಲ ಬೆಲೆ: ರಾಜ್ಯದಲ್ಲಿ 8.85 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬೆಳೆಯಲಾಗಿದೆ. 7 ಲಕ್ಷ ಟನ್ ಉತ್ಪಾದನೆಯ ಸಾಧ್ಯತೆ ಇದೆ. ಕ್ವಿಂಟಲ್ ತೊಗರಿಗೆ ₹ 6 ಸಾವಿರ ಬೆಲೆ ನೀಡಿ ಖರೀದಿಸಲಾಗುವುದು. ಇದರಲ್ಲಿ ₹ 5450 ಕನಿಷ್ಠ ಬೆಂಬಲ ಬೆಲೆ ಹಾಗೂ ₹ 550 ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಬೆಲೆ ಕುಸಿತದಿಂದ ಬೆಳೆಗಾರರಿಗೆ ಅನನುಕೂಲ ಆಗಬಾರದು ಎಂದು ಕ್ವಿಂಟಲ್ ರಾಗಿಯನ್ನು ₹ 2,300ಕ್ಕೆ ರಾಜ್ಯ ಸರ್ಕಾರ ಖರೀದಿಸಲಿದೆ. ಇದರಲ್ಲಿ ₹ 1900 ಹಾಗೂ ₹ 400 ಪ್ರೋತ್ಸಾಹ ಧನ ಇರಲಿದೆ ಎಂದು ವಿವರಿಸಿದರು.