ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿಗಾಗಿ ರಾಜಕಾರಣ ಮಾಡಿ’

Last Updated 22 ಡಿಸೆಂಬರ್ 2017, 5:13 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ’ಕಾಂಗ್ರೆಸ್‌ ಜೊತೆ ನಾನು ಕೈಜೋಡಿಸಿದ ನಂತರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಈ ಕುರಿತು ಹೊರಡಿಸಿರುವ ಕರಪತ್ರದಲ್ಲಿನ ಮಾಹಿತಿ ಸುಳ್ಳೆಂದು ಎ.ಮಂಜು ಸಾಬೀತುಪಡಿಸಲಿ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದರು.

ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕುಂಟನಹಳ್ಳಿ ಗ್ರಾಮದಲ್ಲಿ ಗುರುವಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ರಾಜಕಾರಣ ಮಾಡಬೇಕೆ ಹೊರತು ರಿಯಲ್ ಎಸ್ಟೇಟ್‌ಗಾಗಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.

‘5 ವರ್ಷದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಮಾಡಬಹುದಾಗಿತ್ತು, ಆದರೆ, ನಾನು ಈಚೆಗೆ ಸಂಸದ ಡಿ.ಕೆ. ಸುರೇಶ್‌ ಜೊತೆಗೂಡಿ ಕೆಲಸ ಮಾಡುತ್ತಿರುವುದನ್ನು ಸಹಿಸದ ಎ.ಮಂಜುಗೆ ತನ್ನ ಅಸಹಾಯಕ ಪ್ರಜ್ಞೆ ಈಗ ಕಾಡುತ್ತಿದೆ. ಹೀಗಾಗಿ ಆಗುತ್ತಿರುವ ನೋವು ನುಂಗಲಾಗದೆ ಬಾಯಿ ಚಪಲಕ್ಕೆ ಆಧಾರರಹಿತ ಮಾತಗಳನ್ನಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಸಾಲ ಮಾಡಲು ಪ್ರೇರಣೆ: ಮುಖ್ಯಮಂತ್ರಿ ಆದ ದಿನವೇ ರೈತರ ಎಲ್ಲ ಸಾಲ ಮನ್ನಾ ಮಾಡುತ್ತೇನೆ ಎನ್ನುವ ಮೂಲಕ ಕುಮಾರಸ್ವಾಮಿ ರೈತರಲ್ಲಿ ಆಸೆ ಹುಟ್ಟಿಸಿ ಸಾಲ ಮಾಡಿಸುತ್ತಿದ್ದಾರೆ. ಒಂದು ವೇಳೆ ಸಿಎಂ ಆಗದಿದ್ದರೆ ಅವರ ಮಾತು ಕೇಳಿ ಸಾಲ ಮಾಡಿದವರ ಪಾಡೇನು? ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಎಂದು ಪ್ರಶ್ನಿಸಿದರು.

ಕಾಮಗಾರಿಗೆ ಚಾಲನೆ: ಮಂಚನಾಯಕನಹಳ್ಳಿ ಮತ್ತು ಬೈರಮಂಗಲ ಗ್ರಾ.ಪಂ. ವ್ಯಾಪ್ತಿಯ ಬನ್ನಿಗಿರಿ, ಅಂಚೀಪುರ ಕಾಲೊನಿ, ಚಿಕ್ಕಕುಂಟನಹಳ್ಳಿ ಮತ್ತು ಬಿಲ್ಲಕೆಂಪನಹಳ್ಳಿ ಗ್ರಾಮಗಳಲ್ಲಿ ತಲಾ ₹8 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ಬಿಲ್ಲ ಕೆಂಪನಹಳ್ಳಿ ಗ್ರಾಮದಲ್ಲಿ ₹18 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಸದಸ್ಯರಾದ ಗಾಣಕಲ್ ನಟರಾಜು, ನೀಲಾ ಮಂಜುನಾಥ್, ಗ್ರಾ.ಪಂ. ಸದಸ್ಯರಾದ ಎಸ್.ಆರ್.ಎಸ್. ರಾಜಣ್ಣ, ರುದ್ರಯ್ಯ, ಶಿವಣ್ಣ, ಮಂಗಳಾ ಸಂಜೀವಯ್ಯ, ಜಿ.ಪಂ. ಮಾಜಿ ಸದಸ್ಯ ಸಿ.ಎಚ್. ಪುಟ್ಟಯ್ಯ, ನರಸಿಂಹಯ್ಯ, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಯು.ನರಸಿಂಹಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT