ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಸಂಘಟನೆಗಳಿಂದ ಸರಣಿ ಪ್ರತಿಭಟನೆ

Last Updated 26 ಡಿಸೆಂಬರ್ 2017, 9:47 IST
ಅಕ್ಷರ ಗಾತ್ರ

ಕೊಪ್ಪಳ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಸೋಮವಾರ ಅಶೋಕ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌, ದಲಿತ ಸಂಘರ್ಷ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆಯಿಂದ ಪತ್ರಿಭಟನೆ ನಡೆಯಿತು.

ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ ಮಾತನಾಡಿ, ದೇಶದ ಸಂವಿಧಾನ ಬದಲಾಯಿಸಬೇಕು. ವಿಚಾರವಾದಿಗಳಿಗೆ ತಂದೆ–ತಾಯಿ ಯಾರೆಂಬುದು ಗೊತ್ತಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಎಲ್ಲ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಜಾತಿ, ಜನಾಂಗಗಳು ಇರುವ ದೇಶ ಭಾರತ. ಇಂತಹ ಏಕತೆಯ ದೇಶದಲ್ಲಿ ಇಂತಹ ಕೋಮುವಾದಿಗಳು ಇರಬಾರದು. ಇವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಸಮಾನತೆ ತರುವಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ. 'ಸಂವಿಧಾನ ಬದಲಿಸಬೇಕು. ನಾವು ಬದಲಾಯಿಸುತ್ತೇವೆ' ಎನ್ನುವ ಹೇಳಿಕೆಮೂಲಕ ಹೆಗಡೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನಿಸುತ್ತಿದ್ದಾರೆ. ಬೇರೆ ದೇಶದವರು ನಮ್ಮ ಸಂವಿಧಾನವನ್ನು ಮೆಚ್ಚಿದ್ದಾರೆ. ಆದರೆ ಇವರು ಮಾತ್ರ ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರ, ದಲಿತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಮರುಕಳಿಸಿದರೆ ಮತ್ತು ಸಂವಿಧಾನ ಬದಲಾಯಿಸಿದರೆ ದೇಶದಲ್ಲಿ ರಕ್ತಪಾತ ಆಗುವುದರಲ್ಲಿ ಸಂದೇಹವಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಮಾತನಾಡಿ, ಸಂವಿಧಾನವನ್ನು ಜಗತ್ತೇ ಒಪ್ಪಿಕೊಂಡಿದೆ. ಆದರೆ ಇವರು ಅದನ್ನು ಬದಲಿಸುತ್ತೇವೆ ಎನ್ನುತ್ತಿದ್ದಾರೆ. ಅದಕ್ಕೆ ದೇಶದ ಎಲ್ಲ ಜನತೆ ಒಪ್ಪಬೇಕು. ಅವಹೇಳನಕಾರಿ ಹೇಳಿಕೆಗಳಿಂದ ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್‌ ಜುಲ್ಲು ಖಾದ್ರಿ, ನಗರಸಭೆ ಸದಸ್ಯರಾದ ರಾಮಣ್ಣ ಹದ್ದಿನ್, ಬಾಳಪ್ಪ ಬಾರಕೇರ್‌, ಭಾಗ್ಯನಗರ ಪಟ್ಟನ ಪಂಚಾಯಿತಿ ಸದಸ್ಯರಾದ ಸವಿತಾ ಗೋರಂಟ್ಲಿ, ಹುಲಿಗೆಮ್ಮ ತಟ್ಟಿ, ಹೊನ್ನುರಾಸಾಬ್‌ ಬೈರಾಪುರ, ರಮೇಶ ಹ್ಯಾಟಿ, ಮುಖಂಡರಾದ ಗವಿಸಿದ್ದಪ್ಪ ಮುದಗಲ್, ಕಾಟನ್‌ ಪಾಷಾ, ಯಮನಪ್ಪ ಕಬ್ಬೇರ್‌, ಅಂಬ್ರೇಶ್‌ ಹಣಗಿ, ವಕ್ತಾರ್‌ ಅಕ್ಬರ್‌ ಪಾಪಾ ಪಲ್ಟನ್‌ ಇದ್ದರು.

ಮಾನವ ಬಂಧುತ್ವ ವೇದಿಕೆಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ಮುತ್ತುರಾಜ್‌ ಕುಷ್ಟಗಿ, ಕೇಂದ್ರ ಸಚಿವರ ಇಂತಹ ಅವಹೇಳನಕಾರಿ ಹೇಳಿಕೆ ಅವರ ಅನಾಗರಿಕತೆ ತೋರಿಸುತ್ತದೆ. ಸಂವಿಧಾನವನ್ನು ಬದಲಾಯಿಸಬೇಕು ಎನ್ನುತ್ತಿರುವ ಅವರು ನಾಯಿ ಇದ್ದಂತೆ. ಅಲ್ಲದೇ ಪ್ರಧಾನಿಗಳು ಹಾಗೂ ಬಿಜೆಪಿ ಅಧ್ಯಕ್ಷರು ಇಂತಹ ಹೇಳಿಕೆ ನೀಡುತ್ತಿದ್ದರು ಸುಮ್ಮನಿದ್ದಾರೆ. ಈ ಮೂಲಕ ಇವರೆಲ್ಲ ಸೇರಿ ನಾಟಕ ಮಾಡುತ್ತಿದ್ದಾರೆ ಎಂದರು.

ಅಂಬೇಡ್ಕರ್‌ ಅವರು ಮನಯಸ್ಪೃತಿ ದಯಿಸಿದ ದಿನ ಹಾಗಾಗಿ ವೇದಿಕೆಯಿಂದ ಮನುಸ್ಪೃತಿಯನ್ನು ದಯಿಸಿದರು. ವೇದಿಕೆ ರಮೇಶ ಬೆಲ್ಲದ್‌, ಯಲ್ಲಮ್ಮ ಬಳಾನೂರು, ಶಿವಾನಂದ ಹೊಸಮನಿ, ಮಂಜುನಾಥ ದೊಡ್ಡಮನಿ, ರಾಮಣ್ಣ ಕಲ್ಲನವರ, ಕಾಶಪ್ಪ ಚಲವಾದಿ, ಅಲ್ಲಾಬಕ್ಷಿ ಇದ್ದರು. ದಲಿತ ಸಂಘರ್ಷ ಸಮಿತಿಯಿಂದಲೂ ಪ್ರತಿಭಟನೆ ನಡೆಯಿತು. ಅನಂರಕುಮಾರ ಹೆಗ್ಡೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT