‘ಖಾಸಗಿ ಶಾಲೆಗಳ ನಿಯಂತ್ರಣ ಚುನಾವಣಾ ಗಿಮಿಕ್’ (ವಾರದ ಸಂದರ್ಶನ, ಪ್ರ.ವಾ., ಡಿ. 24) ಎಂದಿದ್ದಾರೆ ಎ. ಮರಿಯಪ್ಪ. ಇವು ‘ಕೊಬ್ಬಿನ ಮಾತುಗಳು’. ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನೂ ಎತ್ತಿ ತೋರಿಸುತ್ತವೆ.
ಮಕ್ಕಳಿಗೆ ಶಿಕ್ಷಣ ಕೊಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ದೋಚುವ ದಂಧೆಯಾಗಿಸಲು ಅದನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟಿದೆ ಸರ್ಕಾರ. ಕಡ್ಡಾಯ ಶಿಕ್ಷಣವೆನ್ನುವುದು ದೊಡ್ಡ ಕಾರ್ಯಕ್ರಮ ನಿಜ. ಇದರಲ್ಲಿ ಖಾಸಗಿ ಸಹಭಾಗಿತ್ವ ಕೂಡ ಬಹಳ ಮುಖ್ಯ. ಆದರೆ ಸರ್ಕಾರ ದಂಧೆಕೋರರಿಗೆ ತನ್ನ ಜುಟ್ಟು ಒಪ್ಪಿಸುವುದು ಮರ್ಯಾದೆಯಲ್ಲ.
ಶಾಲಾ ಶಿಕ್ಷಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದು, ಖಾಸಗಿ ದಂಧೆಕೋರರು ಇದರ ದುರ್ಲಾಭ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಕುರಿತಂತೆ ರಾಜ್ಯಗಳಿಗೆ ಪರಮಾಧಿಕಾರವಿರುವ ರಾಷ್ಟ್ರೀಯ ನೀತಿ ತುರ್ತಾಗಿ ಬೇಕಾಗಿದೆ.