ಚಳ್ಳಕೆರೆ: ರಾಜ್ಯದ ದೊಡ್ಡ ಕಂದಾಯ ತಾಲ್ಲೂಕು ಕೇಂದ್ರ ಎಂದೇ ಗುರುತಿಸಿಕೊಂಡಿರುವ ಚಳ್ಳಕೆರೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಡಿ. 27 ರಂದು ನಿಗದಿಯಾಗಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಪಾವಗಡ – ಚಿತ್ರದುರ್ಗ ರಸ್ತೆ ಇಕ್ಕಲೆಗಳಲ್ಲಿಯೂ ಕಾಮಗಾರಿಗಳಿಗೆ ಅಂತಿಮ ರೂಪ ಕೊಡುತ್ತಿರುವ ಕಾರ್ಮಿಕರು, ಕಟ್ಟಡಗಳಿಗೆ ಸುಣ್ಣ – ಬಣ್ಣ ಬಳಿಯುವ ಚಿತ್ರಣ ಸಾಮಾನ್ಯವಾಗಿದೆ. ಎರಡು ಬದಿ ಹಾಗೂ ನೆಹರೂ ಸರ್ಕಲ್ನಲ್ಲಿ ಸ್ವಾಗತ ಕೋರುವ ಬೃಹತ್ ಕಟೌಟ್ಗಳ ಕಾರುಬಾರು ಗಮನ ಸೆಳೆಯುತ್ತಿದೆ.
ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೆ ಹಾಗೂ ಶಂಕುಸ್ಥಾಪನೆಗೆ ಸ್ವತ; ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದು, ಜತೆಯಲ್ಲಿ ಸಂಬಂಧಪಟ್ಟ ಸಚಿವರು ಭಾಗಿಯಾಗುತ್ತಿದ್ದಾರೆ. ಇಂತಹ ಕಾರ್ಯಕ್ರಮ ಚಳ್ಳಕೆರೆ ಕ್ಷೇತ್ರ ಮಟ್ಟಿಗೆ ನೂತನವಾಗಿದೆ ಎಂಬ ಮಾತು ನಾಗರಿಕರಿಂದ ವ್ಯಕ್ತವಾಗಿದೆ.
ಶಾಸಕ ಟಿ. ರಘುಮೂರ್ತಿ ಮಾಹಿತಿ ನೀಡಿ, ‘ಮುಖ್ಯವಾಗಿ ₹ 10.25 ಕೋಟಿ ವೆಚ್ಚದ ಕೆಎಸ್ಆರ್ಟಿಸಿ ಬಸ್ನಿಲ್ದಾಣ, ₹4 ಕೋಟಿ ವೆಚ್ಚದ ನಿಲ್ದಾಣ ಆವರಣದ ರಸ್ತೆಗಳ ಉದ್ಘಾಟನೆ, ₹ 3 ಕೋಟಿ ವೆಚ್ಚದ ಪ್ರವಾಸಿ ಮಂದಿರ, ₹ 3 ಕೋಟಿ ವೆಚ್ಚದ ಮುಖ್ಯರಸ್ತೆ, ₹ 22 ಕೋಟಿ ವೆಚ್ಚದ ಎಸ್ಡಿಸಿ ಹಾಗೂ ಎಚ್ಎಸ್ಡಿಪಿ ಯೋಜನೆ ರಸ್ತೆಗಳ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ಹೌಸಿಂಗ್ ಬೋರ್ಡ್ ವತಿಯ 22.36 ಕೋಟಿ ಮೊತ್ತದ ನಿವೇಶನ ವಿನ್ಯಾಸ ರಚನೆ ಕಾಮಗಾರಿ, ರೂ 58 ಕೋಟಿ ಮೊತ್ತದ ಹಲವು ಅಭಿವೃದ್ಧಿ ಕಾಮಗಾರಿಗಳು, ₹ 10 ಕೋಟಿ ವೆಚ್ಚದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ ಕಾಮಗಾರಿಗಳು, ₹ 5 ಕೋಟಿ ವೆಚ್ಚದ ಪಾದಚಾರಿ ರಸ್ತೆ ಮತ್ತು ಚರಂಡಿ, ₹ 5.70 ಕೋಟಿ ವೆಚ್ಚದ ವಾಲ್ಮೀಕಿ, ಈಡಿಗ, ಪದ್ಮಶಾಲಿ, ಜೆಜೆ ಭವನ, ಒಕ್ಕಲಿಗ, ಉಪ್ಪಾರ ಭವನಗಳನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಾಲುಮರದ ತಿಮ್ಮಕ್ಕ ಉದ್ಯಾನವನ, ₹ 60 ಲಕ್ಷ ವೆಚ್ಚದ ಬೆಸ್ಕಾಂ ಭವನ, ₹ 8.35 ಕೋಟಿ ಮೊತ್ತದ ಚೆಕ್ಡ್ಯಾಂ, ಕಾಲುವೆಗಳು, ₹ 6.77 ಕೋಟಿ ವೆಚ್ಚದ ಶಾಲಾ ಕೊಠಡಿಗಳು, ಒಂದು ಕೋಟಿ ವೆಚ್ಚದ ರಂಗಮಂದಿರ ಉದ್ಘಾಟನೆ ಇದೇ ವೇಳೆ ನಡೆಯಲಿದೆ ಎಂದು ಹೇಳಿದರು.
ಜತೆಗೆ ಮುಖ್ಯವಾಗಿ ₹ 1.5 ಕೋಟಿ ವೆಚ್ಚದ ಕೆಎಸ್ಆರ್ಟಿಸಿ ಡಿಪೋ ಅಭಿವೃದ್ಧಿ ಕಾರ್ಯ, ₹ 28 ಕೋಟಿ ವೆಚ್ಚದ ಎಸ್ಟಿಪಿ, ಟಿಎಸ್ಪಿ ಮತ್ತು ‘ ಅಪೆಂಡಿಕ್ಷ್’ ಯೋಜನೆ ರಸ್ತೆಗಳಿಗೆ, ಕೊಳಚೆ ನಿರ್ಮೂಲನಾ ಇಲಾಖೆಯಡಿ ₹ 60 ಕೋಟಿ ವೆಚ್ಚದಲ್ಲಿ 6 ಸಾವಿರ ಮನೆಗಳ ನಿರ್ಮಾಣಕ್ಕೆ, ₹ 21 ಕೋಟಿ ವೆಚ್ಚದ ಸಿಆರ್ಎಫ್ ಯೋಜನೆ ರಸ್ತೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು.
ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. 40 ಸಾವಿರ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ. ಜಿಲ್ಲೆಯ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಅನೇಕ ಸಚಿವರು ಭಾಗಿಯಾಗಲಿದ್ದಾರೆ. ಸಿದ್ಧತೆ ಭರದಿಂದ ಸಾಗಿದೆ ಎಂದು ರಘುಮೂರ್ತಿ ಹೇಳಿದರು.
ಸಸ್ಯಹಾರಿ ಊಟ: ಸಿದ್ದರಾಮಯ್ಯ ಅವರಿಗೆ ಊಟಕ್ಕಾಗಿ ರಾಗಿ ಮುದ್ದೆ, ಬಸ್ಸಾರ್, ಸಸ್ಯಹಾರಿ ತಿನಿಸುಗಳನ್ನು, ಸ್ವಲ್ಪ ಮಾಸಾಂಹಾರಿ ‘ಡ್ರೈ’ ತಿನಿಸು ಮಾಡಿಸಲಾಗುವುದು. ಸಸ್ಯಹಾರಿ ಊಟ ಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಾರ್ವಜನಿಕರಿಗೆ ಗೋದಿ ಪಾಯಸ, ಅನ್ನ ಸಾಂಬಾರ್ ಮಾಡಿಸಲಾಗುತ್ತಿದೆ ಎಂದು ರಘುಮೂರ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.