ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ಸಿಗದ ಬೆಲೆ ನಿಗದಿ ಹಕ್ಕು

Last Updated 24 ಡಿಸೆಂಬರ್ 2017, 5:14 IST
ಅಕ್ಷರ ಗಾತ್ರ

ಪಾಂಡವಪುರ: ‘ಎಲ್ಲ ಕೈಗಾರಿಕೆ ಉತ್ಪನ್ನಗಳಿಗೂ ಬೆಲೆ ನಿಗದಿ ಮಾಡುವ ಹಕ್ಕು ಅವರಿಗಿದೆ. ಆದರೆ ರೈತನಿಗೆ ಮಾತ್ರ ಆ ಹಕ್ಕು ಇಲ್ಲದಿರುವುದು ಮಾತ್ರ ದುರಂತ’ ಎಂದು ಸಚಿವ ಕೆ.ಆರ್.ರಮೇಶ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಶನಿವಾರ ಆಯೋಜಿಸಿದ್ದ ‘ವಿಶ್ವ ರೈತ ದಿನಾಚರಣೆ’ ಮತ್ತು ‘ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾಧನಾ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಆಹಾರ ನಿಗಮ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದೆ ಎಂದರೆ, ಆರೋಗ್ಯ ಇಲಾಖೆ ದೇಶದಲ್ಲಿ ಶೇ 48ರಷ್ಟು ಜನ ಆಹಾರವಿಲ್ಲದೆ ನರಳುತ್ತಿದ್ದಾರೆ ಎನ್ನುತ್ತದೆ. ಇದು ನಮ್ಮ ದೇಶದ ಪರಿಸ್ಥಿತಿ’ ಎಂದು ವ್ಯಂಗ್ಯವಾಡಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳು ಕೈಗಾರಿಕೋದ್ಯಮಿಗಳಿಂದ ಸಾಲ ವಸೂಲಿ ಮಾಡುವ ತನಕ ರೈತರ ಸಾಲ ವಸೂಲಿ ಮಾಡಬಾರದು. ಬ್ಯಾಂಕ್‌ಗಳು ಕೈಗಾರಿಕೋದ್ಯಮಿಗಳ ಲಕ್ಷಾಂತರ ಕೋಟಿ ಸಾಲ ನೀಡಿದ್ದು ಅದು ವಸೂಲಿಯಾಗದ ಸಾಲ ಎಂದು ಘೋಷಿಸಿವೆ. ಆದರೆ ದೇಶಕ್ಕೆ ಅನ್ನ ನೀಡುವ ರೈತರ ಒಂದಿಷ್ಟು ಸಾಲವನ್ನು ವಸೂಲಿ ಮಾಡಲು ನೋಟಿಸ್‌ ಜಾರಿಗೊಳಿಸುತ್ತಿರುವುದು ನಿಲ್ಲಬೇಕು. ವಾರ್ಷಿಕ ಶೇ 3ರಂತೆ ಸಾಲ ನೀಡುವುದು ಬ್ಯಾಂಕ್‌ ನೀತಿಯಾಗಬೇಕು’ ಎಂದರು.

‘ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಸರ್ಕಾರ ಬಿಗಿ ನಿಲುವು ತಳೆದಿದ್ದರ ಹಿಂದೆ ಬಡವರ ನೋವು ಅಡಗಿದೆ. ಖಾಸಗಿ ಆಸ್ಪತ್ರೆಯವರು ತಮ್ಮ ಬಳಿಗೆ ಬರುವ ರೋಗಿಗಳಿಗೆ ಅವಶ್ಯಕತೆ ಇಲ್ಲದ ದೇಹ ಪರೀಕ್ಷೆಗಳನ್ನೆಲ್ಲಾ ಮಾಡಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಕ್ಕೆ ಕಡಿವಾಣ ಬಿದ್ದಿದೆ. ಖಾಸಗಿ ವೈದ್ಯಕೀಯ ಮಸೂದೆ ಮಂಡಿಸಲು ನಾನು ಮುಂದಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಚ್ಚಿದ್ದರು. ಚುನಾವಣೆ ಹತ್ತಿರವಿದೆ ಇಂತಹ ನಿರ್ಧಾರಗಳು ಪಕ್ಷಕ್ಕೆ ಅಡ್ಡಿಯಾಗಬಹುದು ಎಂದು ಹೇಳಿದ್ದರು. ನಂತರ ನಾನು ಈ ಮಸೂದೆ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಅವರು ಮಸೂದೆ ಮಂಡಿಸಲು ಬೆನ್ನೆಲುಬಾಗಿ ನಿಂತರು. ಅದೇ ರೀತಿ ಶಾಸಕ ಪುಟ್ಟಣ್ಣಯ್ಯ ಕೂಡ ನನಗೆ ಬೆಂಬಲವಾಗಿ ನಿಂತರು’ ಎಂದು ತಿಳಿಸಿದರು.

ಆರೋಗ್ಯ ಸೌಲಭ್ಯ: ‘ರಾಜ್ಯದಲ್ಲಿ 1.16 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ಸರ್ಕಾರ ಜನವರಿ ತಿಂಗಳಲ್ಲಿ ಆರೋಗ್ಯ ಕಾರ್ಡ್ ನೀಡಲಿದೆ. ಕಾರ್ಡ್‌ ಹೊಂದಿದವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್‌ ತೆರೆಯಲಾಗುವುದು. ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸ್‌ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ‘ಹಸಿರು ಸೇನಾನಿ’ ಪುಸ್ತಕ ಬಿಡುಗಡೆ ಮಾಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ನಟರಾಜು ಹುಳಿಯಾರ್, ರೈತ ಸಂಘದ ನಂದಿನಿ ಜಯರಾಮ್‌, ಬಡಲಪುರ ನಾಗೇಂದ್ರ, ಪಚ್ಚೆ ನಂಜುಂಡಸ್ವಾಮಿ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು ಇದ್ದರು.

ಪಾಂಡವಪುರ: ‘ನನ್ನ ಕ್ವಾಲಿಫಿಕೇಷನ್‌ ಗುದ್ದಲಿ, ಪಿಕಾಷಿ, ಹಾರೆ, ಏಕಾಷಿ, ಎತ್ತಿನ ಕುಕ್ಕೆ, ಕಬ್ಬಿನ ಕಂತೆ’, ‘ ಅಮೆರಿಕದಲ್ಲಿ ಸುಮಾರು 2 ಸಾವಿರ ಕಿ.ಮೀ.ಗಳಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಇಲ್ಲಿ ಕೇವಲ 25 ಕಿ.ಮೀ ದೂರದಿಂದ ಕುಡಿಯುವ ನೀರು ಕೊಡಲು ತಿರಸ್ಕರಿಸಲಾಗಿ ಮಹದಾಯಿ ಹೋರಾಟ ನಡೆಯುತ್ತಿದೆ’ ಇಂತಹ ಗಂಭೀರ ವಿಷಯಗಳನ್ನು ಶಾಸಕ ಪುಟ್ಟಣ್ಣಯ್ಯ ಸದನದಲ್ಲಿ ಮಾತನಾಡಿ ಗಮನಸೆಳೆದಿದ್ದಾರೆ ಎಂದು ಸಾಹಿತಿ ದೇವನೂರು ಮಹಾದೇವ ತಿಳಿಸಿದರು.

‘ಸದನದಲ್ಲಿ ರೈತ ನಾಯಕ ಪುಟ್ಟಣ್ಣಯ್ಯ’ ಪುಸ್ತಕವನ್ನು ಬಿಡುಗಡೆ ಮಾಡಿದ ಸಾಹಿತಿ ದೇವನೂರ ಮಹಾದೇವ ಪುಸ್ತಕದಲ್ಲಿನ ಹಲವು ಗಂಭೀರ ತುಣುಕುಗಳನ್ನು ಸಭೆಯ ಮುಂದಿಟ್ಟರು.

‘ನಾವೆಲ್ಲರೂ ಒಂದೇ ಎನ್ನುವುದು ಧರ್ಮ, ನಾನೊಬ್ಬನೇ ಎನ್ನುವುದು ಧರ್ಮ’. ರೈತನ ಬದುಕು ಕುವೆಂಪುರ ಅವರ ಧನ್ವಂತರಿ ಕತೆಯಂತಾಗಿದೆ. ಇಸ್ರೇಲ್ ದೇಶ ಭಾರತದಿಂದ ಹೊಂಗೆ ಗಿಡಗಳನ್ನು ನೆಟ್ಟು ಬೆಳೆಸಿ ಒಂದು ಆಂದೋಲನವನ್ನೇ ಮಾಡಿದೆ. ಆದರೆ ನಾವು ಇತ್ತ ಗಮನಹರಿಸಿಲ್ಲ.’ ಎಂಬ ವಿಷಯಗಳನ್ನು ಉಲ್ಲೇಖಿಸಿದ ದೇವನೂರ, ಪುಟ್ಟಣ್ಣಯ್ಯನವರಂತ ರೈತ ನಾಯಕರು ಸದನದಲ್ಲಿ ಇದ್ದರೆ ಸದನದ ಘನತೆ ಹೆಚ್ಚುತ್ತದೆ ಎಂದರು.

ಹರಿದು ಬಂದ ಜನಸಾಗರ

ಪಾಂಡವಪುರ: ‘ವಿಶ್ವರೈತ ದಿನಾಚರಣೆ’ ಹಾಗೂ ‘ಶಾಸಕ ಪುಟ್ಟಣ್ಣಯ್ಯ ಅವರ ಸಾಧನಾ ಸಮಾವೇಶ’ಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಮೆರೆವಣಿಗೆಯಲ್ಲಿ ಜನಸಾಗರವೇ ಹರಿದು ಬಂತು. ಪಟ್ಟಣದ ಐದು ದೀಪ ವೃತ್ತದಿಂದ ಮಧ್ಯಾಹ್ನ 12ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಪಟಕುಣಿತ, ಪೂಜಾಕುಣಿತ, ಗೊಂಬೆ ಕುಣಿತಗಳು ಮೆರುಗು ನೀಡಿದವು.

ಹಸಿರು ಬಾವುಟಗಳನ್ನು ಹಿಡಿದು ಸಾಗಿದ ರೈತ ಮಹಿಳೆಯರು, ‘ಸಂತೃಪ್ತ ರೈತ, ಸಂತೃಪ್ತ ಭಾರತ’, ‘ಮತ್ತೊಮ್ಮೆ ಪುಟ್ಟಣ್ಣಯ್ಯ’ ಎಂಬ ಹೆಸರಿನ ಹಸಿರು ಟೀ ಶರ್ಟ್‌ಗಳನ್ನು ತೊಟ್ಟು ಮೋಟಾರ್‌ ಬೈಕ್‌ನಲ್ಲಿ ಸಾಗಿದ ರೈತ ಯುವಕರ ದಂಡು. ರೈತ ನಾಯಕ,ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಹಸಿರು ಬಣ್ಣದ ತೆರೆದ ವಾಹನದಲ್ಲಿ ಕುಳಿತು ಜನರ ಕಡೆಗೆ ಕೈಬೀಸುತ್ತಿದ್ದರೆ, ರಸ್ತೆಬದಿಯಲ್ಲಿ ನಿಂತ ಸಾರ್ವಜನಕರು ಪುಟ್ಟಣ್ಣಯ್ಯನವರತ್ತ ಕೈಬೀಸುತ್ತ ಸಾಥ್‌ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT