ನಿಜ, ಸಾಲ ಮನ್ನಾ ಮಾಡುವುದು ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ರೈತರು ಹಿಂದೆಲ್ಲ ಜೀವನದ ಸಹಜ ಭಾಗವೆಂಬಂತೆ ಶೂನ್ಯ ಬಂಡವಾಳದಲ್ಲಿ, ನೈಸರ್ಗಿಕವಾಗಿ ಕೃಷಿ ಮಾಡುತ್ತಿದ್ದರು. ಅವರಲ್ಲಿ ಹೆಚ್ಚು ಲಾಭದ ಆಸೆ ಮೂಡಿಸಿ, ಹೈಬ್ರಿಡ್ ಬಿತ್ತನೆ ಬೀಜಗಳನ್ನು ಪರಿಚಯಿಸಿ, ಹೆಚ್ಚು ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ ಮತ್ತು ಬೆಳೆ ಸಂರಕ್ಷಿಸಲು ದುಬಾರಿ ಕೀಟನಾಶಕ ಕೊಳ್ಳುವಂತೆ ಮಾಡಿ, ಹೆಚ್ಚೆಚ್ಚು ಸಾಲ ಮಾಡಿಸಿ ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಂಡು ಕೃಷಿಯ ದಿಕ್ಕನ್ನೇ ಬದಲಿಸಿದ್ದು ಉದ್ಯಮಿಗಳು. ಇಷ್ಟಾದ ಮೇಲೂ ರೈತರು ತಮ್ಮ ಫಸಲಿಗೆ ನ್ಯಾಯವಾದ ಬೆಲೆ ಸಿಗದೆ ಸಾಲಗಾರರಾಗಿಯೇ ಉಳಿದಿದ್ದಾರೆ.