ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಂದಿ ಬ್ರಹ್ಮೇಶ್ವರ ದೇಗುಲ ನಿರ್ಲಕ್ಷ

Last Updated 24 ಡಿಸೆಂಬರ್ 2017, 8:58 IST
ಅಕ್ಷರ ಗಾತ್ರ

ಬಾಲು ಮಚ್ಚೇರಿ

ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ ಬ್ರಹ್ಮೇಶ್ವರ ಹಾಗೂ ಗಂಗೇಶ್ವರ ದ್ವಿಕೂಟಾಚಲ ದೇಗುಲ ನಿರ್ಲಕ್ಷ್ಯಕ್ಕೊಳಗಾಗಿದ್ದು, ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಅಂತರಘಟ್ಟೆಗೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಇರುವ ಈ ಭವ್ಯವಾದ ದೇಗುಲ ಅನಾದರಕ್ಕೊಳಗಾಗಿದ್ದು,  ಪುರಾತತ್ವ ಇಲಾಖೆಯೂ ಇದರತ್ತ ಗಮನ ಹರಿಸಿಲ್ಲ. ಗ್ರಾಮದಲ್ಲಿ ಈ ದೇಗುಲಗಳ ಬಗ್ಗೆ ಯಾವ ಮಾಹಿತಿಯೂ ದೊರೆಯುವುದಿಲ್ಲ. ದಿನಪ್ರತಿ ಪೂಜೆ ನಡೆಯುತ್ತದೆ. ಆದರೆ ದೇಗುಲಕ್ಕೆ ಬಾಗಿಲುಗಳಿಲ್ಲ. ರಕ್ಷಣೆಯೂ ಇಲ್ಲ. ಎಂತಹ ಬಿಸಿಲಿನಲ್ಲಿಯೂ ದೇವಾಲಯದೊಳಗೆ ಅತ್ಯಂತ ತಂಪಾದ ಅನುಭವವಾಗುತ್ತದೆ.

ಆಸಂದಿ ಗ್ರಾಮ ಅಜ್ಜಂಪುರದಿಂದ 11 ಕಿ.ಮೀ ದೂರದಲ್ಲಿದ್ದು, ಗ್ರಾಮ ಪಂಚಾಯ್ತಿ ಕೇಂದ್ರವಾಗಿದೆ. ಗಂಗರಸರ ಮತ್ತು ಹೊಯ್ಸಳರ ಕಾಲದಲ್ಲಿ ಅಸಂದಿನಾಡು ಎಂದು ಪ್ರಸಿದ್ದವಾಗಿತ್ತು. 8ನೆಯ ಶತಮಾನದಲ್ಲಿ ಈ ಪ್ರದೇಶ ಶ್ರೀಪುರುಷನ ಮಗ ವಿಜಯಾದಿತ್ಯನ ಆಳ್ವಿಕೆಗೊಳಪಟ್ಟಿತ್ತು.

ಈ ಭಾಗದಲ್ಲಿ 13 ಶೈವ ದೇಗುಲಗಳು ಇದ್ದವು ಎಂದು ಕ್ರಿ.ಶ. 1206ರ ಒಂದು ಶಾಸನ ತಿಳಿಸುತ್ತದೆ. ಆದರೆ ಈಗ ಆಸಂದಿಯಲ್ಲಿ ಉಳಿದಿರುವುದು 3 ದೇಗುಲಗಳು ಮಾತ್ರ. ಬ್ರಹ್ಮೇಶ್ವರ ಹಾಗೂ ಗಂಗೇಶ್ವರ ದೇಗುಲಗಳು ಎರಡು ಗರ್ಭಗೃಹಗಳಿರುವ ಒಂದೇ ದೇಗುಲ. ಈ ಪ್ರದೇಶವನ್ನಾಳುತ್ತಿದ್ದ ಗಂಗರಸನಿಂದ ಕ್ರಿ.ಶ. 1191 ರಲ್ಲಿ ನಿರ್ಮಾಣವಾಯಿತು. ನೆಲಮಟ್ಟದ ತಳಪಾಯದಲ್ಲಿ ಅರಳಿರುವ ದ್ವಿಕೂಟ ದೇಗುಲವಿದು.

ದೇಗುಲದ ಒಳಭಾಗದಲ್ಲಿರುವ ನುಣುಪಾದ ಕಂಬಗಳು ಹೊಯ್ಸಳ ಶೈಲಿಯವು. ದೇಗುಲದಲ್ಲಿ ಅಷ್ಟಾಗಿ ಕುಸುರಿ ಕೆತ್ತನೆಗಳಿಲ್ಲವಾದರೂ ವಾಸ್ತುಶಿಲ್ಪಕ್ಕೆ ಅನುಗುಣವಾಗಿದೆ. ಗರ್ಭಗೃಹ ಅಂತರಾಳ ಮತ್ತು ತೆರೆದ ಮಂಟಪಗಳಿದ್ದು, ಮಂಟಪದ ಸುತ್ತಲೂ ಬಾಲ್ಕನಿಯ ರೀತಿಯ ರಚನೆಗಳಿವೆ. 6 ಭುವನೇಶ್ವರಿ ವಿಗ್ರಹಗಳು ಇದ್ದು, ಕುಸುರಿ ಕಲೆಗಳು ಗಮನ ಸೆಳೆಯುತ್ತವೆ. ನಟರಾಜ ಮತ್ತು ವೀರಭದ್ರನ ವಿಗ್ರಹಗಳು ಭುವನೇಶ್ವರಿಯ ಮಧ್ಯದಲ್ಲಿ ಖಂಡರಿಸಲಾಗಿದೆ.

‘ಸಪ್ತಮಾತೃಕೆಯರ ವಿಗ್ರಹಗಳು, ಅಷ್ಟದಿಕ್ಪಾಲಕರ ವಿಗ್ರಹಗಳು ಸಣ್ಣದಾದರೂ ಸ್ಪಷ್ಟವಾಗಿ ಮನಮೋಹಕವಾಗಿವೆ. ಇಲ್ಲಿರುವ ಎರಡು ಗರ್ಭಗೃಹಗಳಲ್ಲಿ ಒಂದರಲ್ಲಿ ಶಿವಲಿಂಗವಿದೆ. ಇನ್ನೊಂದರಲ್ಲಿ ಯಾವುದೇ ವಿಗ್ರಹವಿಲ್ಲ. ಎರಡೂ ಗರ್ಭಗೃಹಗಳ ನಡುವೆ ವೇದಿಕೆಯಂತಹ ರಚನೆಯಿದೆ. ಬಹುಶಃ ಈ ವಿಗ್ರಹ ಅಥವಾ ಲಿಂಗವನ್ನು ಯಾರೋ ಹೊತ್ತೊಯ್ದಿರಬಹುದು ಅಥವಾ ನಾಶವಾಗಿರಬಹುದು’ಎಂಬುದು ಗ್ರಾಮದ ಹಿರಿಯರ ಅಭಿಪ್ರಾಯ.

ದೇಗುಲದ ಸುತ್ತಲೂ ಗೋಪುರದ ಮಾದರಿಯ ರಚನೆಗಳಿವೆ. ಯಾವುದೇ ವಿಗ್ರಹಗಳಿಲ್ಲ. ಆದರೆ ಒಂದೊಮ್ಮೆ ವಿಗ್ರಹಗಳನ್ನು ಕೆತ್ತಿದ್ದು, ಯಾರಾದರೂ ಕೊಂಡೊಯ್ದಿರಬಹುದಾದ ಸಾಧ್ಯತೆಗಳಿವೆ. ದೇಗುಲದ ಮುಂಭಾಗದಲ್ಲೊಂದು ಶಾಸನವಿದ್ದು, ದೇಗುಲದ ಸುತ್ತಮುತ್ತ ಭಗ್ನಗೊಂಡಿರುವ ಕಲ್ಲಿನ ಕೆತ್ತನೆಗಳಿವೆ. ಇದೇ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಾಲಯವು 1114ರಲ್ಲಿ ನಿರ್ಮಾಣವಾಗಿದೆ. ಮತ್ತೊಂದು ವೀರಭದ್ರ  ದೇಗುಲ 1205 ರಲ್ಲಿ ಸ್ಥಾಪನೆಗೊಂಡ ತ್ರಿಕೂಟ ದೇಗುಲ.ಇದನ್ನು ಬಲ್ಲೇಶ್ವರನೆಂದೂ ಕರೆಯುತ್ತಾರೆ.

ಈ ಐತಿಹಾಸಿಕ ಮಹತ್ವದ ದೇಗುಲವನ್ನುಳಿಸಿಕೊಳ್ಳಲು ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಆಸಂದಿ ಗ್ರಾಮವೊಂದು ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಹೊಂದಬಹುದಾಗಿದೆ ಎಂಬುದು ತಜ್ಞರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT