ಚಿಟಗುಪ್ಪ: ಇಲ್ಲಿನ ಡಿಸಿಸಿ ಬ್ಯಾಂಕ್ ನಿಂದ ಬಸವರಾಜ್ ವೃತ್ತದ ವರೆಗಿನ ರಸ್ತೆ ಪಕ್ಕದಲ್ಲಿ ಇರುವ ಪುರಸಭೆ 22 ವಾಣಿಜ್ಯ ಮಳಿಗೆಗಳ ಮುಂದೆ ಪ್ರಯಾಣಿಕರ ಆಟೊಗಳು ನಿಲ್ಲುತ್ತಿರುವುದರಿಂದ ಅಂಗಡಿ ಮಾಲಿಕರು ಮತ್ತು ನಾಗರಿಕರಿಗೆ ತೊಂದರೆ ಆಗಿದೆ. ಕುಡಂಬಲ್, ಮುಸ್ತರಿ, ಉಡಬಾಳ್, ನಿರ್ಣಾ ಗ್ರಾಮಗಳಿಗೆ ಹೋಗುವ ಆಟೊಗಳು ಕಳೆದ ಒಂದು ವರ್ಷದಿಂದ ನಿತ್ಯ ವಾಣಿಜ್ಯ ಮಳಿಗೆಗಳ ಮುಂದೆಯೇ ಸಾಲಾಗಿ ನಿಲ್ಲುತ್ತಿವೆ.
’22 ಮಳಿಗೆಗಳು ಪುರಸಭೆಯಿಂದ ದುಬಾರಿ ಬೆಲೆಗೆ ಹರಾಜಿನಲ್ಲಿ ಪಡೆದು ಜೆರಾಕ್ಸ್, ಸ್ಟೆಷನರಿ, ಹೊಟೇಲ್, ಮೊಬೈಲ್ ಅಂಗಡಿಗಳು ನಡೆಸಿಕೊಂಡು ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿರುವ ನಮಗೆ ಆಟೊಗಳು ಮಳಿಗೆಗಳ ಮುಂದೆ ನಿಲ್ಲಿಸುತ್ತಿರುವುದರಿಂದ ವ್ಯಾಪಾರಕ್ಕೆ ತೊಂದರೆ ಆಗಿದೆ. ಗ್ರಾಹಕರಿಗೆ ದಾರಿಯೇ ಇಲ್ಲವಾಗಿದೆ. ವ್ಯಾಪಾರ ಆಗುತ್ತಿಲ್ಲ’ ಎಂದು ಹಲವು ಅಂಗಡಿ ಮಾಲಿಕರು ತಿಳಿಸಿದ್ದಾರೆ.
ನಿಲ್ದಾಣ ಇಲ್ಲದಕ್ಕೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಆಟೊ ನಿಲ್ಲಿಸುತ್ತಿರುವುದರಿಂದ ಸಂಚಾರ ಸಮಸ್ಯೆ ಮತ್ತು ಜನ ದಟ್ಟಣೆ ಆಗುತ್ತಿದೆ. ಸೋಮವಾರ ಪಟ್ಟಣದಲ್ಲಿ ವಾರದ ಸಂತೆ ಇರುವುದರಿಂದ ಅಂದು ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ನಾಗರಿಕರು ನಡೆದುಕೊಂಡೂ ಹೋಗಲು ಆಗುತ್ತಿಲ್ಲ. ರಸ್ತೆ ಪಕ್ಕದಲ್ಲಿ ವಾಹನಗಳಿಗೆ ನಿಲ್ಲಲ್ಲು ಸೂಕ್ತ ವ್ಯವಸ್ತೆ ಕಲ್ಪಿಸಬೇಕು ಎಂಬುದ್ದು ನಾಗರಿಕರ ಒತ್ತಾಯ.
’ಪಟ್ಟಣದ ಹೊರಗಡೆ ನೂತನ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಹಳೆ ಬಸ್ ನಿಲ್ದಾಣ ತೆರವು ಗೊಳಿಸಲಾಗಿದೆ. ಇದರಿಂದ ನಿರ್ಣಾ, ಕುಡಂಬಲ್, ಮುಸ್ತರಿ ಗ್ರಾಮಗಳ ಕಡೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ. ಖಾಸಗಿ ಆಟೊಗಳಿಗೆ ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಐದು ವರ್ಷಗಳಿಂದ ಪುರಸಭೆಗೆ ಕೇಳುತ್ತಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಆಟೊ ಚಾಲಕರಾದ ಅಹ್ಮದ್ , ಬಾಬು, ಹುಸೇನ್ , ಮಾರುತಿ ತಿಳಿಸಿದ್ದಾರೆ.
’ಪಟ್ಟಣದ ನಾಲ್ಕು ದಿಕ್ಕುಗಳ ಕಡೆ ಹೋಗುವ ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ರವಾಸಿ ಮಂದಿರ, ಇಟಗಾ ರಸ್ತೆ, ಬೇಸ್ ಗಳಲ್ಲಿ ಆಟೊ ನಿಲ್ದಾಣ ವ್ಯವಸ್ತೆ ಕಲ್ಪಿಸಬೇಕು ಎಂದು ನಿರ್ಧರಿಸಿದ್ದು, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಸುಭಾಷ ಕುಂಬಾರ್, ವಿಜಯಕುಮಾರ ಬಮ್ಮಣಿ, ಕ್ರಿಸ್ತಾನಂದ್, ದೂರುತ್ತಾರೆ.
* *
ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಆಟೊ ನಿಲ್ದಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ
ಹುಸಾಮೋದ್ದೀನ್
ಮುಖ್ಯಾಧಿಕಾರಿ, ಪುರಸಭೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.