ಹುಣಸೂರು: ಹುಲಿ ಗಣತಿಗೆ ಆಧುನಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ಡೆಹರಾಡೂನ್ ಅರಣ್ಯ ಸಂಶೋಧನಾ ವಿಭಾಗದ ಅಧಿಕಾರಿಗಳು ಆಯ್ದ ಸಿಬ್ಬಂದಿಗೆ ಡಿ.1ರಿಂದ 7ರವ ರೆಗೆ ವಿಶೇಷ ತರ ಬೇತಿ ನೀಡಿದ್ದಾರೆ ಎಂದು ನಾಗರ ಹೊಳೆ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ತಿಳಿಸಿದರು.
‘ಭಾರತೀಯ ಹುಲಿ ಗಣತಿ– 2018’ ಆರಂಭಕ್ಕೂ ಮೊದಲೇ ತಮಿಳು ನಾಡಿನ ಮಧುಮಲೈ ಮತ್ತು ರಾಜ್ಯದ ಬಂಡೀಪುರ ಉದ್ಯಾನದ ಸಿಬ್ಬಂದಿಗೆ ಆಧುನಿಕ ತಂತ್ರಜ್ಞಾನ ಬಳಸಿ ಗಣತಿ ನಡೆಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಕಾಗದ ಬಳಸದೆ ಮಾಹಿತಿ ಮತ್ತು ತಂತ್ರಜ್ಞಾನ ಬಳಸಿಕೊಂಡು ಮಾಹಿತಿ ಸಂಗ್ರಹಿಸಿಡುವ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಬಂಡೀಪುರ ಮತ್ತು ನಾಗರಹೊಳೆ ಉದ್ಯಾನದ ಸಿಬ್ಬಂದಿಗೆ ಕಾರ್ಯಾಗಾರ ನಡೆಸಿ ತರಬೇತಿ ನೀಡಲಿದ್ದಾರೆ ಎಂದು ಹೇಳಿದರು.
ಆ್ಯಪ್: ಈ ಮೊದಲು ಸ್ವಯಂಚಾಲಿತ ಕ್ಯಾಮೆರಾ ಅಳವಡಿಸಿ ಹುಲಿ ಗಣತಿ ಮಾಡಲಾಗುತ್ತಿತ್ತು. ಈಗ ಡೆಹರಾಡೂನ್ ಕೇಂದ್ರ ‘ಎಂ – ಸ್ಟ್ರೈಪ್’ ಎಂಬ ಆ್ಯಪ್ ಸಿದ್ಧಗೊಳಿಸಿದ್ದು, ದಕ್ಷಿಣ ಭಾರತದ ಹುಲಿ ಸಂರಕ್ಷಿತಾರಣ್ಯಗಳ ಸಿಬ್ಬಂದಿಗೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ನಾಗರಹೊಳೆಯಲ್ಲಿ 400 ಜೊತೆ ಕ್ಯಾಮೆರಾ ಬಳಸಿ ಗಣತಿ ಮಾಡಲಾಗುತ್ತಿತ್ತು. ಹೊಸ ಆ್ಯಪ್ ಬಂದಿರುವುದರಿಂದ 360 ಜೊತೆ ಕ್ಯಾಮೆರಾ ಬಳಸಲಾಗುವುದು ಎಂದು ಮಾಹಿತಿ ನೀಡಿದರು. ರಾಜ್ಯ ಅರಣ್ಯ ಇಲಾಖೆಯಿಂದ ನಾಗರಹೊಳೆಯಲ್ಲಿ ಮಾತ್ರ ನ.15 ರಿಂದಲೇ ಹುಲಿ ಗಣತಿ ಆರಂಭವಾಗಿದ್ದು, ಜ.15ರ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.
ಚಿತ್ರ ಪ್ರದರ್ಶನ ಇಂದಿನಿಂದ
ಹುಣಸೂರು: ತಾಲ್ಲೂಕಿನ ಕಡೇಮನುಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ರಚಿಸಿದ ಚಿತ್ರ ಪ್ರದರ್ಶಿಸುವ ‘ಚಿತ್ರದ ಚಿಗುರು’ ಕಾರ್ಯಕ್ರಮ ಡಿ.27ರಿಂದ ಮೂರು ದಿನ ನಡೆಯಲಿದೆ ಎಂದು ಚಿತ್ರಕಲಾ ಶಿಕ್ಷಕ ವೀರೇಶ್ ತಿಳಿಸಿದ್ದಾರೆ.
8, 9 ಮತ್ತು 10ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 50 ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರಲ್ಲಿ ಪ್ರತಿಭೆ ಹೊರತರಲಾಗಿದೆ ಎಂದರು.
ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ, ಅವರಿಂದಲೇ ಕಲ್ಪನೆ ಗಳಿಗೆ ಬಣ್ಣ ತುಂಬಿಸಲಾಗಿದೆ. ಅವರಿಗೆ ತಾವು ಕಾಣುವ ಪ್ರಕೃತಿ ಚಿತ್ರ ಬಿಡಿಸುವ ಬಗ್ಗೆ, ಪ್ರಾಣಿ– ಪಕ್ಷಿ, ಜನಜೀವನ ಕುರಿತ ಚಿತ್ರ ಬರೆಯುವ ಬಗ್ಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.