ಬಳ್ಳಾರಿ: ‘ ಗೋ ಭಾರತೀಯ ಸಂಸ್ಕೃತಿ, ಸಂಪತ್ತು, ಅರ್ಥವ್ಯವಸ್ಥೆಯಾಗಿದ್ದು, ಅದರ ಹತ್ಯೆ ಖಂಡನೀಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಬಿಡಿಎಎ ಸಭಾಂಗಣದಲ್ಲಿ ಮುಂಭಾಗದಲ್ಲಿ ಮಠದ ಭಾರತೀಯ ಗೋ ಪರಿವಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅಭಯ ಗೋಯಾತ್ರೆಯಲ್ಲಿ ಮಾತನಾಡಿದರು.
‘ ಬ್ರಿಟಿಷರು ಗೋ ಹತ್ಯೆಯನ್ನು ತಂದವರು. ಭಾರತೀಯ ಸಂಸ್ಕೃತಿಯನ್ನು ನಾಶ ಮಾಡಬೇಕು ಎಂಬುದು ಅವರ ಮೂಲ ಉದ್ದೇಶವಾಗಿತ್ತು. ಹಾಗಾಗಿ ಅವರು ಗೋ ಹತ್ಯೆಯನ್ನು ಮಾಡುತ್ತಿದ್ದರು. ಇದನ್ನು ಈಗಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದನ್ನು ಭಾರತೀಯರು ಖಂಡಿಸಬೇಕು’ ಎಂದರು.
‘ ರಾಜ್ಯಾದ್ಯಂತ ಗೋ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು , ಅದರಲ್ಲಿ ಸಂಗ್ರಹವಾದ ಹಸ್ತಕ್ಷರಗಳನ್ನು ಪ್ರಧಾನಿ ಮಂತ್ರಿ, ಮುಖ್ಯಮಂತ್ರಿ ಅವರಿಗೆ ಕಳುಹಿಸಿ ಕೊಡಲಾಗುತ್ತದೆ. ನ್ಯಾಯ ಸಮ್ಮತವಾದ ಅರ್ಜಿಗಳನ್ನು ಸರ್ಕಾರ ತಿರಸ್ಕೃತ ಮಾಡುವಂತಿಲ್ಲ. ಅಲ್ಲದೇ, ಕೆಲವರು ರಕ್ತ ಲಖಿತ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಹಾಗಾಗಿ ಎಲ್ಲರೂ ಗೋ ಹತ್ಯೆ ನಿಷೇಧಿಸಲು ಕೈ ಜೋಡಿಸಬೇಕು’ ಎಂದರು.
‘ ಬಳ್ಳಾರಿಯಲ್ಲಿ 3 ಲಕ್ಷ ಹಸ್ತಕ್ಷರಗಳು ಸಂಗ್ರಹವಾಗಿದೆ. ಇದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತಗೊಳ್ಳಬೇಕಾಗಿದೆ. ಗೋ ಹತ್ಯೆಯಿಂದ ದೇಶ ನಾಶವಾಗುತ್ತದೆ. ಅದನ್ನು ತಪ್ಪಿಸಲು ಎಲ್ಲರೂ ಪಣ ತೊಡಬೇಕಾಗಿದೆ’ ಎಂದು ಹೇಳಿದರು.
ಬಳಿಕ ಬಿಡಿಎಎ ಸಭಾಂಗಣದಿಂದ ಆರಂಭವಾದ ಶೋಭಯಾತ್ರೆಯು ಜೈನಪೇಟೆಯ ಮಾರ್ಗವಾಗಿ ಎಚ್.ಆರ್.ಗವಿಯಪ್ಪ ವೃತ್ತವರೆಗೆ ನಡೆಯಿತು. ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಪ್ರಶಾಂತ ಸಾಗರ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಸ್ವಾಮೀಜಿ, ಶಿವಲಿಂಗೇಶ ರುದ್ರಮುನಿ ಸ್ವಾಮೀಜಿ ಇದ್ದರು.