ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ಸಮಾಜಕ್ಕಾಗಿ ‘ನಿರಂತರ’ ನಾಟಕೋತ್ಸವ

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ತೊಂಬತ್ತರ ದಶಕದಲ್ಲಿ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರದ ಬಗೆಗೆ ರಾಜ್ಯದಲ್ಲಿ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿದ್ದವು. ಆಗ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಅಧ್ಯಯನ ಮಾಡುತ್ತಿದ್ದ ಗೆಳೆಯರ ಗುಂಪು ವಿದ್ಯುತ್ ಸ್ಥಾವರ ನಿರ್ಮಾಣವನ್ನು ಕಲಾ ಮಾಧ್ಯಮದ ಮೂಲಕ ವಿರೋಧಿಸಬೇಕೆಂದು ನಿರ್ಧರಿಸಿ ಬೀದಿ ನಾಟಕವನ್ನು ಪ್ರದರ್ಶಿಸಿತು. ಬೀದಿ ನಾಟಕದ ಮೂಲಕ ಒಟ್ಟುಗೂಡಿದ ಸುಗುಣ, ಲಿಂಗರಾಜು, ಹರಿಪ್ರಸಾದ್, ಪ್ರಸಾದ್ ಕುಂದೂರು, ಶ್ರೀನಿವಾಸ್ ಗೆಳೆಯರು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಏನನ್ನಾದರೂ ಮಾಡಬೇಕೆಂದು ನಿರ್ಧರಿಸಿ ಸಮಾನಾಸಕ್ತರನ್ನು ಒಟ್ಟುಗೂಡಿಸಿ ‘ನಿರಂತರ’ವನ್ನು ಹುಟ್ಟುಹಾಕಿದರು.

ಮೊದಲು ಬೆರಳೆಣಿಕೆಯಷ್ಟಿದ್ದ ಸದಸ್ಯರ ಸಂಖ್ಯೆ ಕೆಲವೇ ವರ್ಷಗಳಲ್ಲಿ ಸಾವಿರದ ಗಡಿಯನ್ನು ದಾಟಿತು. ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು, ಕಾರ್ಮಿಕರು, ಮಕ್ಕಳು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದ ನೌಕರರು, ಗೃಹಿಣಿಯರು ಹೀಗೆ ಭಿನ್ನ ನೆಲೆಯ, ಭಿನ್ನ ಸಮುದಾಯದವರು ‘ನಿರಂತರ’ದೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಮೈಸೂರಿನಲ್ಲಿ ರಂಗಾಯಣ ಸ್ಥಾಪನೆಯಾಗಿ ರಂಗಚಟುವಟಿಕೆಗಳು ಗರಿಗೆದರಿದಾಗ ಇದರೊಟ್ಟಿಗೆ ಕೈಜೋಡಿಸಿದ್ದಾರೆ. ಬಿ.ವಿ.ಕಾರಂತರ ನಿರ್ದೇಶನದಲ್ಲಿ ‘ಸತ್ತವರ ಸುತ್ತಮುತ್ತ’ ನಾಟಕವನ್ನು ಮೊದಲು ಪ್ರದರ್ಶನ ಮಾಡಿದಾಗ ನಿರಂತರದ ಗೆಳೆಯರಿಗೆ ಆತ್ಮವಿಶ್ವಾಸ ಹೆಚ್ಚಾಯಿತು. ಸಂಘಟಿತವಾಗಿ ನಾಟಕದ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಇವರಿಗೆ ಆರ್ಥಿಕವಾಗಿ ಎಂದಿಗೂ ಅಡಚಣೆಯಾಗಲಿಲ್ಲ. ದುಡಿಮೆಯಲ್ಲಿರುವವರು ತಮ್ಮ ವೇತನದಲ್ಲಿ ಒಂದು ಭಾಗವನ್ನು ಸಂಘಟನೆಗೆ ಮೀಸಲಿರಿಸಿದರೆ, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು ಬಿಡುವಿನ ಸಮಯದಲ್ಲಿ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸಹಜರಂಗ’ ರಂಗ ತರಬೇತಿ ಶಿಬಿರವನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನುಂಟು ಮಾಡುತ್ತಿದ್ದಾರೆ. ಸಹಜರಂಗದಲ್ಲಿ ತರಬೇತಿಯನ್ನು ಪಡೆದವರು ಇಂದು ಸಾಕ್ಷ್ಯಚಿತ್ರ, ಧಾರಾವಾಹಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದು ‘ನಿರಂತರ’ದ ಶ್ರಮಕ್ಕೆ ಫಲವೇ ಸರಿ. ನಿರಂತರದ ಗೆಳೆಯರಿಗೆ ರಂಗಭೂಮಿ ಕೇವಲ ರಂಜನೆಯಲ್ಲ, ಅದು ಅಭಿವ್ಯಕ್ತಿಯ ಸಶಕ್ತ ಕಲಾ ಮಾಧ್ಯಮ. ಹೀಗಾಗಿಯೇ ಸಾಂಸ್ಕೃತಿಕ ನೆಲೆಗಟ್ಟಿಗಾಗಿ, ಸಮಾಜದ ಉನ್ನತಿಗಾಗಿ, ಶಿಕ್ಷಣದ ಪ್ರಗತಿಗಾಗಿ, ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ರಂಗಭೂಮಿಯನ್ನು ಕಲಾ ಮಾಧ್ಯಮವನ್ನಾಗಿ ಮಾಡಿಕೊಂಡು ‘ನಿರಂತರ’ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಣೆ ಕುರಿತಾದ ಜಲ ಜಾಥಾವನ್ನು ಆಯೋಜಿಸಿ ಜನರಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿಯನ್ನುಂಟು ಮಾಡಿದ್ದಾರೆ. ನಿರಂತರವು ತಮ್ಮ ತಂಡದ ನಾಟಕಗಳಲ್ಲದೆ, ಹವ್ಯಾಸಿ ತಂಡಗಳ ಪ್ರದರ್ಶನಗಳು, ಪೌರಾಣಿಕ ನಾಟಕೋತ್ಸವ, ಚಿತ್ರಕಲಾ ಪ್ರದರ್ಶನ, ಜಾನಪದ ಉತ್ಸವ, ರಂಗಾಯಣದ ವಾರಾಂತ್ಯದ ನಾಟಕಗಳ ಪ್ರದರ್ಶನವನ್ನು ಆಯೋಜಿಸಿದೆ. ಗ್ರಾಮೀಣ ಭಾಗಗಳಲ್ಲಿ ನಾಟಕ ಶಿಬಿರಗಳು, ಮಕ್ಕಳ ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆ.

ಮೊದಲು ಸಣ್ಣ ಪ್ರಮಾಣದಲ್ಲಿ ರಂಗ ಚಟುವಟಿಕೆಯನ್ನು ಪ್ರಾರಂಭಿಸಿದ ‘ನಿರಂತರ’ವು ಮುಂದೆ ಸಿ. ಅಶ್ವತ್ಥ್ ಅವರ ನಿರ್ದೇಶನದಲ್ಲಿ ವಚನಗಳನ್ನಾಧರಿಸಿದ ಕೂಡಲಸಂಗಮ ದೃಶ್ಯರೂಪಕವನ್ನು ಸಿದ್ಧಪಡಿಸಿ ಯಶಸ್ವಿಯಾಗಿ ನೂರು ಪ್ರದರ್ಶನಗಳನ್ನು ಪ್ರಯೋಗಿಸಿದೆ. ಈ ದೃಶ್ಯರೂಪಕದಲ್ಲಿ ಕಲಾವಿದರು, ತಂತ್ರಜ್ಞರು ಸೇರಿದರೆ ನೂರೈವತ್ತಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು ಸಾಮಾನ್ಯ ಸಂಗತಿಯಲ್ಲ. ಚಂದ್ರಶೇಖರ ಕಂಬಾರರ ‘ಶಿವರಾತ್ರಿ’, ‘ಟೀ ಹೌಸ್’, ಜುಂಜಪ್ಪ ವಾಚನಾಭಿನಯ, ‘ಬಿಂಬ’, ‘ರಸ್ತೆ’ ನಕ್ಷತ್ರ ಮೊದಲಾದ ನಾಟಕಗಳನ್ನು ಪ್ರದರ್ಶಿಸಿದೆ.

ನಿರಂತರ ತನ್ನ ರಂಗಚಟುವಟಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ 2009ರಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಿತು. ರಾಜ್ಯವಲ್ಲದೆ ಮುಂಬೈ, ಪುಣೆ, ತಿರುವನಂತಪುರ, ಹೈದರಾಬಾದ್, ಕೊಲ್ಕತ್ತಾ, ಮಣಿಪುರ, ದೆಹಲಿ ಮೊದಲಾದ ರಾಷ್ಟ್ರದ ನಾನಾ ಮೂಲೆಗಳಿಂದ ರಂಗ ತಂಡಗಳು, ಜಾನಪದ ಕಲಾವಿದರು, ರಂಗಕರ್ಮಿಗಳು, ಚಿಂತಕರು, ಸಂಗೀತಗಾರರು ಉತ್ಸವದಲ್ಲಿ ಭಾಗವಹಿಸಿ ಶ್ರೀಸಾಮಾನ್ಯರು, ರಂಗಾಸಕ್ತರು, ಚಿಂತಕರು, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಒಂಬತ್ತನೇ ವರ್ಷದ ‘ನಿರಂತರ ರಂಗ ಉತ್ಸವವು ಮೈಸೂರಿನ ಕಲಾಮಂದಿರದಲ್ಲಿ ಡಿಸೆಂಬರ್ 26ರಂದು ಉದ್ಘಾಟನೆಗೊಳ್ಳುತ್ತಿದೆ. ಮೊದಲ ದಿನ ಧಾರವಾಡದ ರಂಗಾಯಣದವರು ಭಾಸನ ‘ಸ್ವಪ್ನವಾಸವದತ್ತ’ ನಾಟಕವನ್ನು, 27ರಂದು ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳಿಯವರು ವಾಲಿವಧೆ ನಾಟಕವನ್ನು, 28ರಂದು ಬೆಂಗಳೂರಿನ ಅನೇಕ ತಂಡದವರು ಮಹಾರಾಜ ಉಬು ನಾಟಕವನ್ನು, 29ರಂದು ಮಣಿಪಾಲದ ಸಂಗಮ ಕಲಾವಿದರು ‘ವಿ ಟೀಚ್ ಲೈಫ್ ಸರ್’ ನಾಟಕವನ್ನು, ಉತ್ಸವದ ಸಮಾರೋಪದಲ್ಲಿ 30ರಂದು ಬೆಂಗಳೂರಿನ ಅಭಿನಯ ತರಂಗದವರು ಮುಂದಣ ಕಥನ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ. ಉತ್ಸವದಲ್ಲಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನ, ಸಂವಾದ, ಹರಟೆ, ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಡಿನಷ್ಟೆಯಲ್ಲ ರಾಷ್ಟ್ರದ ರಂಗಾಸಕ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತವು ಬಹು ಸಂಸ್ಕೃತಿಯ, ಬಹು ಭಾಷೆಯ, ಬಹು ಅಭಿಪ್ರಾಯಗಳ ಅಭಿವ್ಯಕ್ತಿಯ ದೇಶವಾಗಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ, ಸಾಂಸ್ಕೃತಿಕ ಅಭಿವ್ಯಕ್ತಿಗೆ ಮುಕ್ತವಾದ ವಾತಾವರಣದ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಿನ್ನ ಪ್ರದೇಶದ, ಭಿನ್ನ ಸಮುದಾಯಗಳ, ಭಿನ್ನ ಅಭಿವ್ಯಕ್ತಿಗಳು, ಬೇರೆ ಬೇರೆ ಕಲಾ ಪ್ರಕಾರಗಳು ಒಂದೇ ವೇದಿಕೆಯಲ್ಲಿ ಸಮಾವೇಶಗೊಳ್ಳಬೇಕೆಂಬುದು ನಿರಂತರದ ಆಶಯವಾಗಿದೆ. ಅಭಿವ್ಯಕ್ತಿಗೆ ಕಲಾಮಾಧ್ಯಮದ ಮೂಲಕ ಗಟ್ಟಿಯಾದ ವೇದಿಕೆಯನ್ನು ರೂಪಿಸಬೇಕೆಂಬ ಆಶಯದಲ್ಲಿ ಈ ವರ್ಷ ನಿರಂತರ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT