ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾರ್ಕಿಂಗ್‌ ಪರದಾಟ

Last Updated 25 ಡಿಸೆಂಬರ್ 2017, 6:11 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮಾರುಕಟ್ಟೆ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆಯೇ ? ಹೌದು, ಇಲ್ಲಿನ ಪಾರ್ಕಿಂಗ್‌ ವ್ಯವಸ್ಥೆ ಕಂಡಾಗ ಹೀಗೊಂದು ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತದೆ.

ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಡಳಿತ ಭವನ ನೋಡಲು ಸುಂದರವಾಗಿದ್ದರೂ ಪಾರ್ಕಿಂಗ್ ಅವ್ಯವಸ್ಥೆಯಿಂದ ತನ್ನ ಅಂದ ಕಳೆದುಕೊಳ್ಳುತ್ತಿದೆ. ನೂರಾರು ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವ ದೃಶ್ಯವನ್ನು ನೋಡಿದರೆ ಜಿಲ್ಲಾಡಳಿತ ಭವನ ಮಾರುಕಟ್ಟೆ ಕೇಂದ್ರದಂತೆ ಕಾಣುತ್ತಿದೆ.

ಕಚೇರಿ ಆವರಣದಲ್ಲಿ ನಿರಂತರ ಪ್ರತಿಭಟನೆಗಳು, ಬಹಿರಂಗ ಸಭೆಗಳು, ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆಗಳು ನಡೆಯುತ್ತವೆ. ಅಲ್ಲದೆ ನಿತ್ಯ ಸಾವಿರಾರು ಜನರು ಕೆಲಸ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿದ್ದಾರೆ. ಆದರೆ, ಇವರೆಲ್ಲರಿಗೂ ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎನ್ನುವುದೇ ಸಮಸ್ಯೆಯಾಗಿದೆ. ತರುವ ವಾಹನಗಳನ್ನು ಸೂಕ್ತ ಕಡೆ ನಿಲ್ಲಿಸಲು ಜಾಗವಿಲ್ಲದೆ ಅನಿವಾರ್ಯವಾಗಿ ಕಚೇರಿ ಆವರಣದಲ್ಲಿರುವ ರಸ್ತೆಯಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅನಧಿಕೃತ ಪಾರ್ಕಿಂಗ್: ಇನ್ನೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಧಿಕೃತ ವಾಹನಗಳ ನಿಲುಗಡೆ ಅಧಿಕವಾಗಿದೆ. ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಆರ್‌ಟಿಒ ಕಚೇರಿ, ಜಿಲ್ಲಾ ಕೋರ್ಟ್‌, ತಹಶೀಲ್ದಾರ್‌ ಕಚೇರಿ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯ್ತಿ, ಮತ್ತಿತರೆ ಇಲಾಖೆಗಳಿದ್ದು, ಇಲ್ಲಿಗೆ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಹಾಗೂ ಕೆಲ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಅಲ್ಲದೆ ಸುತ್ತಮುತ್ತ ಹತ್ತಾರು ಅಂಗಡಿಗಳು, ಹೋಟೆಲ್‌ಗಳು ಸಹ ಇರುವುದರಿಂದ ಇವರೂ ಇಲ್ಲಿಗೆ ಬರುತ್ತಿದ್ದಾರೆ. ಪರಿಣಾಮ ಜಿಲ್ಲಾಧಿಕಾರಿ ಕಚೇರಿ ಆವರಣ ಸಂಪೂರ್ಣ ವಾಹನಗಳಿಂದ ತುಂಬಿ ಹೋಗುತ್ತಿದೆ. ಇದರಿಂದ ಅಧಿಕಾರಿಗಳು, ವೃದ್ಧರು, ಮಹಿಳೆಯರು, ಅಂಗವಿಕಲರು ಸಮಸ್ಯೆ ಎದುರಿಸುವಂತಾಗಿದೆ.

ಹಣ ವಸೂಲಿ: ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ತಾಲ್ಲೂಕು ಕಚೇರಿಯಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಬರುವವವರ ಸಂಖ್ಯೆಗಿಂತ ತಾಲ್ಲೂಕು ಕಚೇರಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಆದರೆ, ತಾಲ್ಲೂಕು ಕಚೇರಿಯಲ್ಲಿ ವಾಹನ ನಿಲುಗಡೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಹಾಗಾಗಿ, ತಾಲ್ಲೂಕು ಕಚೇರಿಗೆ ಬರುವ ಜನರು ಪಾರ್ಕಿಂಗ್‌ ಶುಲ್ಕವಿಲ್ಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದೂ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಸಿಬ್ಬಂದಿಗೆ ಜಾಗವಿಲ್ಲ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕಾಗಿಯೇ ಶೆಲ್ಟರ್‌ ನಿರ್ಮಿಸಲಾಗಿದೆ. ಆದರೆ ಈ ಸ್ಥಳ ಚಿಕ್ಕದಾಗಿರುವುದರಿಂದ ಅನೇಕರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ. ಅಲ್ಲದೆ ಅನಧಿಕೃತ ವಾಹನಗಳ ಸಂಖ್ಯೆಯೇ ಹೆಚ್ಚುತ್ತಿರುವುದರಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರ ಹಿತಾಸಕ್ತಿ ಪರಿಗಣಿಸಿ ವ್ಯವಸ್ಥಿತವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದರೆ ಹೆಚ್ಚು ಅನುಕೂಲವಾಗುವುದರ ಜತೆಗೆ ಜಿಲ್ಲಾಡಳಿತ ಭವನ ನೋಡಲು ಮತ್ತಷ್ಟು ಸುಂದರವಾಗಿ ಕಾಣಲಿದೆ ಎನ್ನುತ್ತಾ

* * 

ಪಾರ್ಕಿಂಗ್‌ ಸಮಸ್ಯೆಯಿಂದ ಜಿಲ್ಲಾಧಿಕಾರಿ ಕಚೇರಿ ಸೌಂದರ್ಯ ಕಳೆದುಕೊಳ್ಳುತ್ತಿದೆ. ಪಾರ್ಕಿಂಗ್‌ ಉಸ್ತುವಾರಿಗೆ ಸಿಬ್ಬಂದಿ ನೇಮಿಸಿ ವ್ಯವಸ್ಥೆ ಸರಿಪಡಿಸಬೇಕು.
ಮಂಜುನಾಥ್‌, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT