ಕೋಲಾರ: ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಗರದಲ್ಲಿ ಶುಕ್ರವಾರ ಬೀದಿಗಿಳಿದು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ‘ದಲಿತರೆಲ್ಲಾ ಬಂದೂಕು ಕೈಗೆತ್ತಿಕೊಳ್ಳಿ’ ಎಂದು ಕರೆ ನೀಡಿದರು.
‘ಈಗ ನಡೆಯುತ್ತಿರುವ ಅಹಿಂದ ರಾಜಕಾರಣವು ಆತ್ಮದ್ರೋಹದ ರಾಜಕಾರಣ. ದಲಿತರು, ಅಲ್ಪಸಂಖ್ಯಾತರ ಹೆಸರಿನಲ್ಲಿ ಹಿಂದುಳಿದ ವರ್ಗ ಮಾತ್ರ ಮೆರೆಯುತ್ತಿದೆ. ಅದರ ಪ್ರತೀಕವಾಗಿ ಕತ್ತಿ ಲಾಠಿ ಹಿಡಿದಿರುವ ಬಿಜೆಪಿಯವರು ದಲಿತ ಹೆಣ್ಣು ಮಕ್ಕಳನ್ನು ಅನುಭವಿಸುತ್ತಾ ಬಂದಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.
‘ಪ್ರತಿನಿತ್ಯ ಹೆಣ್ಣು ಮಕ್ಕಳನ್ನು ಅನುಭೋಗಿಸುತ್ತಿದ್ದರೂ ಸುಮ್ಮನಿದ್ದೆವು. ಆದರೆ, ಬರ್ಬರವಾಗಿ ಕೊಲ್ಲುತ್ತಿರುವುದನ್ನು ನೋಡಿ ಬಂದೂಕು ಕೇಳುತ್ತಿದ್ದೇವೆ. ನಮ್ಮ ಅಕ್ಕ ತಂಗಿಯರ ಮಾನ ಮತ್ತು ಆತ್ಮ ರಕ್ಷಣೆಗಾಗಿ ಬಂದೂಕು ಬೇಕಾಗಿದೆ. ಸರ್ಕಾರ ಕೊಡಬೇಕು’ ಎಂದು ಆಗ್ರಹಿಸಿದರು.
‘ಬಂಗಾರಪೇಟೆ ತಾಲ್ಲೂಕಿನ ನಾಗಲಾಪಲ್ಲಿಯಲ್ಲಿ ದಲಿತ ಹೆಣ್ಣು ಮಗಳ ಬರ್ಬರ ಹತ್ಯೆ ನಡೆದಾಗ ದಲಿತ ಲೇಖಕರ ಯುವಕರ ಸಂಘದ ನೇತೃತ್ವದಲ್ಲಿ ಜನ ಬೀದಿಗಿಳಿದಿದ್ದರು. ಚರಿತ್ರೆ ನೋಡಿದರೆ ಗೊತ್ತಾಗುತ್ತದೆ. ದಲಿತ ಲೇಖಕರ ಯುವಕರ ಸಂಘವು ದಲಿತ ಚಳವಳಿಯ ತಾಯಿ. ನಾಗಲಾಪಲ್ಲಿ ಹೋರಾಟದಲ್ಲಿ ಬೆರಳೆಣಿಕೆ ಜನರಿದ್ದರು. ಈಗಲೂ ಅಷ್ಟೇ ಜನರಿದ್ದಾರೆ. ಇಷ್ಟೇ ಜನರಿಂದ ಮುಂದೆ ಏನಾಗಬಹುದು ಎಂಬುದನ್ನು ಸಂಕೇತವಾಗಿ ಹೇಳುತ್ತಿದ್ದೇನೆ’ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾರಾಯಣಸ್ವಾಮಿ, ಜಿಲ್ಲಾ ಘಟಕದ ಖಜಾಂಚಿ ಸಿ.ಎಸ್.ನರಸಿಂಹಯ್ಯ, ಈ ನೆಲ ಈ ಜಲ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಿ.ವೆಂಕಟಾಚಲಪತಿ, ಅಹಿಂದ ಕ್ರಾಂತಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷನಿರಂಜನ್, ನಾರಾಯಣಸ್ವಾಮಿ ಇದ್ದರು.