ಬಸವನಬಾಗೇವಾಡಿ: ಪ್ರತಿ ವರ್ಷ ಡಿ.23 ರಂದು ಸರ್ಕಾರದ ವತಿಯಿಂದ ರೈತ ದಿನಾಚರಣೆ ಆಚರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ನಂತರ ಸ್ಥಳಕ್ಕೆ ಬಂದ ಗ್ರೇಡ್-–2 ತಹಶೀಲ್ದಾರ್ ಪಿ.ಜಿ.ಪವಾರ ಅವರಿಗೆ ಮನವಿ ಸಲ್ಲಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ರೈತರು ದೇಶದ ಬೆನ್ನೆಲುಬು. ದೇಶದ ಜನರಿಗೆ ಅನ್ನ ಹಾಕುವ ಅನ್ನದಾತ. ಅಸಂಘಟಿತ ವರ್ಗದಲ್ಲಿ ಬರುವ ಅವರು ಬೆವರು ಸುರಿಸಿ ದುಡಿಮೆ ಮಾಡಿದಾಗ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ.
ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಹಾಗೂ ರಾಜಕಾರಿಣಿಗಳು ರೈತರ ಪರ ಇದ್ದೇವೆ ಎಂದು ಮಾತನಾಡುತ್ತವೆ. ಯಾವು ಸರ್ಕಾರವು ರೈತರ ದಿನವನ್ನು ಆಚರಿಸಲು ಮುಂದಾಗದೇ ಇರುವುದು ನಾಡಿನ ದೌರ್ಭಾಗ್ಯ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ರೈತರ ದಿನ ಆಚರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.