ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಯಾಗಲಿ: ಆಗ್ರಹ

Last Updated 25 ಡಿಸೆಂಬರ್ 2017, 6:35 IST
ಅಕ್ಷರ ಗಾತ್ರ

ಕೊಲ್ಹಾರ (ಬಸವನಬಾಗೇವಾಡಿ): ವಿಜಯಪುರದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಭಾನುವಾರ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೊಲ್ಹಾರ ಯುಕೆಪಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆಯನ್ನು ಖಂಡಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ನಂತರ ಉಪ ತಹಶೀಲ್ದಾರ ಕೆ.ವೈ.ಹೊಸಮನಿ ಅವರಿಗೆ ಮನವಿ ಸಲ್ಲಿಸಿದರು.

ದಲಿತ ಮುಖಂಡ ಭೀಮಶಿ ಬ್ಯಾಲ್ಯಾಳ ಮಾತನಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯಿಂದಾಗಿ ಇಡಿ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಹೀನ ಕೃತ್ಯ ವೆಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ರಾಜು ಇವಣಗಿ ಇತರರು ಮಾತನಾಡಿದರು. ಸಿಂಧೂರ ಬ್ಯಾಲ್ಯಾಳ. ದಶರಥ ಈಟಿ. ಸಿಡ್ಲಪ್ಪ ಮಾದರ. ಸಿಡ್ಲಪ್ಪ ತಳಗೇರಿ. ಪರಶುರಾಮ ಚಿಮ್ಮಲಗಿ. ಬಾಬು ಬಿಂಗಿ. ಸೋಮಪ್ಪ ಬ್ಯಾಲ್ಯಾಳ. ಮಲ್ಲು ಪೂಜಾರಿ. ವಿಠ್ಠಲ ಬ್ಯಾಲ್ಯಾಳ. ಶಾಂತಪ್ಪ ನಂದಿ ಇತರರು ಇದ್ದರು.

ನಿಡಗುಂದಿಯಲ್ಲಿ ಪ್ರತಿಭಟನೆ
ನಿಡಗುಂದಿ: ವಿಜಯಪುರದಲ್ಲಿ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಖಂಡಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನಾಗರಿಕ ವೇದಿಕೆ ವತಿಯಿಂದ ಪಟ್ಟಣದ ಎಲ್ಲ ಶಾಲೆ ಕಾಲೇಜ್ ವಿದ್ಯಾರ್ಥಿಗಳಿಂದ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಹಳೆ ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹೊಸ ಬಸ್ ನಿಲ್ದಾಣ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ರಸ್ತೆ ನಡೆಸಿದರು. ನಂತರ ಮೃತ ಬಾಲೆಗೆ ಶ್ರದ್ಧಾಂಜಲಿ ಸಲ್ಲಿಸಿ ವಿಶೇಷ ತಹಶೀಲ್ದಾರ್‌ಗೆ ಶಾಲೆ ಬಾಲಕಿಯರು ಮನವಿ ಸಲ್ಲಿಸಿದರು.

ರೈತ ಮುಖಂಡ ಬಸವರಾಜ ಕುಂಬಾರ, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಕೆಂಭಾವಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಸಂಗಣ್ಣ ಕೋತಿನ, ಶಿವಾನಂದ ಮುಚ್ಚಂಡಿ, ಪದ್ಮಾವತಿ ಗುಡಿ ಸೇರಿದಂತೆ ಮತ್ತಿತರರು, ಬಾಲೆಯ ಹತ್ಯಾಚಾರ ಖಂಡಿಸಿ ಅಪರಾಗಳಿಗೆ ಗಲ್ಲು ಶಿಕ್ಷೆ ವಿಸಬೇಕು ಎಂದು ಆಗ್ರಹಿಸಿದರು. ಪಟ್ಟಣದ ಎಲ್ಲ ಶಾಲೆ ಕಾಲೇಜ್‌ ವಿದ್ಯಾರ್ಥಿಗಳು, ನಾರಿಕ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಕಾರ್ಯಕರ್ತರು, ಪಟ್ಟಣದ ನಾಗರಿಕರು ಇದ್ದರು.

ರಾಷ್ಟ್ರೀಯ ಹೆದ್ದಾರಿ ಬಂದ್

ಆಲಮಟ್ಟಿ(ನಿಡಗುಂದಿ): ಅತ್ಯಾಚಾರ, ಕೊಲೆಯಾದ ಬಾಲಕಿಯ ಹತ್ಯೆ ಘಟನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಳೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಲಾಯಿತು.

ಮಂಜುನಾಥ ಹಿರೇಮಠ, ಚಾಂದ್ ನದಾಫ್‌, ಚಂದ್ರಶೇಖರ ಚಲವಾದಿ, ಶೇಖರ ಬಳ್ಳಾರಿ, ಖಲೀಲ್‌ ಪಟೇಲ್‌, ಮೈಬೂಬ್‌ ಡೋಣೂರ, ಸಂತೋಷ ಕನಕ, ವಿರೂಪಾಕ್ಷಿ ಮಾದರ, ಬಸವರಅಜ ಕೊಂಗ, ವಿಠ್ಠಲ ಬಿದರಕುಂದಿ, ರವಿ ಕಾಸರ ಸೇರಿದಂತೆ ಮೊದಲಾದವರು ಇದ್ದರು. ಸ್ಥಳೀಯ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ಇದ್ದರು.

‘ಅಮಾನವೀಯ ಹೇಯ ಕೃತ್ಯ’

ಕೊಲ್ಹಾರ(ಬಸವನಬಾಗೇವಾಡಿ): ವಿಜಯಪುರದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಖಂಡಿಸಿ ಶನಿವಾರ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನಾಡ ಕಚೇರಿಗೆ ಬಂದು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಅಮಾನವೀಯ ಹಾಗೂ ಅತ್ಯಂತ ಖಂಡನೀಯ. ಆರೋಪಿಗಳು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಒಂಬತ್ತನೇ ತರಗತಿ ವಿದ್ಯಾರ್ಥಿನಿ - ರೂಪಾ ಬರಗಿ ಮಾತನಾಡಿ, ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದಳು. ಕೊಲ್ಹಾರ ಪಟ್ಟಣದ ಸರ್ಕಾರಿ ಶಾಲೆಗಳ ಹತ್ತಿರ ಪುಂಡರ ಕಾಟ ಅತಿಯಾಗಿದೆ. ಪಟ್ಟಣದಲ್ಲಿನ ಎಲ್ಲ ಶಾಲೆಗಳಿಗೆ ಸಮರ್ಪಕವಾಗಿ ಆವರಣ ಗೋಡೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿನಿಯರಿಗೆ ಅಭದ್ರತೆ ಕಾಡುತ್ತಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಳು. ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು. ಶೀಲವಂತ ಹಿರೇಮಠದ ಕೈಲಾಸನಾಥ ದೇವರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಲ್ಲಪ್ಪ ಸೊನ್ನದ. ಬನಪ್ಪ ಬಾಲಗೊಂಡ. ಸದಸ್ಯರಾದ ವಿಕ್ರಂ ಭಾರಸ್ಕಳ್. ಮಹಾದೇವ ಕಂಬಾರ. ಚಾಂದ ಗಿರಗಾಂವಿ. ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಕೊರ್ತಿ, ಬಮ್ಮಣ್ಣ ಸೊನ್ನದ. ರಾಜು ವಡ್ಡರ. ರಮೇಶ ಬಾಟಿ. ಮಂಜುನಾಥ ಬಜಂತ್ರಿ. ನವೀನ ಗಿಡ್ಡಪ್ಪಗೋಳ ಇದ್ದರು.

ಟಿಪ್ಪು ಕ್ರಾಂತಿ ಸೇನೆ: ವಿಜಯಪುರದ ಘಟನೆ ಖಂಡಿಸಿ ಟಿಪ್ಪು ಕ್ರಾಂತಿ ಸೇನೆಯ ಕಾರ್ಯಕರ್ತರು ಪಟ್ಟಣದ ಗಾಂಧಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಸಂಘಟನೆ ಅಧ್ಯಕ್ಷ ಇಮಾಮ್ ಮುಲ್ಲಾ. ಮುನ್ನಾ ಅವಟಿ. ಸದ್ದಾಂ ಹೊನ್ಯಾಳ. ವಾಸಿಂ ಗಿರಗಾಂವಿ. ಗೈಬುಸಾಬ್ ಕಂಕರಪೀರ. ಕಾಶೀಂ ವಾಲೀಕಾರ. ಎಂ.ಆರ್.ಕಲಾದಗಿ. ಹಸನ ಮುಲ್ಲಾ. ಫಾರುಕ ಮಕಾನದಾರ ಇದ್ದರು.

ಬಸವನ ಬಾಗೇವಾಡಿ ಬಂದ್ ನಾಳೆ

ಬಸವನಬಾಗೇವಾಡಿ: ವಿಜಯಪುರದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಖಂಡಿಸಿ ಡಿ.26 ರಂದು ಮಂಗಳವಾರ ಬಸವನಬಾಗೇವಾಡಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಭಾನುವಾರ ಪಟ್ಟಣದಲ್ಲಿ ಕರೆಯಲಾಗಿದ್ದ ವಿವಿಧ ಸಂಘಟನೆಗಳ ಪದಾಧಿಕಾರಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ದಲಿತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳ ಒಕ್ಕೂಟ, ರಾಷ್ಟ್ರೀಯ ಬಸವಸೈನ್ಯ, ಬಸವಜ್ಯೋತಿ, ಬಸವ ಬಳಗ, ವಿಶ್ವಬಂಧು ಬಸವ ಸಮಿತಿ, ಎಬಿವಿಪಿ, ಹಾಲುಮತ ಸಂಘ, ಭೋವಿ ಸಮಾಜ, ವಕೀಲರ ಸಂಘ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮುಖಂಡರು ತಿಳಿಸಿದರು.

ಡಿಎಸ್‌ಎಸ್ ಮುಖಂಡರಾದ ಸುರೇಶ ಮಣ್ಣೂರ, ಅಶೋಕ ಚಲವಾದಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಅಂದು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಪಟ್ಟಣದಲ್ಲಿ ಬಂದ್‌ ಆಚರಣೆ ಮಾಡಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುವುದು. ಮಧ್ಯಾಹ್ನ 2ಕ್ಕೆ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಘಟನೆಯನ್ನು ಖಂಡಿಸಲಾಗುವುದು ಎಂದು ಹೇಳಿದರು. ಶ್ರೀಕಾಂತ ಪಟ್ಟಣಶೆಟ್ಟಿ, ಜಾಕೀರ ನದಾಫ್‌, ರಮಜಾನ ಹೆಬ್ಬಾಳ, ರಾಜು ಫಿರಂಗಿ, ತಮ್ಮಣ್ಣ ಕಾನಾಗಡ್ಡಿ, ಸಿದ್ರಾಮ ಪಾತ್ರೋಟಿ ಇತರರು ಮಾತನಾಡಿದರು

ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಪರಶುರಾಮ ದಿಂಡವಾರ, ಗುರು ಗುಡಿಮನಿ, ಶೇಖರ ನಾಗೂರ, ರವಿ ಭೂತನಾಳ, ರಮೇಶ ಮ್ಯಾಗೇರಿ, ಮಹೇಶ ಮಾದರ, ಖಾಜಂಬರ ನದಾಫ್‌, ಕಮಲಸಾಬ್‌ ಕೊರಬು, ಅಜೀಜ ಬಾಗವಾನ, ಸಲೀಮ ಸೈಯ್ಯದ, ಸಂಗಮೇಶ ಓಲೇಕಾರ, ರವಿ ಪಟ್ಟಣಶೆಟ್ಟಿ, ಶ್ರೀಕಾಂತ ಕೊಟ್ರಶೆಟ್ಟಿ, ಸಚಿನ ಕುಳಗೇರಿ, ಅರವಿಂದ ಸಾಲವಾಡಗಿ, ಮಾಹಾಂತೇಶ ಸಾಸಾಬಳ, ಪ್ರಶಾಂತ ಚಲವಾದಿ, ಮುತ್ತಣ್ಣ ಚಲವಾದಿ, ಶಿವಾನಂದ ನಾಗರಾಳ, ಪಿ.ಡಿ.ಭೂತನಾಳ, ಚಂದ್ರಶೇಖರ ನಡಿಗೇರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

* * 

ಹೀನ ಕೃತ್ಯ ವೆಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು
ಭೀಮಶಿ ಬ್ಯಾಲಾಳ
ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT