ಕುರುಗೋಡು: ಇಲ್ಲಿಗೆ ಸಮೀಪದ ಕುಡಿತಿನಿ ಪಟ್ಟಣದ ಬಿಟಿಪಿಎಸ್ ನೌಕರರಿಗೆ ನಿರ್ಮಿಸಿರುವ ವಸತಿಗೃಹಗಳು ವಾಸಯೋಗ್ಯವಾಗಿಲ್ಲ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಬಾಡಿಗೆ ಭತ್ಯೆಯನ್ನು ಮುಂದುವರಿಸಬೇಕು’ ಎಂದು ಆಗ್ರಹಿಸಿ ನೌಕರರ ಸಂಘದ ಸದಸ್ಯರು ಬುಧವಾರ ಕಾರ್ಯನಿರ್ವಾಹಕ ನಿರ್ದೇಶಕ ಮೃತ್ಯುಂಜಯ ಅವರಿಗೆ ಮನವಿ ಸಲ್ಲಿಸಿದರು.
‘ನೌಕರರಿಗೆ ನೀಡುತ್ತಿದ್ದ ವಿಶೇಷ ಪ್ಯಾಕೇಜ್ ಮತ್ತು ಮನೆ ಬಾಡಿಗೆ ಭತ್ಯೆ ದರದ ಪರಿಷ್ಕರಣೆ ಆದೇಶ ಹಿಂದಕ್ಕೆ ಪಡೆಯಬೇಕು. ಬೆಂಗಳೂರು ನಗರಕ್ಕೆ ಅನುಗುಣವಾಗಿ ನೌಕರರಿಗೆ ನೀಡುತ್ತಿದ್ದ ಮನೆ ಬಾಡಿಗೆ ಭತ್ಯೆಯನ್ನೇ ಮುಂದುವರಿಸಬೇಕು’ ಎಂದು ಸಂಘದ ಎಂ. ಶಶಾಂಕನ್, ಎಂ.ಜಿ. ಸತೀಶ, ಜಿ.ಎಸ್. ರಾಘವೇಂದ್ರ ಒತ್ತಾಯಿಸಿದರು.
‘ಮೂಲ ಸೌಕರ್ಯವಿಲ್ಲದ ಹಾಗೂ ವಾಸಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ವಸತಿ ಗೃಹಗಳನ್ನು ನಿರ್ಮಿಸಿ, ಮನೆ ಬಾಡಿಗೆ ಭತ್ಯೆಯನ್ನು ಮುನ್ಸೂಚನೆ ಇಲ್ಲದೆ ಕಡಿತಗೊಳಿಸಲಾಗಿದೆ. ಸೂಕ್ತ ಹಾಗೂ ಆರೋಗ್ಯಕರವಾದ ಪ್ರದೇಶದಲ್ಲಿ ನಿರ್ಮಿಸುವಂತೆ ಆಡಳಿತ ಮಂಡಳಿಗೆ ಆರಂಭದಿಂದಲೂ ಮನವಿ ಸಲ್ಲಿಸಿದ್ದರೂ, ಬಿಟಿಪಿಎಸ್ ಆವರಣದಲ್ಲಿಯೇ ಮನೆಗಳನ್ನು ನಿರ್ಮಿಸಲಾಗಿದೆ’ ಎಂದು ಆರೋಪಿಸಿದರು.
ಸಂಘದ ನುಜುಮುದ್ದೀನ್, ಕೆ. ರವೀಂದ್ರ, ಟಿ. ಲಿಂಗೇಶ, ಟಿ.ಜಿ. ಶಿವಕುಮಾರ, ಶ್ರೀನಿವಾಸ, ಎಂ. ಪ್ರಭಾಕರ, ಶ್ಯಾಮಸುಂದರ, ಜಯರಾಜ, ಸೈಯ್ಯದ್ ನಾಸೀರ್ ಆಲಿ, ಲಚಮಯ್ಯ, ಗೋಸಬಾಳು ಜಂಬಯ್ಯ, ಮಮತಾ ಶ್ರೀನಾಥ, ಸ್ಮಿತಾ ಕರ್ಪೂರ್ ಹಾಜರಿದ್ದರು.