ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರಗತಿಪರ ಧರ್ಮ: ಪಟ್ಟದ್ದೇವರು

Last Updated 26 ಡಿಸೆಂಬರ್ 2017, 9:14 IST
ಅಕ್ಷರ ಗಾತ್ರ

ಕಲಬುರ್ಗಿ: ‘ಒಂದು ಧರ್ಮಕ್ಕೆ ಒಬ್ಬ ಗುರು, ಸಾಹಿತ್ಯ, ಸಂಸ್ಕಾರ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ನೀತಿಶಾಸ್ತ್ರ, ದರ್ಶನಶಾಸ್ತ್ರ, ಪರಂಪರೆ ಮತ್ತು ಸಂಸ್ಕೃತಿ ಇರಬೇಕು. ಲಿಂಗಾಯತ ಧರ್ಮಕ್ಕೆ ಈ ಎಲ್ಲ ಲಕ್ಷಣಗಳಿವೆ. ಹೀಗಾಗಿ ಇದೊಂದು ಪ್ರಗತಿಪರ ಧರ್ಮ’ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಪ್ರತಿಪಾದಿಸಿದರು.

ಕಲಬುರ್ಗಿ ಬಸವ ಸಮಿತಿ ಭಾನುವಾರ ಲಿಂಗೈಕ್ಯ ವೀರಭದ್ರಪ್ಪ ಬಸವಲಿಂಗಪ್ಪ ನಿಷ್ಠೆ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ‘ಕಾಯಕವೇ ಕೈಲಾಸ, ದಾಸೋಹವೇ ದೇವಧಾಮ’ ಎಂದು ಅರುಹಿದ ಶರಣರು ಈ ಧರ್ಮಕ್ಕೆ ವಿನೂತನ ದೃಷ್ಟಿಕೋನ ನೀಡಿದರು. ಈ ಧರ್ಮಕ್ಕೆ ಬದ್ಧರಾಗಿರಬೇಕಾದವರು ಬಸವನಿಷ್ಠೆ, ವಚನನಿಷ್ಠೆ, ಲಿಂಗನಿಷ್ಠೆ ಮತ್ತು ಸತ್ಸಂಗಗಳನ್ನು ಪಾಲಿಸುವುದು ಅನಿವಾರ್ಯ’ ಎಂದರು.

‘12ನೇ ಶತಮಾನದಲ್ಲಿ ಶರಣರು ಮಾನವನ ವಿಕಾಸಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಮನಗಂಡು ಅನುಭವ ಮಂಟಪ ಸ್ಥಾಪಿಸಿದರು. ಈ ಮುಖಾಂತರ ಹೊಸ ಧರ್ಮಕ್ಕೆ ನಾಂದಿ ಹಾಡಿದರು. ಅನೇಕ ಜಾತಿಗಳು, ಗೊಂದಲಗಳ ಮಧ್ಯೆ ಸಿಲುಕಿದ್ದ ಸಮಾಜವನ್ನು ಲಿಂಗಾಯತ ಧರ್ಮ ಸ್ಥಾಪನೆ ಮಾಡುವ ಮೂಲಕ ಸರ್ವರನ್ನು ಒಗ್ಗೂಡಿಸಿದರು’ ಎಂದು ಅಭಿಪ್ರಾಯಪಟ್ಟರು.

‘ಧರ್ಮ ವ್ಯಕ್ತಿಯನ್ನು ಉತ್ತಮ ಮಾರ್ಗದಲ್ಲಿ ಬೆಳೆಸುತ್ತದೆ. ವ್ಯಕ್ತಿಗೆ ಭೌತಿಕ ವಿಕಾಸದ ಜತೆಗೆ ನೈತಿಕ ಹಾಗೂ ಆಧ್ಯಾತ್ಮಿಕ ಉತ್ಥಾನಗಳ ಕಡೆ ಕೊಂಡೂಯ್ಯುತ್ತದೆ. ಸಮಾಜವನ್ನು ವ್ಯವಸ್ಥಿತ ರೀತಿಯಲ್ಲಿ ಕಟ್ಟುವುದೇ ಧರ್ಮದ ಮೂಲ ಆಶಯವಾಗಿದೆ’ ಎಂದು ತಿಳಿಸಿದರು.

ಸಮಿತಿಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ ಮಾತನಾಡಿ, ಸುರಪುರ ಸಂಸ್ಥಾನದಲ್ಲಿ ನಿಷ್ಠೆ ಮನೆತನದ ವೀರಪ್ಪ ಮತ್ತು ಕಡ್ಲೆಪ್ಪ ಎಂಬ ಮಂತ್ರಿಗಳಿಂದ ಅನೇಕ ಜನಪರ ಕೆಲಸಗಳಾದವು. ಅವರು ಹಲವೆಡೆ ದಾಸೋಹ ಮಠಗಳನ್ನು ನಿರ್ಮಿಸಿದರು. ಕುಡಿಯುವ ನೀರಿನ ಬಾವಿಗಳನ್ನು ತೋಡಿಸಿದರು, ಕೆರೆ ಕಟ್ಟೆಗಳನ್ನು ನಿರ್ಮಿಸಿದರು’ ಎಂದು ಅವರು ವಿವರಿಸಿದರು.

ಬಸವ ಸಮಿತಿಯ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ದತ್ತಿ ದಾಸೋಹಿಗಳಾದ ಶರಣಬಸಪ್ಪ ನಿಷ್ಠೆ, ಡಾ. ಮಲ್ಲಿಕಾರ್ಜುನ ನಿಷ್ಠೆ ಹಾಗೂ ಡಾ. ನಿರಂಜನ ನಿಷ್ಠೆ ಪಾಲ್ಗೊಂಡಿದ್ದರು. ಎಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT