ಕಲಬುರ್ಗಿ: ‘ಮಹದಾಯಿ ನದಿ ನೀರಿನ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ತಿಳಿಹೇಳುವ ಧೈರ್ಯ ತೋರಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
‘ಇದು ಅಂತರರಾಜ್ಯಗಳ ನಡುವಿನ ಬಹುದೊಡ್ಡ ಸಮಸ್ಯೆ. ನಮ್ಮ ಪ್ರದೇಶದಲ್ಲಿ ಹರಿಯುವ ನೀರು ನಮಗೆ ಕೊಡಲೇಬೇಕು. ಕರ್ನಾಟಕಕ್ಕೆ 7.5 ಟಿಎಂಸಿ ಅಡಿ ನೀರನ್ನು ಬಳಸಲು ಗೋವಾ ಒಪ್ಪಿಗೆ ನೀಡಬೇಕು. ಪ್ರಧಾನಿ ಮೋದಿ ಮನಸ್ಸು ಮಾಡಿದರೆ ವಿವಾದ ಕ್ಷಣದಲ್ಲಿ ಬಗೆಹರಿಯುತ್ತದೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಈ ವಿಷಯದಲ್ಲಿ ಪ್ರಧಾನಿ ಆಸಕ್ತಿ ತೋರುತ್ತಿಲ್ಲ. ಬಿಜೆಪಿ ನಾಯಕರಿಗೆ ವಿವಾದ ಅಂತ್ಯ ಕಾಣುವುದು ಬೇಕಾಗಿಲ್ಲ’ ಎಂದು ದೂರಿದರು.
‘ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕದ ಚುನಾವಣೆಗಳನ್ನು ಪಕ್ಷ ಇನ್ನಷ್ಟು ಗಂಭೀರವಾಗಿ ಪರಿಗಣಿಸಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಈಗಾಗಲೇ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ’ ಎಂದು ಹೇಳಿದರು.