ಬೀದರ್: ‘ಗೋವಿನ ಪರವಾಗಿ ಜಿಲ್ಲೆಯ ಲಕ್ಷಾಂತರ ಮಂದಿಯ ಹೃದಯ ಮಿಡಿದಿದೆ. ಜಿಲ್ಲೆಯ ಪ್ರತಿಯೊಬ್ಬರೂ ಅಭಯಾಕ್ಷರಕ್ಕೆ ಸಹಿ ಮಾಡುವ ಮೂಲಕ ಗೋ ಸಂರಕ್ಷಣೆಗೆ ಕೈಜೋಡಿಸಬೇಕು’ ಎಂದು ಶ್ರೀರಾಘವೇಶ್ವರ ಭಾರತಿಸ್ವಾಮೀಜಿ ನುಡಿದರು.
ನಗರದಲ್ಲಿ ಬುಧವಾರ ನಡೆದ ಅಭಯ ಗೋಯಾತ್ರೆ ಸಂದೇಶ ಸಭೆಯಲ್ಲಿ ಅವರು ಮಾತನಾಡಿದರು. ‘ಭಾರತೀಯ ಗೋ ಪರಿವಾರ ಹಾಗೂ ಶ್ರೀರಾಮಚಂದ್ರಪುರ ಮಠ ಗೋ ಸಂರಕ್ಷಣೆಗೆ ಬದ್ಧವಾಗಿವೆ’ ಎಂದು ಹೇಳಿದರು.
‘ಶಿವಾಜಿ ಮಹಾರಾಜರ ಪ್ರತಿಮೆ ಆವರಣ ಸ್ವಚ್ಛಗೊಳಿಸುವ ಕಾರ್ಯವನ್ನು ಗೋಕಿಂಕರರು ಮಾಡಬೇಕು ಎಂದು ಸಲಹೆ ನೀಡಿದರು. ಗೋ ಸಂರಕ್ಷಣೆಗೆ ಧ್ವನಿ ಎತ್ತಿದ ಶಿವಾಜಿ ಮಹಾರಾಜ ಅಂಥವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.
ಹಾವಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ‘ಮಾನವನಿಗೆ ಬುದ್ಧಿ, ಜ್ಞಾನ ಇದ್ದರೂ ಜಗತ್ತಿಗೆ ಒಳಿತು ಮಾಡುತ್ತಿಲ್ಲ. ಪರೋಪಕಾರಕ್ಕಾಗಿಯೇ ಜೀವನ ಸವೆಸುವ ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಹೇಳಿದರು.
‘ಪ್ರತಿಯೊಬ್ಬರೂ ಮನೆಗೊಂದು ಗೋವು ಸಾಕುವ ಮೂಲಕ ಗೋ ಸೇವೆ ಮಾಡಬೇಕು. ಗೋಹತ್ಯೆ ತಡೆದರೆ ಮಾತ್ರ ಭಾರತ ಜಗತ್ತಿನಲ್ಲಿ ಅಗ್ರ ರಾಷ್ಟ್ರವಾಗಿ ಗುರುತಿಸಬಲ್ಲದು ಎಂದು ತಿಳಿಸಿದರು.
ಜಾಂಬೋಳ ವಿರಕ್ತಮಠದ ಮುರುಘೇಂದ್ರ ದೇವರು ಮಾತನಾಡಿ, ‘ಕೇಂದ್ರ ಸರ್ಕಾರ ತಕ್ಷಣ ಗೋ ಹತ್ಯೆ ನಿಷೇಧ ಮಾಡಬೇಕು’ ಎಂದು ಆಗ್ರಹಿಸಿದರು.
ಮೆಹಕರ್ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಮಾತನಾಡಿದರು. ಇದಕ್ಕೂ ಮೊದಲು ನೌಬಾದ್ನ ಯಲ್ಲಾಲಿಂಗ ಕಾಲೊನಿಯಿಂದ ಆರು ಕಿ.ಮೀ ಬೈಕ್ ರ್ಯಾಲಿ ನಡೆಯಿತು. ಬಳಿಕ ಬಸವೇಶ್ವರ ವೃತ್ತದಿಂದ ಶಿವಾಜಿ ವೃತ್ತದ ವರೆಗೆ ಶೋಭಾಯಾತ್ರೆ ನಡೆಯಿತು.
ಜಿಲ್ಲಾ ಗೋ ಪರಿವಾರದ ಅಧ್ಯಕ್ಷ ವೀರಶೆಟ್ಟಿ ಖ್ಯಾಮ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಕರಂಜಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ್ ಭಾಗವಹಿಸಿದ್ದರು.
*
ರಾಮಚಂದ್ರಪುರ ಮಠವು ಕಳೆದ ಇಪ್ಪತ್ತು ವರ್ಷಗಳಿಂದ ಗೋರಕ್ಷಣೆ ಜತೆಗೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. -ಹಾವಲಿಂಗೇಶ್ವರ ಶಿವಾಚಾರ್ಯ ಹಲಬರ್ಗಾ