ಮೈಸೂರು: ನಗರದ ಮಸಾಜ್ ಪಾರ್ಲರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಹಾಸ್ಯ ನಟರಾದ ಮಂಡ್ಯ ರಮೇಶ್, ಸಾಧುಕೋಕಿಲ ಹಾಗೂ ಪಾರ್ಲರ್ ಮಾಲೀಕ ರಾಜೇಶ್ ಅವರನ್ನು ಬಂಧಿಸುವಂತೆ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟದ (ಪಿಯುಸಿಎಲ್) ಸತ್ಯಶೋಧನಾ ಸಮಿತಿ ಒತ್ತಾಯಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಪಿಯುಸಿಎಲ್ ವತಿಯಿಂದ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿದ್ದ ಸಮಿತಿಯು ಮಾಹಿತಿ ಪಡೆದಿದ್ದು, ಆರೋಪಿಗಳನ್ನು ತುರ್ತಾಗಿ ಬಂಧಿಸುವಂತೆ ಆಗ್ರಹಿಸಿದೆ.
ಸಂತ್ರಸ್ತ ಮಹಿಳೆಗೆ ಪೂರ್ಣ ಪ್ರಮಾಣದ ಪುನರ್ವಸತಿ ಕಲ್ಪಿಸಬೇಕು. ವೇಶ್ಯಾವಾಟಿಕೆ ನಡೆಸಲು ಮಸಾಜ್ ಪಾರ್ಲರ್ ಎಂಬ ಮುಖವಾಡ ತೊಟ್ಟಿದ್ದು, ಪಾರದರ್ಶಕತೆ
ಕಾಪಾಡಲು ಕಾನೂನು ಕ್ರಮ ಕೈಗೊಳ್ಳಬೇಕು. ಮಸಾಜ್ ಪಾರ್ಲರ್ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಾನೂನು ಬಿಗಿಗೊಳಿಸಬೇಕು. ಪಾರ್ಲರ್ಗಳು ಲೈಂಗಿಕ ತೃಪ್ತಿಯ ತಾಣಗಳಲ್ಲ. ಹಾಗಾಗಿ, ಪುರುಷರಿಗೆ ಮಹಿಳೆಯರು ಮಸಾಜ್ ಮಾಡುವುದನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಸಮಿತಿಯು ಪ್ರಕಟಣೆಯಲ್ಲಿ ಒತ್ತಾಯಿಸಿದೆ.
ಸತ್ಯಶೋಧನಾ ಸಮಿತಿಯಲ್ಲಿ ಶಕ್ತಿಧಾಮದ ಎನ್.ಸುಮನಾ, ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷೆ ಇ.ರತಿರಾವ್, ಸದಸ್ಯರಾದ ಮರಿದಂಡಯ್ಯ ಬುದ್ಧ, ಟಿ.ಆರ್.ನಟರಾಜ್, ಅಖಿಲ ಭಾರತ ಪ್ರಜಾ ವೇದಿಕೆಯ ಜಿ.ಶಾಂತಿ, ಸಮತಾ, ವಿ.ಲಕ್ಷ್ಮಿನಾರಾಯಣ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘದ
ಸೀಮಾ ಇದ್ದರು.